ಕುಂದಾಪುರ: ಸಣ್ಣ ಮೀನುಗಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಗಂಗೊಳ್ಳಿ ಅಳಿವೆ ಬಾಗಿಲಿನ ಸಮುದ್ರ ತೀರದಲ್ಲಿ ಸುಮಾರು 4,000 ಕುರುಡಿ ಮೀನಿನ ಮರಿಗಳನ್ನು ಮಂಗಳವಾರ ಬಿಡಲಾಯಿತು.
ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ಸಮುದ್ರ ತೀರದಲ್ಲಿ ಕುರುಡಿ ಮೀನಿನ ಮರಿಗಳನ್ನು ನೀರಿಗೆ ಬಿಟ್ಟು ಮಾತನಾಡಿ ಪ್ರತಿಕೂಲ ಹವಾಮಾನ ಮತ್ತು ಬದಲಾದ ವ್ಯವಸ್ಥೆಯಲ್ಲಿ ಇತ್ತಿಚಿನ ದಿನಗಳಲ್ಲಿ ಸಮುದ್ರದಲ್ಲಿ ಮೀನಿನ ಸಂತತಿ ನಾಶವಾಗುತ್ತಿದೆ.ಮೀನುಗಾರರ ಹಿತ ದೃಷ್ಟಿಯಿಂದ ಸಂತಾನಭಿವೃದ್ಧಿಯೊಂದಿಗೆ ದ್ವಿಗುಣಗೊಳ್ಳುವ ಕುರುಡಿ ಮೀನಿನ ಮರಿಗಳನ್ನು ಸಮುದ್ರಕ್ಕೆ ಬೀಡಲಾಗಿದೆ ಇದು ಸಣ್ಣ ಮೀನುಗಾರರಿಗೆ ಅನುಕೂಲವಾಗುವ ದೃಷ್ಟಿಕೋನವನ್ನು ಹೊಂದಿದೆ ಎಂದು ಹೇಳಿದರು.
ಗಂಗೊಳ್ಳಿ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ,ಸದಸ್ಯರಾದ ನಾಗರಾಜ ಖಾರ್ವಿ,ಬಸವ ಖಾರ್ವಿ,ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ,ಹಿರಿಯ ಮೀನುಗಾರರಾದ ರಾಮಪ್ಪ ಖಾರ್ವಿ,ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿವೇಕ್,ಉಪ ನಿರ್ದೇಶಕ ಶಿವಕುಮಾರ್,ಬಂದರು ನಿರ್ದೇಶಕ ಕುಮಾರ ಸ್ವಾಮಿ,ಎಡಿಎಫ್ ಸುಮಲತಾ ಹಾಗೂ ಸ್ಥಳೀಯ ಮೀನುಗಾರರು ಉಪಸ್ಥಿತರಿದ್ದರು.
ಕುಂದಾಪುರ ತಾಲೂಕಿನ ಗಂಗೊಳ್ಳಿ ಸೇರಿದಂತೆ ಬೈಂದೂರು ತಾಲೂಕಿನ ಕೊಡೇರಿ ಕಡಲ ತೀರದಲ್ಲಿ 4000, ಪಡುವರಿ ಅಳಿವೆಕೋಡಿಯಲ್ಲಿ 4000 ಹಾಗೂ ಶಿರೂರು ಅಳ್ವಿಗದ್ದೆಯಲ್ಲಿ 4,000 ಒಟ್ಟು 16,800 ಕುರುಡಿ ಮೀನಿನ ಮರಿಗಳನ್ನು ಕಡಲ ತೀರಕ್ಕೆ ಬಿಡಲಾಗಿದೆ.ಸಮುದ್ರ ನೀರಿಗೆ ಒಗ್ಗಿಕೊಂಡು ಮೀನಿನ ಮರಿ ಬೆಳವಣಿಗೊಂಡು ಸಂತಾಭಿವೃದ್ಧಿಯಲ್ಲಿ ತೊಡಗಿಕೊಂಡರೆ ಮೀನಿನ ಸಂತತಿ ವೃದ್ಧಿಯಾಗುವ ನಿರೀಕ್ಷೆ ಇದೆ.