ಹಿರ್ಗಾನ: ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಕಾಡುಪ್ರಾಣಿಯೊಂದು ಅಡ್ಡ ಬಂದ ಪರಿಣಾಮ ಸ್ಕೂಟರ್ ಪಲ್ಟಿಯಾಗಿ ಸವಾರ ಮೃತಪಟ್ಟ ಘಟನೆ ಕಾರ್ಕಳ ತಾಲೂಕು ಹಿರ್ಗಾನ ಬಳಿ ಸಂಭವಿಸಿದೆ. ನಿಟ್ಟೆ ನಿವಾಸಿ ಸದಾನಂದ ಶೆಟ್ಟಿ (43) ಮೃತ ದುರ್ದೈವಿ.
ಸದಾನಂದ ಶೆಟ್ಟಿ ಕ್ಯಾಟರಿಂಗ್ ವ್ಯವಹಾರ ಮಾಡಿಕೊಂಡಿದ್ದು,ಶಿರ್ಲಾಲ್ ನಲ್ಲಿ ಕಾರ್ಯಕ್ರಮ ಮುಗಿಸಿ ಇಲೆಕ್ಟ್ರಿಕ್ ಸ್ಕೂಟರ್ ನ ಹಿಂಬದಿಯಲ್ಲಿ ಮಗನನ್ನು ಕುಳ್ಳಿರಿಸಿ ವಾಪಾಸ್ ಬರುತ್ತಿದ್ದ ವೇಳೆ ಹಿರ್ಗಾನ ಎಂಬಲ್ಲಿ ಯಾವುದೋ ಪ್ರಾಣಿಯೊಂದು ರಸ್ತೆಯಲ್ಲಿ ಅಡ್ಡ ಬಂದ ಪರಿಣಾಮ ಏಕಾಏಕಿ ಬ್ರೇಕ್ ಹಾಕಿದ್ದು ಸ್ಕೂಟರ್ ಪಲ್ಟಿಯಾಗಿದೆ.
ಆಗ ಅವರು ಧರಿಸಿದ್ದ ಹೆಲ್ಮೆಟ್ ಕಳಚಿ ಬಿದ್ದು ತಲೆಗೆ ಗಂಭೀರ ಗಾಯವಾಗಿದ್ದು ಹಿಂಬದಿ ಸವಾರನಾದ ಸ್ಪರ್ಷ್ ಕೂಡ ಗಾಯಗೊಂಡಿದ್ದಾನೆ. ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.