ಹೆಬ್ರಿ: ಸರಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬೇಡ. ಕನ್ನಡ ಶಾಲೆಗಳೇ ನಿಜವಾದ ಆಶಾಕಿರಣ ಎಂದು ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಹೇಳಿದರು.
ಅವರು ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಆಯೋಜಿಸಿದ್ದ ಅಮೃತ ಭಾರತಿಗೆ ಸಂಗೀತದಾರತಿ ಕಾರ್ಯಕ್ರಮದಲ್ಲಿ ಸನ್ಮಾನ ನೆರವೇರಿಸಿ ಮಾತನಾಡಿದರು.
ನುರಿತ ಪ್ರತಿಭಾನ್ವಿತ ಸ್ಯಾಕ್ಸೋಫೊನ್ ಕಲಾವಿದ ಇದೇ ಶಾಲೆಯ 7 ತರಗತಿಯ ವಿದ್ಯಾರ್ಥಿ ಪ್ರೀತಮ್ ದೇವಾಡಿಗ ಮುದ್ರಾಡಿ ಅವರನ್ನು ಸನ್ಮಾನಿಸಲಾಯಿತು. ಗ್ರಾಮೀಣ ಪ್ರದೇಶದ ಶಾಲೆಯ ಮಕ್ಕಳಿಗೆ ಅನುಕೂಲವಾಗುವಂತೆ ವಿಜ್ಞಾನ ಪ್ರಯೋಗಾಲಯ ಆಗಬೇಕೆಂಬ ಕನಸನ್ನು ನನಸು ಮಾಡಲು ಎಲ್ಲರೂ ಕೈ ಜೋಡಿಸ ಬೇಕು ಎಂದು ಸಂಘಟಕ ಡಾ.ಶೇಖರ ಅಜೆಕಾರು ಆಗ್ರಹಿಸಿದರು. ಎಲ್ಲಾ ಅತಿಥಿಗಳಿಗೆ ಭಾರತ ಧ್ವಜ ನೀಡುವ ಮೂಲಕ ಸಾಮೂಹಿಕ ಉದ್ಘಾಟನೆ ಕಾರ್ಯಕ್ರಮದ ವಿಶೇಷವಾಗಿತ್ತು.
ವಿಶ್ವದಾಖಲೆಯ ಹಾಡುಗಳ ಸಹಿತ ಒಂದು ಗಂಟೆಗಳ ಕಾಲ ಸ್ಯಾಕ್ಸೋಪೋನ್ ಮತ್ತು ಕೊಳಲು ನುಡಿಸಿ ಪ್ರೀತಮ್ ಗಮನ ಸೆಳೆದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ತಿಪ್ಪೇಸ್ವಾಮಿ ಎಚ್.ಎಂ, ಲಯನ್ಸ್ ಸಿಟಿ ಅಧ್ಯಕ್ಷ ರಘುರಾಮ ಶೆಟ್ಟಿ, ವ್ಯವಸಾಯ ಸೊಸೈಟಿಯ ಅಧ್ಯಕ್ಷ ನವೀನ್ ಅಡ್ಯಂತಾಯ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಶ್ರೀನಿವಾಸ ಭಂಡಾರಿ, ಜೇಸಿ ಅಧ್ಯಕ್ಷ ರೂಪೇಶ್ ನಾಯ್ಕ್ ಅತಿಥಿಗಳಾಗಿ ಗ್ರಾಮೀಣ ಶಾಲೆಗಳ ಕೊಡುಗೆಗಳನ್ನು ಕೊಂಡಾಡಿದರು. ಚೈತನ್ಯ ಯುವಕ ಮಂಡಲದ ಗೌರವಾಧ್ಯಕ್ಷ ಎಚ್. ಜನಾರ್ದನ ಅತಿಥಿಗಳಾಗಿದ್ದರು. ಮುಖ್ಯ ಶಿಕ್ಷಕಿ ಚಂಪಕಾ ಕೆ ಸ್ವಾಗತಿಸಿದರು. ಶಿಕ್ಷಕಿ ಸುಜಯ ನಿರೂಪಿಸಿದರು. ಬೆಳದಿಂಗಳ ಸಮ್ಮೇಳನ ಸಮಿತಿಯ ಮಕ್ಕಳ ವಿಭಾಗ ಸಂಚಾಲಕ ಸುನಿಧಿ ಎಸ್ ಅಜೆಕಾರು ವಂದಿಸಿದರು.
ಅಮೃತೋತ್ಸವ ಅದೃಷ್ಟಶಾಲಿ ಶಿಕ್ಷಕರಾದ ಪೂರ್ಣಿಮಾ ಕೆ, ಅಮಿತಾ ಕೆ, ಶುಭಾಶ್ರೀ ಬಲ್ಲಾಳ್, ಸುಮಶ್ರೀ ಮತ್ತು ಮಕ್ಕಳನ್ನು ಪುಸ್ತಕ ಕಾಣಿಕೆಯಿತ್ತು ಗೌರವಿಸಲಾಯಿತು.
ಕೆರೆದಂಡೆ ವೆಂಕಟೇಶ ನಾಯಕ್, ಪ್ರಭಾಕರ ಶೇರಿಗಾರ್, ಮೀರಾ ದೇವಾಡಿಗ ಮುದ್ರಾಡಿ, ಮಂಜುನಾಥ ದೇವಾಡಿಗ, ಕಿರಣ್ ಎಸ್ ಡಿ ಎಂ ಸಿ ಸದಸ್ಯರಾದ ಸಂಧ್ಯಾ, ಸೌಮ್ಯ, ಶ್ರೀಧರ ಆಚಾರ್ಯ ಉಪಸ್ಥಿತರಿದ್ದರು.