ಕಾರ್ಕಳ: ಪ್ರವಾಸಿ ಕೇಂದ್ರ ಪರಶುರಾಮ ಥೀಮ್ ಪಾರ್ಕ್ ನಲ್ಲಿ ದಿಢೀರ್ ಆಗಿ ಪರುಶುರಾಮ ಮೂರ್ತಿ ಕಾಣೆಯಾಗಿದ್ದು, ಮತ್ತೆ ವಿವಾದಕ್ಕೆ ಒಳಗಾಗಿದೆ. ಎರಡು ದಿನಗಳಿಂದ ಮೂರ್ತಿಯ ಸುತ್ತ ಕಪ್ಪು ಪ್ಲಾಸ್ಟಿಕ್ ಹೊದಿಕೆ ಹಾಕಿರುವುದು ಪತ್ತೆಯಾಗಿತ್ತು. ಇದೀಗ ಡ್ರೋನ್ ಕ್ಯಾಮರಾದಲ್ಲಿ ಕಪ್ಪು ಪ್ಲಾಸ್ಟಿಕ್ ಹೊದಿಕೆಯ ಒಳಗಿನ ಅಸಲಿ ಬಣ್ಣ ಬಯಲಾಗಿದ್ದು, ಪರಶುರಾಮ ಮೂರ್ತಿಯ ಪಾದ ಮತ್ತು ಕಾಲು ಬಿಟ್ಟು ಮೇಲಿನ ಭಾಗ ಮಾಯವಾಗಿರುವುದು ಕಂಡು ಬಂದಿದೆ.
ಕಾರ್ಕಳದ ಬೈಲೂರಿನಲ್ಲಿ ನಿರ್ಮಿಸಲಾಗಿರುವ ಪರುಶುರಾಮನ ಮೂರ್ತಿ ನಕಲಿ ಎನ್ನುವ ಬಗ್ಗೆ ಭಾರೀ ಆರೋಪ ಕೇಳಿಬಂದಿತ್ತು. ಇದೀಗ ಮೂರ್ತಿ ನಾಪತ್ತೆ ಆಗುತ್ತಲೇ ಹೋರಾಟಗಾರರು ಮೂರ್ತಿ ಕಾಣೆಯಾಗಿದೆ ಎಂದು ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮೂರ್ತಿ ತೆರವು ಹಿನ್ನೆಲೆಯಲ್ಲಿ ಉಮಿಕಲ್ ಬೆಟ್ಟಕ್ಕೆ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಭೇಟಿ ನೀಡಿದ್ದು ಶಾಸಕ ಸುನಿಲ್ ಕುಮಾರ್ ಬಗ್ಗೆ ಆರೋಪ ಮಾಡಿದ್ದಾರೆ. ಪರಶುರಾಮನ ಕಂಚಿನ ಮೂರ್ತಿಯ ಕಾಲಿನ ಭಾಗ ಮಾತ್ರವಿದ್ದು ದೇಹದ ಉಳಿದ ಭಾಗ ತೆರವು ಮಾಡಲಾಗಿದೆ.
ಜಿಲ್ಲಾ ನಿರ್ಮಿತಿ ಕೇಂದ್ರದ ಮೇಲ್ವಿಚಾರಣೆಯಲ್ಲಿ ಸಳದಲ್ಲಿ ಕಾಮಗಾರಿ ನಡೆಯುತ್ತಿದೆ, ಆದರೆ ಮೂರ್ತಿ ತೆರವಿನ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಜನರ ದಿಕ್ಕು ತಪ್ಪಿಸಿ ಕಾಮಗಾರಿ ನಡೆಸುವ ಅಗತ್ಯ ಇಲ್ಲ. ಈ ಬಗ್ಗೆ ಎನ್ಐಟಿಕೆ ಹಾಗೂ ಎಂಐಟಿ ತಂತ್ರಜ್ಞರ ತಂಡ ಅಗಮಿಸಿ ಮೂರ್ತಿಯ ಅಡಿಪಾಯ ಪರಿಶೀಲನೆ ನಡೆಸಬೇಕು ಎಂದು ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಮೂರ್ತಿಯ ಮೇಲಿನ ಭಾಗ ಫೈಬರ್ ನಿಂದ ನಿರ್ಮಾಣ ಮಾಡಲಾಗಿದೆ ಎನ್ನುವ ಮಾತನ್ನು ಹೋರಾಟಗಾರರು ಹೇಳಿಕೊಂಡಿದ್ದರು. ಇದೀಗ ಮೂರ್ತಿಯನ್ನು ತೆರವುಗೊಳಿಸಿ ಜನರ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದು ನಾನಾ ರೀತಿಯ ಶಂಕೆಗೆ ಕಾರಣವಾಗಿದೆ.