ಉಡುಪಿ: ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಇಂದು ಆಯೋಜಿಸಲಾಗಿದ್ದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಸಮಾವೇಶವನ್ನು ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ಬಿಜೆಪಿಯವರು ಪ್ರತಿಯೊಂದು ವಿಚಾರದಲ್ಲಿ ಕೂಡ ಲೂಟಿ ಹೊಡೆಯುವ ಕೆಲಸದಲ್ಲಿ ತೊಡಗಿದ್ದು, ವರ್ಗಾವಣೆ, ಪೋಸ್ಟಿಂಗ್ ಗೆ ಇಷ್ಟು ಪರ್ಸೆಂಟ್ ಎಂದು ಮಾಡಿದ್ದಾರೆ. ಕಮೀಷನ್ ದಂಧೆಯನ್ನು ಹೊಟೇಲ್ ಮೆನು ಕಾರ್ಡ್ ರೀತಿ ಮಾಡಿಕೊಂಡಿದ್ದಾರೆ. ವಿಧಾನಸೌದದ ಗೋಡೆಗಳು ಲಂಚ ಲಂಚ ಎಂದು ಪಿಸುಗುಡುತ್ತಿದೆ. ಈ ಮನುವಾದಿಗಳಿಗೆ ಯಾವುದೇ ಸಿದ್ದಾಂತ ಇಲ್ಲ, ಬದಲಾಗಿ ಸಂಘರ್ಷ ಉಂಟು ಮಾಡುವುದೇ ಇವರ ಕೆಲಸ ಎಂದು ವಾಗ್ದಾಳಿ ನಡೆಸಿದರು.
ನಾನು, ಡಿ.ಕೆ. ಶಿವಕುಮಾರ್, ವೀರಪ್ಪ ಮೊಯ್ಲಿ, ಬಿ.ಕೆ. ಹರಿಪ್ರಸಾದ್ ಅಪ್ಪಟ ಹಿಂದೂ, ಆದ್ರೆ ನಾವು ಹಿಂದುತ್ವವಾದಿಯಲ್ಲ. ಹಿಂದೂಗಳ ಪರವಾಗಿರುವವರು, ಅಂದ್ರೆ ಮನುಷ್ಯತ್ವದ ಪರವಾಗಿರುವವರು. ಬಿಜೆಪಿಯವರು ಮನುಷ್ಯ ದ್ವೇಷಿಗಳು. ಕರಾವಳಿಯಲ್ಲಿ ಆಗಿರುವ ಕೊಲೆಯಲ್ಲಿ ಸತ್ತವರು ಹಿಂದೂಳಿದ ಜಾತಿಯವರು. ಆದರೆ ಎಲ್ಲಿಯಾದರು ಆರ್.ಎಸ್.ಎಸ್, ಎಂ.ಎಲ್.ಎ ಮಗ ಕೊಲೆಯಾದ ನಿದರ್ಶನ ಇದೆಯಾ ಎಂದು ಪ್ರಶ್ನಿಸಿದ ಅವರು ಯಾವುದೇ ಒಂದು ಕೊಲೆಯಾದರೆ ಅದೇ ಹೆಣಗಳ ಮೇಲೆ ಬಿಜೆಪಿಯವರು ರಾಜಕೀಯ ಮಾಡುತ್ತಾರೆ ಎಂದು ದೂರಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಬಿಜೆಪಿ ಅಧ್ಯಕ್ಷನಾಗಲು ನಾಲಾಯಕ್ ಅವರು ಒರ್ವ ವಿದೂಷಕನಂತೆ. ರಸ್ತೆ, ಚರಂಡಿ ಬಗ್ಗೆ ಮಾತನಾಡಬೇಡಿ ಎನ್ನುತ್ತಾರೆ. ಈತನ ಹೇಳಿಕೆಯಿಂದ ಎಚ್ಚರ ಆಗದೆ ಇದ್ರೆ ಏನು ಅಂತಾ ನಿಮ್ಮನ್ನು ಕರಿಯೋದು. ದಯವಿಟ್ಟು ಅವರ ಮಾತಗಳಿಂದ ಮರುಳಾಗಬೇಡಿ. ಮನುವಾದಿಗಳು, ಪುರೋಹಿತ ಶಾಹಿಗಳು ಈ ದೇಶಕ್ಕೆ ಶಾಪ ಎಂದು ವಿವೇಕಾನಂದರು ಹೇಳಿದರು. ನರೇಂದ್ರ ಮೋದಿಯಷ್ಟು ಸುಳ್ಳು ಹೇಳಿದ ಪ್ರಧಾನಮಂತ್ರಿ ಯಾರು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಅಧಿಕಾರಕ್ಕೆ ಬಂದ ಕೂಡಲೇ ಪ್ರತಿ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್ ಉಚಿತ, ಕುಟುಂಬದ ಯಜಮಾನ್ತಿಗೆ ಮಾಸಿಕ ರೂ 2 ಸಾವಿರ ನೀಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದರು.
ನಾವು ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದು, ರಾಜ್ಯದ ಎಲ್ಲ ಜನರ ಸಮಸ್ಯೆ ಅರಿತು, ನಿಮ್ಮ ನೋವು, ಅಭಿಪ್ರಾಯ ತಿಳಿದು ಪರಿಹಾರ ನೀಡಲು ಬಂದಿದ್ದೇವೆ. ಈ ಜಿಲ್ಲೆಯಲ್ಲಿ ನಾವು ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲುತ್ತಿದ್ದೆವು. ಆದರೆ ಈಗ ಎರಡೂ ಜಿಲ್ಲೆಗಳಲ್ಲಿ ಕೇವಲ ಓರ್ವ ಶಾಸಕರು ಮಾತ್ರ ಇದ್ದಾರೆ. ಈ ವಿಚಾರಕ್ಕೆ ನಮ್ಮ ಮನಸಿಗೆ ನೋವಿದೆ. ನಾವು ನುಡಿದಂತೆ ನಡೆದಿದ್ದೇವೆ. ಉದ್ಯೋಗ ಸೃಷ್ಟಿಗೆ ಖಾಸಗಿಕರಣ ಬಿಟ್ಟು ರಾಷ್ಟ್ರೀಕರಣ ಮಾಡಿ ಎಲ್ಲ ಸಂಘ ಸಂಸ್ಥೆಗಳನ್ನು ನಿರ್ಮಾಣ ಮಾಡಿದ್ದರು. ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸಿಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಎಂದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಅಭಯ ಚಂದ್ರ ಜೈನ್, ಎಐಸಿಸಿ ಕಾರ್ಯದರ್ಶಿ ರೋಝಿ ಜಾನ್, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಐವಾನ್ ಡಿಸೋಜಾ, ಮಾಜಿ ವಿಧಾನಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್, ನಾಯಕರಾದ ಪ್ರಖ್ಯಾತ್ ಶೆಟ್ಟಿ, ರಮೇಶ್ ಕಾಂಚನ್, ದೀಪಕ್ ಕೋಟ್ಯಾನ್, ಗೀತಾ ವಾಗ್ಳೆ, ಪ್ರಶಾಂತ್ ಜತ್ತನ್ನ, ರೋಶನಿ ಒಲಿವರ್, ಡಾ|ಸುನೀತಾ ಶೆಟ್ಟಿ, ಹಬೀಬ್ ಆಲಿ, ಅಮೃತ್ ಶೆಣೈ, ವೆರೋನಿಕಾ ಕರ್ನೆಲಿಯೊ, ಎಮ್ ಎ ಗಫೂರ್, ಶ್ಯಾಮಲಾ ಭಂಡಾರಿ, ಕೃಷ್ಣಮೂರ್ತಿ ಆಚಾರ್ಯ, ಅಶೋಕ್ ಪೂಜಾರಿ, ರಾಜು ಪೂಜಾರಿ, ಅಮೃತಾ ಕೃಷ್ಣಮೂರ್ತಿ, ಪ್ರಶಾಂತ್ ಜತ್ತನ್ನ ಹಾಗೂ ಇತರರು ಉಪಸ್ಥಿತರಿದ್ದರು.