ಕಾರ್ಕಳ: ಮಾಜಿ ಸಚಿವ ಬಿಜೆಪಿ ಅಭ್ಯರ್ಥಿ ವಿ.ಸುನೀಲ್ ಕುಮಾರ್ ಅವರು ಬುಧವಾರದಂದು ನಾಮಪತ್ರ ಸಲ್ಲಿಸಿದರು.
ನಗರದ ಸ್ವರಾಜ್ ಮೈದಾನದಿಂದ ಹೊರಟ ಮೆರವಣಿಗೆಯು ಕುಕ್ಕುಂದೂರು ಗ್ರಾಮ ಪಂಚಾಯತ್ ಮೈದಾನದ ವರೆಗೆ ಸಾಗಿಬಂದು ಅಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿತ್ತು.
ಮೆರವಣಿಗೆಯಲ್ಲಿ ಪಾಲ್ಗೊಂಡವರು ಬೃಹತ್ ಗಾತ್ರದ ಪಕ್ಷದ ಧ್ವಜ ಹಾಗೂ ಓಂಕಾರ ಧ್ವಜ ಹಿಡಿದು ಪಕ್ಷದ ಹಾಗೂ ಅಭ್ಯರ್ಥಿ ಸುನೀಲ್ ಕುಮಾರ್ ಪರ ಜಯಘೋಷ ಮೊಳಗಿಸಿದರು.
ಬಿಸಿಲಿನ ತಾಪ ತೀವ್ರವಾಗಿದ್ದರೂ, ಚೆಂಡೆ ಹಾಗೂ ಡಿಜೆ ಸೌಂಡ್ ಗೆ ಮೆರವಣಿಗೆಯಲ್ಲಿ ಪಾಲ್ಗೊಂಡವರಲ್ಲಿ ಹುರುಪು ಹೆಚ್ಚಿಸುವಂತೆ ಮಾಡಿತು.
ಮತದಾರರು ಹಾಗೂ ಸುನೀಲ್ ಕುಮಾರ್ ಅವರ ಅಭಿಮಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಆರ್ ಎಸ್ ಎಸ್ ಮುಖಂಡ ಬೋಳ ಪ್ರಭಾಕರ ಕಾಮತ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್,ಇರ್ವತ್ತೂರು ಭಾಸ್ಕರ್ ಎಸ್.ಕೋಟ್ತಾನ್, ಮಹೇಶ್ ಕುಡುಪುಲಾಜೆ, ಎಂ.ಕೆ.ವಿಜಯಕುಮಾರ್, ಮಣಿರಾಜ್ ಶೆಟ್ಟಿ, ಮಹಾವೀರ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.