ಉಡುಪಿ: ಸಾಮಾನ್ಯ ಕಾರ್ಯಕರ್ತನನ್ನು ಬಿಜೆಪಿ ಪಕ್ಷ ಗುರುತಿಸಿರುವುದಕ್ಕೆ ನಾನೇ ಉದಾಹರಣೆ. ಪಕ್ಷ ಕೊಟ್ಟ ಸಲಹೆ ಸೂಚನೆಯನ್ನು ಪಾಲಿಸುತ್ತೇನೆ. ರಾಷ್ಟ್ರೀಯ ಚಿಂತನೆ ಹಿಂದೂ ಸಮಾಜದ ರಕ್ಷಣೆ ನನ್ನ ಧ್ಯೇಯ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಂತ್ರವನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತೇನೆ ಎಂದು ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಹೇಳಿದರು.
ಅಭ್ಯರ್ಥಿಯಾಗಿ ಘೋಷಣೆ ಆದ ಬಳಿಕ ಉಡುಪಿ ಬಿಜೆಪಿ ಕಚೇರಿಗೆ ಮೊದಲ ಬಾರಿ ಭೇಟಿ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಒಂದು ಕ್ಷೇತ್ರಕ್ಕೆ ಸೀಮಿತವಾಗಿ ಕೆಲಸ ಕಾರ್ಯಗಳನ್ನು ಮಾಡಿಲ್ಲ. ಪಕ್ಷದ ಚಟುವಟಿಕೆಗಳನ್ನು ಬಹಳ ಪ್ರಾಮಾಣಿಕವಾಗಿ ನಾನು ಮಾಡಿದ್ದೇನೆ. ನಾನು ಹಿಂದೂ – ನಾನು ಒಂದು ಜಾತಿಗೆ ಸೀಮಿತವಾಗಿಲ್ಲ. ನಾನು ಹುಟ್ಟುವಾಗ ಮೊಗವೀರ ಜಾತಿಯಲ್ಲಿ ಹುಟ್ಟಿದ್ದೇನೆ ಅದಕ್ಕೆ ನ್ಯಾಯ ಕೊಡುತ್ತೇನೆ ಎಂದರು.
ಶಾಸಕ ರಘುಪತಿ ಭಟ್ ಅವರನ್ನು ಇವತ್ತು ಭೇಟಿಯಾಗುತ್ತೇನೆ. ಬಹಳ ವರ್ಷಗಳಿಂದ ಅವರ ಜೊತೆ ಕೆಲಸ ಮಾಡ್ತಾ ಇದ್ದೇನೆ. ರಘುಪತಿ ಭಟ್ ಮಾರ್ಗದರ್ಶನ ಸಹಕಾರದಲ್ಲಿ ಚುನಾವಣೆಯನ್ನು ಎದುರಿಸುತ್ತೇನೆ. ಶಾಸಕರ ಜೊತೆ ಜನಗಳ ಬಳಿ ಹೋಗಿ ಮತಪ್ರಚಾರ ಮಾಡುತ್ತೇನೆ. ದೇಶದಲ್ಲಿ ಐವತ್ತು ಶೇಕಡ ಹಿಂದುಳಿದ ವರ್ಗದವರಿದ್ದಾರೆ. ಕಾಂಗ್ರೆಸ್ ಹಿಂದುಳಿದ ವರ್ಗವನ್ನು ಕಡೆಗಣಿಸಿತ್ತು. ಮತ ಬ್ಯಾಂಕ್ ಆಗಿ ಬಳಸ್ತಿತ್ತು. ಕಾಂಗ್ರೆಸ್ ಹಿಂದುಳಿದ ವರ್ಗ ದಲಿತರನ್ನು ಸೈಡ್ ಲೈನ್ ಮಾಡಿದ್ದರು. ಮೋದಿ ಎಲ್ಲ ವರ್ಗದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ನನ್ನ ವಿಚಾರ ನನ್ನ ಸಿದ್ಧಾಂತವನ್ನು ಮುಂದಿಟ್ಟುಕೊಂಡು ನಾನು ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು.