ಕುಂದಾಪುರ: ಹಿಂದೂತ್ವ ಯಾರ ಮನೆಯ ಆಸ್ತಿ ಅಲ್ಲ.ನಾನು ಕೂಡ ಹಿಂದೂ ನನ್ನಂತೆ ಸಾವಿರಾರು ಜನ ಕಾಂಗ್ರೇಸ್ ಕಾರ್ಯಕರ್ತರು ನಿತ್ಯ ಪೂಜೆ,ಧಾರ್ಮಿಕ ಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ. ಆದರೆ ಬಿಜೆಪಿ ರಾಜಕೀಯ ಲಾಭದ ಕಾರಣಕ್ಕೆ ಹಿಂದುತ್ವವನ್ನು ಬಳಸಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಬೈಂದೂರುನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿ ಆಗಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯದ ಡಬಲ್ ಇಂಜಿನ್ ಸರಕಾರ ನಿರುದ್ಯೋಗ, ಬೆಲೆ ಏರಿಕೆ ಮೂಲಕ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಿದೆ. ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದರೆ ಕರಾವಳಿ ಪ್ರದೇಶಕ್ಕೆ ಪ್ರತ್ಯೇಕ ನಿಗಮ ಸೇರಿದಂತೆ ಇಲ್ಲಿನ ಪ್ರವಾಸೋಧ್ಯಮ, ಉದ್ಯೋಗ ಸೇರಿದಂತೆ ನೈಸರ್ಗಿಕ ಸಂಪನ್ಮೂಲದ ಸದ್ಬಳಕೆ ಮೂಲಕ ನಿರುದ್ಯೋಗ ಸಮಸ್ಯೆ ಹೋಗಲಾಡಿಸುತ್ತೇವೆ. ಮೀನುಗಾರರ ಬೇಡಿಕೆಗಳಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ ಎಂದರು.
ಬೈಂದೂರು ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಮಾತನಾಡಿ ಸುಳ್ಳು ಅಪಪ್ರಚಾರಗಳ ಮೂಲಕ ಕಳೆದ ಬಾರಿ ನನ್ನನ್ನು ಪರಾಭವಗೊಳಿಸಲಾಗಿತ್ತು ಆದರೆ ಈ ಬಾರಿ ಜನರು ಪ್ರಜ್ಞಾವಂತರಾಗಿದ್ದಾರೆ ಬಿಜೆಪಿಯ ಹಸಿಸುಳ್ಳು ನಾಟಕಗಳಿಗೆ ಮತದಾರರು ಬೆಲೆ ನೀಡಲಾರರು.
ಸ್ವಂತ ಕಾರ್ಯಕರ್ತರನ್ನು, ಪಕ್ಷದ ಹಿರಿಯ ಮುಖಂಡರನ್ನು ಕೇವಲ ರಾಜಕೀಯವಾಗಿ ಮಾತ್ರ ಬಳಸಿಕೊಂಡು, ಅಧಿಕಾರದ ಲಾಭವನ್ನು ಆರ್.ಎಸ್.ಎಸ್ ಮುಖಂಡರು ಪಡೆಯುತ್ತಾರೆ. ಬಿಜೆಪಿಯವರಿಗೆ ನಂಬಿಸಿ ಮೋಸ ಮಾಡುವುದು ಚೆನ್ನಾಗಿ ತಿಳಿದಿದೆ. ಆದರೆ ಕಾಂಗ್ರೇಸ್ ಪಕ್ಷ ಪ್ರತಿಯೊಬ್ಬ ಕಾರ್ಯಕರ್ತನಿಗೂ ಸೂಕ್ತ ಸ್ಥಾನಮಾನ ನೀಡುತ್ತಿದೆ ಹಾಗೂ ಗೌರವ ನೀಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಉದ್ಯಮಿ ಯ.ಬಿ ಶೆಟ್ಟಿ ಉಪ್ಪುಂದ,ಪ್ರಚಾರ ಸಮಿತಿ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಎಮ್.ಎ.ಗಫೂರ್, ಎಸ್.ರಾಜು ಪೂಜಾರಿ, ಮಾಜಿ ಜಿ.ಪಂ ಸದಸ್ಯರಾದ ಕೆ.ಬಾಬು ಶೆಟ್ಟಿ ತಗ್ಗರ್ಸೆ, ಶಂಕರ ಪೂಜಾರಿ, ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ, ಸದಾಶಿವ ಡಿ.ಪಡುವರಿ, ಮಾಧ್ಯಮ ವಕ್ತಾರ ಡಾ.ಸುಬ್ರಹ್ಮಣ್ಯ ಭಟ್, ಜಿಲ್ಲಾ ಕಾಂಗ್ರೇಸ್ ಪದಾಧಿಕಾರಿಗಳು, ರಾಜ್ಯ ಕಾಂಗ್ರೇಸ್ ಪದಾಧಿಕಾರಿಗಳು ಹಾಗೂ ಕಾಂಗ್ರೇಸ್ ಮುಖಂಡರು ಹಾಜರಿದ್ದರು. ಬೈಂದೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಸ್.ಮದನ್ ಕುಮಾರ್ ಉಪಸ್ಥಿತರಿದ್ದರು.
ಕರಾವಳಿಯಲ್ಲಿ ಕಾಂಗ್ರೆಸ್ 10 ಸೀಟ್ ಗೆಲ್ಲುತ್ತೆ, ಬಿಜೆಪಿಗೆ ಹಿಂದುತ್ವ ಫಲ ಕೊಡಲ್ಲ:
ಕರಾವಳಿ ಭಾಗದಲ್ಲಿ ಕಾಂಗ್ರೆಸ್ 10 ಸೀಟ್ ಗೆಲ್ಲುತ್ತದೆ. ಬಿಜೆಪಿಗೆ ಹಿಂದುತ್ವ ಫಲ ಕೊಡಲ್ಲ. ನಾವು ಬದುಕಿನ ಬಗ್ಗೆ ಮಾತನಾಡುತ್ತೇವೆ, ಅವರು ಭಾವನೆ ಬಗ್ಗೆ ಮಾತಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕೊಲ್ಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನೇ ಒಳ್ಳೆಯ ಕೆಲಸ, ಹೋರಾಟ, ಯುದ್ಧ ಮಾಡಬೇಕಾದರೆ ದೇವರ ಅನುಗ್ರಹ ಮುಖ್ಯ. ದೇವರ ಅನುಗ್ರಹ ಇಲ್ಲದೇ ಏನೂ ಆಗುವುದಿಲ್ಲ. ಕೊಲ್ಲೂರು ಮೂಕಾಂಬಿಕೆ, ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಬೇಕು ಅಂತ ಬಂದಿದ್ದೇನೆ ಎಂದರು.
ಜನರು ಕೇಸರಿಶಾಲು ಹಾಕಿ ಬಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಬೇಕು ಎಂಬುದು ಅವರ ಆಸೆ. ಮುಂದೆ ರಾಹುಲ್ ಗಾಂಧಿ ಜಿಲ್ಲೆಗೆ ಬರುತ್ತಾರೆ ಎಂದು ಹೇಳಿದರು.
ಸಿಎಂ ಹುದ್ದೆಗೆ ಕಾಂಗ್ರೆಸ್ ನಲ್ಲಿ ಪೈಪೋಟಿ ವಿಚಾರಕ್ಕೆ ಮಾತನಾಡಿದ ಅವರು, ನಾವು ರಾಜಕಾರಣಿಗಳು, ಖಾವಿ ಹಾಕ್ಕೊಂಡಿಲ್ಲ. ಬಿಳಿ ಬಟ್ಟೆ ಹಾಕ್ಕೊಂಡಿದ್ದೇವೆ ಎಂದರು.
ಸಿದ್ದರಾಮಯ್ಯ ಅವರ ಲಿಂಗಾಯತ ಭ್ರಷ್ಟ ಸಿಎಂ ಹೇಳಿಕೆ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ಬಿಜೆಪಿ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಅಂದಿದ್ದಾರೆ. ಯತ್ನಾಳ್, ಪ್ರತಾಪ್ ಸಿಂಹ, ನೆಹರೂ ಓಲೇಕಾರ್ ಅದನ್ನೇ ಹೇಳಿದ್ದಾರೆ. ಆದ್ರೆ, ಬಿಜೆಪಿ ಸುಮ್ಮನೆ ಈ ವಿಚಾರದಲ್ಲಿ ಸಮುದಾಯವನ್ನು ಎಳೆದು ತರುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.