ಕಾರ್ಕಳ: ವಿಧಾನಸಭಾ ಕ್ಷೇತ್ರದಲ್ಲಿ ಶೇ. 82ರಷ್ಟು ಮತದಾನ ಆಗಿದ್ದು, ಇದು ಬಿಜೆಪಿಗೆ ವರದಾನವಾಗಲಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ತಾರು ಅಪಪ್ರಚಾರ ಮತ್ತು ಸುಳ್ಳು ಸುದ್ದಿಗಳ ನಡುವೆ ಮತದಾರ ಒಮ್ಮತ ದಿಂದ ಮತದಾನ ಮಾಡಿದ್ದಾರೆ. ಯಾವುದೇ ಅಹಿತಕರ ಘಟನೆ ಇಲ್ಲದೆ ಕಾರ್ಕಳದಲ್ಲಿ ಶೇ. 82ರಷ್ಟು ಮತದಾನವಾಗಿದೆ. ಹೊರ ಊರುಗಳಲ್ಲಿ ಇದ್ದ ಮತದಾರರು ಬಂದು ಮತದಾನ ಮಾಡಿದ್ದಾರೆ. ಮುಂಬೈ ಬೆಂಗಳೂರಿನಿಂದ ಸಾವಿರಾರು ಸಂಖ್ಯೆಯಲ್ಲಿ ಬಂದು ಮತದಾನ ಮಾಡಿದ್ದಾರೆ ಎಂದರು.
ದೇಶದ ಪರಿಸ್ಥಿತಿ ಅರ್ಥಮಾಡಿಕೊಂಡವರು ಬಿಜೆಪಿಗೆ ಮತದಾನ ಮಾಡಿದ್ದಾರೆ. ಶೇಕಡವಾರು ಹೆಚ್ಚು ಮತದಾನ ಬಿಜೆಪಿಗೆ ವರದಾನವಾಗಲಿದೆ. ಎಕ್ಸಿಟ್ ಪೋಲ್ ಆಧಾರದಲ್ಲಿ ಬೇರೆ ಬೇರೆ ಸಮಿಕ್ಷೆ ಬಂದಿದೆ. ಆದರೆ ಗ್ರಾಮೀಣ ನಾಡಿ ಮಿಡಿತ ಅರ್ಥಮಾಡಿಕೊಂಡಗ ಬಿಜೆಪಿ ಪರ ಹೆಚ್ಚು ಒಲವು ತೋರಿಸಿದ್ದಾರೆ. ಎಕ್ಸಿಟ್ ಪೋಲ್ ಗಳ ವಿಶ್ಲೇಷಣೆ ಮಾಡುವುದಿಲ್ಲ . ಬಹುಮತದ ಸರ್ಕಾರ ಬರುತ್ತದೆ. ಸಮೀಕ್ಷೆ ಮೀರಿ ಬಿಜೆಪಿ ಪರ ಗೆಲುವು ದೊರೆಯಲಿದೆ ಎಂದರು.