ಉಡುಪಿ: ಕರ್ನಾಟಕ ಮತದಾರರು ಪ್ರಬುದ್ಧರಾಗಿದ್ದಾರೆ. ಅವರಿಗೆ ಯಾರು ಗೆಲ್ಲುತ್ತಾರೆಂದು ಗೊತ್ತಿದೆ. ಎಸ್ ಡಿಪಿಐ ಚುನಾವಣೆಯಲ್ಲಿ ಆರಿಸಿ ಬರುವುದಿಲ್ಲವೆಂದು ಗೊತ್ತಿದೆ. ಹಾಗಾಗಿ ಮತದಾರರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸುತ್ತಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಆರ್.ವಿ. ದೇಶಪಾಂಡೆ ಹೇಳಿದರು.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಪರವಾಗಿ ಕಾಂಗ್ರೆಸ್ ಕೇವಲ ಮಾತನಾಡಿಲ್ಲ, ಹೋರಾಟವೂ ಮಾಡಿದೆ. ಅಲ್ಪಸಂಖ್ಯಾತರ ಪರವಾಗಿ ನಿಂತಿದ್ದೇವೆ. ನಾವು ಸಾಮಾಜಿಕ ನ್ಯಾಯ, ಜಾತ್ಯಾತೀತ ತತ್ವ, ಸಂವಿಧಾನದಲ್ಲಿ ವಿಶ್ವಾಸ ಇಡುತ್ತೇವೆ ಎಂದರು.
ಕುದುರೆ ವ್ಯಾಪಾರದ ಕುರಿತ ಪ್ರಶ್ನೆಗೆ ಮಾತನಾಡಿದ ಅವರು, ಬಿಜೆಪಿಯವರು ಆಪರೇಷನ್ ಕಮಲದ ಮೂಲಕ ಒಮ್ಮೆ ಪಾಠ ಕಲಿಸಿದ್ದಾರೆ. ಒಮ್ಮೆ ಪಾಠ ಕಲಿತ ನಂತರ ಇಮ್ಮುಂದೆ ಯಾವ ರೀತಿ ಎಚ್ಚರಿಕೆಯಿಂದ ಇರಬೇಕೋ ಆ ರೀತಿ ಇರ್ತೇವೆ. ಟಿಕೆಟ್ ಕೊಡುವ ಸಂದರ್ಭದಲ್ಲಿ ಪ್ರತಿ ಅಭ್ಯರ್ಥಿಯ ಹಿನ್ನೆಲೆ ಹಾಗೂ ಪಕ್ಷ ನಿಷ್ಠೆ ನೋಡಿಕೊಂಡು ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.