ಕುಂದಾಪುರ: ಉಡುಪಿ ಜಿಲ್ಲಾಧಿಕಾರಿ ಡಾ.ಕೂರ್ಮರಾವ್ ಜಿಲ್ಲೆಯ 209 ಶತಾಯುಷಿ ಮತದಾರರಿಗೆ ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡುವಂತೆ ಅವರ ಮನೆಗೆ ತೆರಳಿ ವಿಶೇಷ ಆಹ್ವಾನ ನೀಡಿದ್ದಾರೆ.
ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮದ ಉಪ್ಪಿನಕುದ್ರು ನಿವಾಸಿ 101 ವರ್ಷ ಪ್ರಾಯದ ಆಲಿಸ್ ಅವರಿಗೆ ಆಮಂತ್ರಣ ಪತ್ರಿಕೆ ನೀಡುವ ಮೂಲಕ ಈ ವಿಶೇಷ ಅಭಿಯಾನಕ್ಕೆ ಚಾಲನೆಯನ್ನು ನೀಡಿದರು.
ಈ ಸಂದರ್ಭ ಅವರು ಮಾತನಾಡಿ, ಸ್ವೀಪ್ ಸಮಿತಿ ಮೂಲಕ ವಿಶೇಷ ಆಮಂತ್ರಣ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಉಪ್ಪಿನಕುದ್ರು ನಿವಾಸಿ ಶತಾಯುಷಿ ಅಜ್ಜಿಯನ್ನು ಭೇಟಿ ಮಾಡಿ ಅಭಿಯಾನಕ್ಕೆ ಚಾಲನೆಯನ್ನು ನೀಡಲಾಗಿದ್ದು ಅವರನ್ನು ಗೌರವಿಸಿ ಮತದಾನಕ್ಕೆ ಆಹ್ವಾನಿಸಿರುವುದು ಅತ್ಯಂತ ಸಂತಸ ನೀಡಿದೆ ಎಂದರು.
ಶತಾಯುಷಿ ಮತದಾರು ನಮ್ಮ ಜಿಲ್ಲೆಯ ಹೆಮ್ಮೆ.ಜಿಲ್ಲೆಯ ಎಲ್ಲ ಮತದಾರರು ಅವರಿಂದ ಸ್ಫೂರ್ತಿ ಪಡೆದು ಮತದಾನದಲ್ಲಿ ಭಾಗವಹಿಸಬೇಕೆಂದು ಕರೆಕೊಟ್ಟರು.
ಈ ಸಂದರ್ಭ ಪ್ರಥಮ ಬಾರಿಗೆ ಮತ ಚಲಾಯಿಸುವ ಹಕ್ಕು ಪಡೆದುಕೊಂಡಿರುವ ನಿಶಾಂತ್ (19) ಅವರಿಗೆ ವಿಶೇಷ ಆಹ್ವಾನ ನೀಡಲಾಯಿತು. ಜಿ.ಪಂ.ಸಿಇಒ ಪ್ರಸನ್ನ ಎಚ್,ಸಹಾಯಕ ಕಮಿಷನರ್ ರಶ್ಮಿ ಎಸ್.ಆರ್., ತಹಸೀಲ್ದಾರ್ ಶೋಭಾಲಕ್ಷ್ಮೀ, ತಾಪಂ ಸಿಇಒ ಮಹೇಶ್ ಹೊಳ್ಳ,ತಲ್ಲೂರು ಪಿಡಿಒ ನಾಗರತ್ನ,ವಿಎ ಹರೀಶ್, ಬಿಎಲ್ಓ ನಾರಾಯಣ್ ಉಪಸ್ಥಿತರಿದ್ದರು.