ಉಡುಪಿ: ರಣರಣ ಸುಡುವ ಬಿಸಿಲಿನಲ್ಲೂ ಪರ್ಕಳ ಪರಿಸರದ ಮನೆಗಳ ಬಾವಿಗಳಲ್ಲಿ ನೀರು ಉಕ್ಕಿ ಸಮೀಪದ ತೋಡಿನಲ್ಲಿ ಹರಿಯುತ್ತಿರುವುದು ಸ್ಥಳೀಯರನ್ನು ನಿಬ್ಬೆರೆಗುಗೊಳಿಸಿದೆ.
ಏಳು ವರ್ಷಗಳ ಹಿಂದೆ ಜನವರಿ ತಿಂಗಳಿನಲ್ಲಿ ಕರಾವಳಿ ಭಾಗದಲ್ಲಿ ಲಘು ಭೂಕಂಪ ಆಗಿದ್ದು, ನಂತರ 2017 ಮತ್ತು 2018ರಲ್ಲಿ ಪರ್ಕಳ ಪ್ರದೇಶದ ಈ ಭಾಗದಲ್ಲಿ ಬಾವಿಯ ನೀರು ಉಕ್ಕಿ ಹರಿಯುತ್ತಿದೆ. ನಂತರದ ವರ್ಷದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು.
ಈಗ ಮತ್ತೆ ಪರ್ಕಳದ ಗರಡಿ ಬಳಿಯ ಮರಾಠಿ ಸಮುದಾಯದವರು ಪೂಜಿಸುವ ಭವಾನಿ ಕಟ್ಟೆಯ ಬಳಿ ಶ್ರೀಸತ್ಯಮತ ನಿಲಯದ ಬಾವಿಯಲ್ಲಿ ನೀರು ಉಕ್ಕಿ ಪಕ್ಕದಲ್ಲಿರುವ ಮಳೆ ನೀರು ಹೋಗುವ ತೋಡಿನಲ್ಲಿ ಹರಿಯುತ್ತಿದೆ. ಈ ಮನೆಯ ಬಾವಿಗೆ ಮೂರು ವಿದ್ಯುತ್ ಎಲೆಕ್ಟ್ರಾನಿಕ್ ಪಂಪುಗಳನ್ನು ಅಳವಡಿಸಲಾಗಿದ್ದು, ಮೂರು ಮನೆಯವರು ದಿನನಿತ್ಯ ನೀರು ತೆಗೆಯುತ್ತಿದ್ದಾರೆ. ಹಾಗೆ ವಾರಕ್ಕೊಮ್ಮೆ ಸೀಮೆಎಣ್ಣೆ ಪಂಪಿನ ಮೂಲಕವೂ ನೀರನ್ನು ತೋಟಕ್ಕೆ ಹಾಯಿಸುತ್ತಾರೆ. ಆದರೂ ಕೂಡ ನೀರು ಉಕ್ಕಿ ಬರುತ್ತಿರುವುದು ಸ್ಥಳೀಯರ ಆಶ್ಚರ್ಯಕ್ಕೆ ಕಾರಣವಾಗಿದೆ.
ಬಾವಿಯ ಪಕ್ಕದಲ್ಲಿ ರಂಧ್ರವಿದ್ದು, ಆ ಮೂಲಕ ನೀರು ಉಕ್ಕಿ ತೋಡಿನಲ್ಲಿ ಹರಿಯುತ್ತಿದೆ. ಈ ಪರಿಸರದಲ್ಲಿ ಅಪ್ರಾಯ ನಾಯ್ಕ್ ಎಂಬವರ ಮನೆಯ ಎದುರು ಬಾವಿಯಲ್ಲೂ ನೀರು ತುಂಬಿದೆ. ಹಾಗೆಯೇ ಪ್ರಜ್ವಲ್ ಪೂಜಾರಿ, ಏಕನಾಥ ನಾಯ್ಕ್, ದೇವೇಂದ್ರ ನಾಯ್ಕ್ ಮೊದಲಾದವರ ಮನೆಯ ಎದುರು ಮತ್ತು ಅಂಗಳದಲ್ಲಿರುವ ಬಾವಿಯಲ್ಲಿ ನೀರಿನ ಮಟ್ಟ ಏರಿಕೆ ಆಗುತ್ತಿರುವುದು ಕಂಡುಬಂದಿದೆ.
ಏಳು ವರ್ಷಗಳ ಹಿಂದೆ ಭೂ ವಿಜ್ಞಾನಿಗಳು ಈ ಪರಿಸರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಭಾಗದಲ್ಲಿ ಮುರಕಲ್ಲುಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಭೂಕಂಪನದಿಂದ ಇಬ್ಭಾಗವಾಗಿ ಈ ಪರಿಸರದಲ್ಲಿ ನೀರು ಹರಿಯಲಾರಂಭಿಸಿದೆ ಎಂದು ತಿಳಿಸಿದ್ದರು. ಇದೀಗ ಮತ್ತೆ ಈ ಕೌತುಕ ಸ್ಥಳೀಯ ಜನರನ್ನು ನಿಬ್ಬೆರಗುಗೊಳಿಸಿದೆ.