ಕಾರವಾರ: ಹಿಂದುಳಿದ ವರ್ಗದ ಮತ್ತು ಸಮಾಜ ಕಲ್ಯಾಣದ ಮಹಿಳಾ ಹಾಸ್ಟೇಲ್ ಹಾಗೂ ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆಗಾಗಿ ಕರಾಟೆ ಕಲಿಸುವ ನಿಟ್ಟಿನಲ್ಲಿ ಆದೇಶ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ ಅವರು ಹೇಳಿದ್ದಾರೆ.
ಕಾರವಾರದ ಸರ್ಕ್ಯೂಟ್ ಹೌಸ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಒಟ್ಟೂ 1702 ವಸತಿ ಶಾಲೆಗಳಲ್ಲಿ ಮೆಟ್ರಿಕ್ ನಂತರದ ಹೆಣ್ಣುಮಕ್ಕಳಿಗೆ ಕರಾಟೆ ಕಲಿಸುವ ಯೋಜನೆ ಜಾರಿಗೆ ತರಲಾಗಿದೆ. ಇದನ್ನು ಓಬವ್ವ ಆತ್ಮರಕ್ಷಣೆ ಕಲೆ ಎನ್ನುವ ಹೆಸರಿನಲ್ಲಿ ಹೆಣ್ಣುಮಕ್ಕಳಿಗೆ ದೈಹಿಕವಾಗಿ ಆತ್ಮಸ್ಥೈರ್ಯ ಹೆಚ್ಚಿಸಲು ಹಾಗೂ ಅವರಿಗೆ ಸ್ವಯಂ ರಕ್ಷಣೆಗಾಗಿ ಕರಾಟೆ ಕಲಿಸುವ ಕಾರ್ಯ ಮಾಡುತ್ತಿದ್ದೇವೆ.
1.82 ವಿದ್ಯಾರ್ಥಿಗಳಿಗೆ ಮೊದಲ ಹಂತದಲ್ಲಿ ಕರಾಟೆ ಕಲಿಸಲಾಗುತ್ತಿದೆ. ಈಗಾಗಲೇ ಕರಾಟೆ ಕಲಿತು ಬ್ಲ್ಯಾಕ್ ಬೇಲ್ಟ್ ಪಡೆದ ಮಹಿಳೆಯರಿಂದ ತರಬೇತಿ ನೀಡಲಾಗುವುದು. ಈಗಾಗಲೇ 800 ಶಾಲೆಗಳಿಗೆ ಸಮವಸ್ತ್ರ ನೀಡಲಾಗಿದೆ. ಫೆ.7ರಂದು ಕರಾಟೆ ತರಬೇತಿಯನ್ನು ಸಿಎಂ ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ.
ಜಿಲ್ಲಾಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಲಿದ್ದಾರೆ. ಈಗಾಗಲೇ ಖಾಸಗಿಯಾಗಿ ಹಲವೆಡೆ ಕರಾಟೆ ತರಬೇತಿಗಳನ್ನು ನೀಡಲಾಗುತ್ತಿದೆ. ಆದರೆ ಸರ್ಕಾರವೇ ಇಂಥ ಸ್ವ-ರಕ್ಷಣಾ ಕಲೆಯನ್ನು ಜಾರಿಗೆ ತರಲು ಮುಂದಾಗಿದೆ. ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ಈಗಾಗಲೇ ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಕ್ರೈಸ್ಟ್, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ಶಾಲೆಗಳು ಹಾಗೂ ಹಾಸ್ಟೆಲ್ಗಳಲ್ಲಿ ಕರಾಟೆ ತರಬೇತಿ ನೀಡಲಾಗುತ್ತಿದೆ ಎಂದರು.