ಉಡುಪಿ: ಈ ಬಾರಿ ಕೇಂದ್ರದಲ್ಲಿ ಮೋದಿ ಸರ್ಕಾರ ಬರುವುದಿಲ್ಲ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಐದಾರುಕ್ಕಿಂತ ಹೆಚ್ಚು ಸೀಟು ಬರಲ್ಲ, ಹೆಚ್ಚು ಅಂದರೆ 10 ಸೀಟು ಬರಬಹುದು. ರಾಜ್ಯದಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಭವಿಷ್ಯ ನುಡಿದರು.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೋದಿ ಸರಕಾರ ಬರದೇ ಇರೋದಕ್ಕೆ ಅನೇಕ ಕಾರಣಗಳಿವೆ. ಬಿಜೆಪಿ ನಾಯಕರ ಜೊತೆ ಈ ಬಗ್ಗೆ ಬಹಿರಂಗ ಚರ್ಚೆಗೆ ನಾನು ತಯಾರಿದ್ದೇನೆ. ವಿವಾದ ಬೇಡ ಅಭಿವೃದ್ಧಿ ಇಟ್ಟುಕೊಂಡು ಚರ್ಚೆ ಮಾಡೋಣ. ನೋಟ್ ಅಮಾನ್ಯ, ಜಿಡಿಪಿ , ವಿಚಾರ ಇಟ್ಟುಕೊಂಡು ಮಾತನಾಡೋಣ. ಸ್ಮಾರ್ಟ್ ಸಿಟಿ ಬುಲೆಟ್ ಟ್ರೈನ್, ಎಲ್ಲರಿಗೂ ಮನೆ ಅನೇಕ ಘೋಷಣೆಗಳಿವೆ. 2004 ರಿಂದ 2014ರ ವರೆಗೆ ನಮ್ಮ ಜಿಡಿಪಿ ಶೇ. 183ರಷ್ಟು ಗ್ರೋಥ್ ಇತ್ತು. ಕಳೆದ 9 ವರ್ಷಗಳಲ್ಲಿ ಕೇವಲ ಶೇ. 83ರಷ್ಟಿದೆ. ನೋಟ್ ಅಮಾನ್ಯದಿಂದ ಭಯೋತ್ಪಾದನೆ ನಿಲ್ಲುತ್ತೇ ಎಂದರು. ಆದರೆ ಪುಲ್ವಾಮಾ ಅಟ್ಯಾಕ್ ಆಗಲಿಲ್ಲವೇ 300 ಕೆಜಿ ಆರ್ಡಿಎಕ್ಸ್ ಸಿಗಲಿಲ್ವೆ ಎಂದು ಟೀಕಿಸಿದರು.