ಉಡುಪಿ: ಬೀದಿನಾಯಿಯೊಂದನ್ನು ಹೊಡೆದು ಕೊಂದ ಘಟನೆ ಉಡುಪಿಯ ಶ್ರೀ ಮಧ್ವ ವಾದಿರಾಜ ಕಾಲೇಜಿನ ಆವರಣದಲ್ಲಿ ಜ.27ರಂದು ನಡೆದಿದೆ. ಈ ಸಂಬಂಧ ಕಾಲೇಜಿನ ಸಿಬ್ಬಂದಿ ವಿರುದ್ಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲೇಜಿನ ಗಾರ್ಡನ್ ಕೆಲಸ ಮಾಡುತ್ತಿರುವ ನಾಗರಾಜ್ ಮತ್ತು ವಾರ್ಡನ್ ರಾಜೇಶ್ ಸೇರಿಕೊಂಡು ಈ ದುಷ್ಕೃತ್ಯವನ್ನು ಎಸಗಿದ್ದಾರೆ ಎನ್ನಲಾಗಿದೆ.
ಈ ಇಬ್ಬರು ಆರೋಪಿಗಳು ಸೇರಿಕೊಂಡು ಜ.27ರಂದು ಕಾಲೇಜಿನ ಆವರಣದೊಳಗಿದ್ದ ಬಿಳಿಬಣ್ಣದ ಬೀದಿನಾಯಿಯನ್ನು ಕೋಲಿನಿಂದ ಹೊಡೆದು ಸಾಯಿಸಿದ್ದಾರೆ. ಈ ದೃಶ್ಯಾವಳಿಯನ್ನು ಅದೇ ಕಾಲೇಜಿನ ವಿದ್ಯಾರ್ಥಿಯೊಬ್ಬ ವೀಡಿಯೋ ರೆಕಾರ್ಡ್ ಮಾಡಿ ಮೊಬೈಲ್ ಮೂಲಕ ಕಳುಹಿಸಿದ್ದಾರೆ ಎಂದು ಎಸ್.ಪಿ.ಸಿ.ಎ. ಪ್ರಾಣಿ ದಯಾ ಸಂಘದ ಸದಸ್ಯೆ, ಬಂಟಕಲ್ ಅರಸಿಕಟ್ಟೆ ನಿವಾಸಿ ಮಂಜುಳಾ ಕರ್ಕೇರ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಹೊಡೆದು ಸಾಯಿಸಿದ ನಾಯಿಯನ್ನು ಬಳಿಕ ಅವರು ಒಂದು ಗೋಣಿ ಚೀಲದಲ್ಲಿ ಎಳೆದುಕೊಂಡು ಬಂದು ಇನ್ನೊಂದು ಗೋಣಿ ಚೀಲದಲ್ಲಿ ಹಾಕುತ್ತಿರುವ ದೃಶ್ಯಾವಳಿ ಈ ವಿಡಿಯೋದಲ್ಲಿ ಸೆರೆಯಾಗಿದೆ. ನಾಯಿಯನ್ನು ಹೊಡೆದು ಸಾಯಿಸಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.