ಕುಂದಾಪುರ: ಮಕರ ಸಂಕ್ರಾತಿ ಸಮೀಪಿಸುತ್ತಿರುವ ಹೊತ್ತಿನಲ್ಲಿ ಹೆಮ್ಮಾಡಿಯಲ್ಲಿ ಸೇವಂತಿಗೆ ಹೂವಿನ ಪರಿಮಳ ಘಮ ಘಮಿಸುತ್ತಿದೆ ಗದ್ದೆಯಲ್ಲಿ ಅರಳಿ ನಿಂತ ಹಳದಿ ಬಣ್ಣದ ಸೇವಂತಿಗೆ ಹೂವಿನ ತೋಟವನ್ನು ನೋಡುವುದೆ ಕಣ್ಣಿಗೆ ಹಬ್ಬ.
ಮಾರಣಕಟ್ಟೆ ಜಾತ್ರೆ ದಿನದಂದು ಹೆಮ್ಮಾಡಿ ಭಾಗದ ಸೇವಂತಿಗೆ ಬೆಳೆಗಾರ ರೈತರು ಬುಟ್ಟಿಯಲ್ಲಿ ಹೂವನ್ನು ತುಂಬಿಕೊಂಡು ಶ್ರೀ ಬ್ರಹ್ಮಲಿಂಗೇಶ್ವರ ದೇವರಿಗೆ ಸಮರ್ಪಿಸುವುದು ಅನಾದಿ ಕಾಲಂದಿಲೂ ನಡೆದು ಬಂದತಂಹ ಆಚರಣೆ ಆಗಿದೆ.
ರೈತರು ಗದ್ದೆಯಲ್ಲಿ ಬೆಳೆದ ಸೇವಂತಿಗೆ ಹೂವನ್ನು ಬ್ರಹ್ಮಲಿಂಗೇಶ್ವರ ದೇವರಿಗೆ ಅರ್ಪಣೆ ಮಾಡಿದ ನಂತರವೆ ಬೇರೆ ಕಡೆ ವ್ಯಾಪಾರವನ್ನು ಮಾಡುತ್ತಾರೆ.
ಆರಾಧ್ಯ ದೇವ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಮುಡಿಗೆರಲು ಹೆಮ್ಮಾಡಿಯಲ್ಲಿ ಸೇವಂತಿಗೆ ಹೂ ಅರಳಿ ನಿಂತಿದೆ,ದೇವರಿಗೆ ಹೂವನ್ನು ಅರ್ಪಿಸಲು ರೈತರು ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ.ಹೂವಿನ ಇಳುವರಿ ಕೂಡ ಈ ಬಾರಿ ಉತ್ತಮವಾಗಿದೆ.ಸೇವಂತಿಗೆ ಹೂವಿನ ಜೊತೆಯಲ್ಲಿ ಕುಂಕುಮ ಬಣ್ಣದ ಸೇವಂತಿಗೆ ಹೂವನ್ನು ಕೆಲವು ರೈತರು ಬೆಳೆದಿರುವುದು ವಿಶೇಷವಾಗಿದೆ.
ಜನವರಿ 14 ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರಸಿದ್ಧ ಮಾರಣಕಟ್ಟೆ ಜಾತ್ರೆ ನಡೆಯಲಿದೆ.