ಕಾರ್ಕಳ : ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಜಡಿಮಳೆಯಿಂದಾಗಿ ಸ್ವರ್ಣೆ ನದಿ ಉಕ್ಕಿ ಹರಿಯುತ್ತಾ ಹಿರಿಯಡ್ಕದ ಬಜೆಯ ಅಣೆಕಟ್ಟಿಗೆ ಸೇರುತ್ತಿದೆ. ಪಶ್ಚಿಮಘಟ್ಟದ ತಪ್ಪಲು ತೀರಾ ಪ್ರದೇಶವಾಗಿರುವ ಮಾಳ ಮಲ್ಲಾರುನಲ್ಲಿ ಉಗಮಿಸುವ ಸ್ವರ್ಣೆ ನದಿಯು ಮಳೆಯಿಂದಾಗಿ ಒಳ ಹರಿವು ಹೆಚ್ಚಿದೆ.
ಪ್ರಸಕ್ತ ವರ್ಷಾವಧಿಯಲ್ಲಿ ಕಾರ್ಕಳ ತಾಲೂಕಿನ ದುರ್ಗ ಗ್ರಾಮದ ಬಲ್ಮಗುಂಡಿಯಲ್ಲಿ ನಿರ್ಮಾಣಗೊಂಡ ಅಣೆಕಟ್ಟಿನ ಎಲ್ಲ ಬಾಗಿಲುಗಳು ತೆರೆದುಕೊಂಡಿದ್ದು, ಇದರಿಂದ ಕೃತಕ ನೆರೆಗೆ ಅವಕಾಶ ಸಿಗದೇ ಸ್ವರ್ಣೆನದಿಯ ನೀರು ಉಡುಪಿಯ ಹಿರಿಯಡ್ಕದ ಬಜೆಯ ಅಣೆಕಟ್ಟಿಗೆ ಲೀನವಾಗುತ್ತಿದೆ.
ಮುಖ್ಯಮಂತ್ರಿಯ ಕೊಡುಗೆ: ಕಾರ್ಕಳ ವಿಧಾನ ಸಭಾ ಕ್ಷೇತ್ರದಿಂದ ರಾಜ್ಯದ ಮುಖ್ಯಮಂತ್ರಿ ಗದ್ದುಗೇರಿದ ಡಾ.ಎಂ. ವೀರಪ್ಪ ಮೊಯಿಲಿ ಅವರು 1994ರಲ್ಲಿ ಕಾರ್ಕಳಕ್ಕೊಂದು ಹೊಸ ಯೋಜನೆ ಜಾರಿಗೊಳಿಸಿದ್ದರು.
ರೂ. 2 ಕೋಟಿ ವೆಚ್ಚದಲ್ಲಿ ದುರ್ಗಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡ್ಲಿ ಬಲ್ಮಗುಂಡಿಯಲ್ಲಿ ಸ್ವರ್ಣ ನದಿಗೆ ಅಡ್ಡವಾಗಿ ಕಿಂಡಿಅಣೆಕಟ್ಟು ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿದ್ದರು. ಅದೇ ಕಿಂಡಿಅಣೆಕಟ್ಟಿನಿಂದ ರಾಮಸಮುದ್ರ ಪರಿಸರದಲ್ಲಿ ನಿರ್ಮಿಸಲಾಗಿದ್ದ ನೀರು ಶುದ್ದೀಕರಣ ಘಟಕಕ್ಕೆ ನೀರು ಹರಿಸಿ ಅಲ್ಲಿಂದ ಕಾರ್ಕಳ ಪುರಸಭಾ ವ್ಯಾಪ್ತಿಗೆ ಸಮಗ್ರ ಕುಡಿಯುವ ನೀರನ್ನು ಪೊರೈಕೆ ಮಾಡಲಾಗುತ್ತಿತ್ತು.
ವಿದ್ಯುತ್ ಉತ್ಪಾದನೆಗೆ ಶಕ್ತಿಯಾದ ಸ್ವರ್ಣೆ: ಕೆಲ ವರ್ಷಗಳ ಹಿಂದೆ ಇದೇ ಪರಿಸರದಲ್ಲಿ ತಲೆಎತ್ತಿದ್ದ ಜಲವಿದ್ಯುತ್ ಘಟಕದಿಂದಾಗಿ ಕಿರು ಅಣೆಕಟ್ಟಾಗಿ ಮಾರ್ಪಾಡು ಆಗಿದೆ. ವಿದ್ಯುತ್ ಉತ್ಪಾದನೆಗಾಗಿ ಕಿರುಅಣ್ಣೆಕಟ್ಟನ್ನು ಮೇಲ್ಮಟ್ಟಕ್ಕೆ ಏರಿಸಿದ ವಿದ್ಯುತ್ ಉತ್ಪಾದನೆ ಕಂಪೆನಿಯ ಯೋಜನೆಯಿಂದ ಪರಿಸರದಲ್ಲಿ ಕೃತಕ ನೆರೆಗೂ ಕಾರಣವಾಯಿತು.
ಮಳೆಗಾಲ ಆರಂಭವಾಗುತ್ತಿದ್ದರೂ ಮೇಲ್ದಾರ್ಜೆಗೇರಿದ ಕಿಂಡಿಅಣೆಕಟ್ಟಿಗೆ ಅಳವಡಿಸಲಾಗಿದ್ದ ಸ್ವಯಂ ಚಾಲಿತ ಬಾಗಿಲು ತೆರೆಯದೇ ಇರುವುದರಿಂದ ನೀರಿನ ಮಟ್ಟ ಹೆಚ್ಚಳಕ್ಕೂ ಕಾರಣವಾಗಿ ಕೃಷಿ ಭೂಮಿ ಜಲವ್ರತವಾಗುತ್ತಿತ್ತು. ಈ ಬೆಳವಣಿಯೂ ಪ್ರತಿವರ್ಷ ಮುಂದುವರಿಯುತ್ತಾ ಬಂದಿದ್ದರೂ ಪ್ರಸಕ್ತ ವರ್ಷಾವಧಿಯಲ್ಲಿ ಆ ಸಮಸ್ಸೆಗೆ ಮುಕ್ತಿದೊರೆತ್ತಿರುವುದಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತ ಪಡಿಸುತ್ತಾರೆ. ಕಳೆದ ವಿಧಾನ ಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಪರಿಸರದ ವಿದ್ಯುತ್ ಉತ್ಪಾದಕ ಘಟಕ ಸುದ್ದಿಗ್ರಾಸವನ್ನುಂಟು ಮಾಡಿದ್ದನು ನೆನಪಿಸಬಹುದು.
ಮೇಲ್ಮಟ್ಟಕ್ಕೇರಿದ ಬಳಿಕ ತುಂಬುತ್ತಿರುವ ಮರ(ಹೂ)ಳು: ಮೇಲ್ಮಟ್ಟಕ್ಕೇರಿದ ಕಿಂಡಿಅಣೆಕಟ್ಟಿನಲ್ಲಿ ಪ್ರತಿವರ್ಷ ಹೂಳು ತುಂಬುತ್ತಿರುವುದರಿಂದ ವರ್ಷ ಕಳೆಯುತ್ತಿದ್ದಂತೆ ನೀರು ಶೇಖರಣೆ ಮಟ್ಟವು ಕುಸಿತವಾಗುತ್ತಿದೆ. ಅದಕ್ಕೆ ಕಾರಣವಾಗಿರುವುದು ಮೇಲ್ಮಟ್ಟಕ್ಕೇರಿದ ಕಿಂಡಿಅಣೆಕಟ್ಟಿಗೆ ಅಳವಡಿಸಲಾಗಿದ್ದ ಸ್ವಯಂ ಚಾಲಿತ ಬಾಗಿಲುಗಳನ್ನು ತೆರೆಯದೇ ಹೋದುದರಿಂದ ಮಳೆನೀರಿನೊಂದಿಗೆ ಹರಿದು ಬರುವ ಹೂಳು ಮೇಲ್ಮಟ್ಟಕ್ಕೇರಿದ ಅಣೆಕಟ್ಟಿನಲ್ಲಿ ಶೇಖರಣೆಗೊಳ್ಳುತ್ತಿದೆ.
ಬಲ್ಮಗುಂಡಿಯ ಸ್ವರ್ಣ ನದಿಯಲ್ಲಿ ನೀರಿನ ಪ್ರಮಾಣಕ್ಕಿಂತ ಮರಳು ಪ್ರಮಾಣವೇ ಹೆಚ್ಚಾಗುತ್ತಿದೆ . ಇದರಿಂದಾಗ ಕಡುಬೇಸಿಗೆ ಎದುರಾಗುವ ಮುನ್ನವೇ ಸ್ವರ್ಣೆ ಬತ್ತುತ್ತಾ ನದಿಯಲ್ಲಿ ಎಲ್ಲೆಲ್ಲೂ ಮರಳಿನ ಗುಂಪೆಗಳೇ ಕಾಣಸಿಗುತ್ತಿವೆ.