ಬ್ರಹ್ಮಾವರ: ತಾಲೂಕಿನ ವಡ್ಡರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾವಾಡಿ ಗ್ರಾಮದಲ್ಲಿ ಕೊರಗರಿಗೆ ಮಂಜೂರಾತಿ ಆದ ಜಾಗವನ್ನು ವ್ಯಕ್ತಿಯೋರ್ವರು ಕಬಳಿಸಿರುವುದಾಗಿ ಅಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ನೊಂದ ಕೊರಗ ನಿವಾಸಿಗಳು, ಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾವಾಡಿ ಗ್ರಾಮದ ಮಾನಂಬಳ್ಳಿ ಎಂಬಲ್ಲಿ 10 ಕೊರಗ ಕುಟುಂಬಗಳಿಗೆ ತಲಾ ಒಂದು ಎಕ್ರೆಯಂತೆ ಭೂಮಿ ಮಂಜೂರಾಗಿದ್ದು ಆ ಭೂಮಿಯಲ್ಲಿ ಪುನರ್ವಸತಿ ಸಂಬಂಧಿಸಿದ ಕುಡಿಯುವ ನೀರು, ರಸ್ತೆ, ವಿದ್ಯುತ್ ಕಾರ್ಯದ ಅಭಿವೃದ್ದಿ ಕೆಲಸಗಳು ಐ.ಟಿ.ಡಿಪಿ ಇಲಾಖೆಯ ಮೂಲಕ ಆಗಿರುತ್ತದೆ.
ಈಗ ಸದ್ಯ ಆ ಸ್ಥಳದಲ್ಲಿ 15 ಕುಟುಂಬಗಳು ವಾಸವಾಗಿದ್ದೇವೆ. ಅಲ್ಲಿನ ವ್ಯಕ್ತಿಯೋರ್ವರು ಗುಂಪಿಗೆ ಮಂಜೂರಾದ ನೀರಾವರಿ ಬಾವಿಯನ್ನು ಅತಿಕ್ರಮಿಸಿದ್ದು , ಸ್ಥಳೀಯರು ತಿರುಗಾಡುವ ರಸ್ತೆಗೆ ಬೇಲಿ ಹಾಕಿದ್ದಾರೆ. ಇದರಿಂದ ಇಲ್ಲಿನ ಕೊರಗ ಕುಟುಂಬದವರಿಗೆ ಸಮಸ್ಯೆ ಆಗಿದ್ದು, ಆದಷ್ಟು ಬೇಗ ಅತಿಕ್ರಮಣ ತೆರವು ಮಾಡಬೇಕೆಂದು ಅವರು ಆಗ್ರಹಿಸಿದರು.