ಕಾರ್ಕಳ: ತನ್ನ ಕಾರ್ಯತತ್ಪರತೆಯಿಂದ ಜನಾನುರಾಗಿಯಾಗಿದ್ದ ಕಾರ್ಕಳ ನಗರ ಠಾಣೆ ಪೊಲೀಸ್ ಒಬ್ಬರು ಅ.19ರಂದು ನಾಪತ್ತೆಯಾಗಿದ್ದು, ಇದೀಗ ಶವವಾಗಿ ಪತ್ತೆಯಾಗಿದ್ದಾರೆ.
ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ ಕಾರ್ಕಳ ನಗರ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ಶೃತಿನ್ ಶೆಟ್ಟಿ (35) ಅವರ ಮೃತದೇಹ ಕಾರ್ಕಳ ಲಕ್ಷ್ಮೀದೇವಿ ಕಲ್ಯಾಣ ಮಂಟಪ ಸಮೀಪ ಆ.23ರ ಸೋಮವಾರ ಪತ್ತೆಯಾಗಿದೆ.
ಕಾಪು ಜನಾರ್ದನ ದೇವಸ್ಥಾನ ಬಳಿಯಿರುವ ಅಂಗಡಿಮನೆ ನಿವಾಸಿ ಶೃತಿನ್ ಶೆಟ್ಟಿ ಅ.19ರಂದು ಕಾಣೆಯಾಗಿದ್ದರು. ಅಂದು ರಾತ್ರಿ 7.30ಕ್ಕೆ ಪತ್ನಿಗೆ ಫೋನ್ ಮಾಡಿ ನಾನು ನಂದಿಕೂರಿನಲ್ಲಿದ್ದು ಮನೆಗೆ ಬರುತ್ತಿರುವುದಾಗಿ ಹೇಳಿದ್ದರು. ಅನಂತರ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ನಾಪತ್ತೆ ಬಳಿಕ ಜಿಲ್ಲೆಯ ವಿವಿದೆಡೆಗಳಲ್ಲಿ ತಿರುಗಾಡುತ್ತಿದ್ದ ಅವರು ಮಣಿಪಾಲದ ಎಟಿಎಂ ಒಂದರಿಂದ ಹಣವನ್ನು ನಗದೀಕರಿಸಿದ್ದರು. ಪಡುಬಿದ್ರಿ ಪೋಲೀಸರಿಂದ ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡಿದ್ದ ಶೃತಿನ್ ಈಗ ಆತ್ಮಹತ್ಯೆಗೈದುಕೊಂಡಿರುವ ಸುದ್ದಿ ಇಲಾಖೆಗೂ ಬರಸಿಡಿಲು ಬಡಿದಂತಾಗಿದೆ. ಶುಕ್ರವಾರ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಶೃತಿನ್ ಪತ್ನಿ ನಾಪತ್ತೆ ದೂರು ದಾಖಲಿಸಿದ್ದರು. 2008ರ ಬ್ಯಾಚಿನಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದ ಇವರು ಎರಡು ತಿಂಗಳ ಹಿಂದೆಯಷ್ಟೇ ಬಡ್ತಿಯಾಗಿ ಕಾರ್ಕಳ ನಗರ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೆಬಲ್ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದರು.