ಉಡುಪಿ: ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52 ರ ಬಾಳೆಬರೆ ಘಾಟ್ ನಲ್ಲಿ ಕಾಂಕ್ರೀಟ್ ಪೇವ್ ಮೆಂಟ್ ಕಾಮಗಾರಿಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಬಾಳೆಬರೆ ಘಾಟ್ ನಲ್ಲಿ ವಾಹನ ಸಂಚಾರಕ್ಕೆ ಇದ್ದ ನಿಷೇಧವನ್ನು 10 ದಿನಗಳ ಕಾಲ ಹೆಚ್ಚವರಿಯಾಗಿ ವಿಸ್ತರಿಸಿ ಉಡುಪಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಈ ಮೊದಲು ಎಪ್ರಿಲ್ 5 ರ ವರೆಗೆ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಇದೀಗ ಕಾಮಗಾರಿ ವಿಳಂವಾಗಿರುವ ಕಾರಣ ಎಪ್ರಿಲ್ 15 ರವರೆಗೆ ನಿಷೇಧ ಮುಂದುವರೆಸಲಾಗಿದ್ದು, ವಾಹನ ಸವಾರರು ಬದಲಿ ರಸ್ತೆಯಲ್ಲಿ ಸಂಚಾರ ನಡೆಸಲು ಆದೇಶಿಸಲಾಗಿದೆ.
ತೀರ್ಥಹಳ್ಳಿ ಮೂಲಕ ಕುಂದಾಪುರ ಕಡೆಗೆ ಸಂಚರಿಸುವ ಲಘು ವಾಹನಗಳು ತೀರ್ಥಹಳ್ಳಿ – ಹಾಲಾಡಿ – ಬಸ್ರೂರು – ಕುಂದಾಪುರ, ಭಾರೀ ವಾಹನಗಳು ತೀರ್ಥಹಳ್ಳಿ- ಹೆಬ್ರಿ – ಉಡುಪಿ – ಕುಂದಾಪುರ ಮೂಲಕ ಸಂಚರಿಸಲು ಸೂಚಿಸಲಾಗಿದೆ. ತೀರ್ಥಹಳ್ಳಿ – ಯಡೂರು – ಹುಲಿಕಲ್ – ಕುಂದಾಪುರ ಕಡೆಗೆ ಹೋಗುವ ವಾಹನಗಳು ತೀರ್ಥಹಳ್ಳಿ – ಯಡೂರು – ಮಾಸ್ತಿಕಟ್ಟೆ- ನಗರ – ಕೊಲ್ಲೂರು –ಕುಂದಾಪುರ ಮೂಲ ಸಂಚರಿಸಬೇಕು. ಹೊಸನಗರ – ನಗರ – ಕೊಲ್ಲೂರು – ಕುಂದಾಪುರ ರಸ್ತೆಯಲ್ಲಿ ಭಾರಿ ಸರಕು ವಾಹನಗಳಾದ ಮಲ್ಟಿ ಆಕ್ಸೆಲ್ ಹೊರತುಪಡಿಸಿ ಲಘು ಸರಕು ವಾಹನಗಳು ಮಾತ್ರ ಸಂಚರಿಸಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.