ಉಡುಪಿ: 2024ರಲ್ಲಿ ನರೇಂದ್ರ ಮೋದಿಯವರಿಗೆ ದೇಶದ ಜನತೆ ಮತ್ತೊಮ್ಮೆ ಮನ್ನಣೆ ಕೊಟ್ಟು ಪ್ರಧಾನಿಯಾಗಿ ಆರಿಸಿ ಬರಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನವಕರ್ನಾಟಕದಿಂದ ನವಭಾರತದ ನಿರ್ಮಾಣವಾಗುತ್ತದೆ ಎಂದು ಕೂಡ ಹೇಳಿದ್ದಾರೆ.
ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಉಡುಪಿಗೆ ಆಗಮಿಸಿರುವ ಅವರು, ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಮೋದಿ ಸರಕಾರ ಎಂಟು ವರ್ಷ ಪೂರ್ಣಗೊಳಿಸಿದೆ. ಸರಕಾರದಿಂದ 8 ವರ್ಷದಲ್ಲಿ ಆದ ಲಾಭ ಏನು ಎಂಬ ರಿಪೋರ್ಟ್ ಕೊಡುತ್ತೇವೆ. ಇದೇ ಸಮಯದಲ್ಲಿ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವ ನಡೆಸುತ್ತಿದ್ದೇವೆ. ಮೋದಿ ಅಧಿಕಾರ ವಹಿಸಿಕೊಂಡಾಗ ಇದ್ದ ಸ್ಥಿತಿ ಏನು ಎಂಬ ಬಗ್ಗೆ ಚರ್ಚೆ ಆಗಬೇಕು, ಮೋದಿ ಅವರು ಗುಜರಾತ್ ಸಿಎಂ ಆಗಿದ್ದ ಸಮಯದಲ್ಲೂ ರಿಪೋರ್ಟ್ ಕಾರ್ಡ್ ಕೊಡುತ್ತಿದ್ದರು ಎಂದರು.
ಮೋದಿ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಮತ್ತು ಈ ಸಮಯದಲ್ಲಿ ದೇಶದ ಆರ್ಥಿಕ ಹಾಗೂ ಇತರ ಸ್ಥಿತಿಯನ್ನು ಸಮರ್ಥವಾಗಿ ಎದುರಿಸಿದೆ. ಕೋವಿಡ್ ಸಮಯದಲ್ಲಿ ಆತ್ಮ ನಿರ್ಭರ ಭಾರತದ ಕರೆಯನ್ನು ಮೋದಿ ನೀಡಿದರು. ಪ್ರತಿಯೊಂದು ರಂಗದಲ್ಲೂ ಭಾರತ ಸ್ವಾವಲಂಬನೆ ಸಾಧಿಸಬೇಕು ಎನ್ನುವ ದೃಷ್ಟಿಯಿಂದ ಕೆಲಸ ಮಾಡಿದರು ಎಂದರು.
ದೇಶದ ಆಹಾರ, ಅರೋಗ್ಯ ಮತ್ತು ಉದ್ಯೋಗ ಭದ್ರತೆ ಗೆ ಅನೇಕ ಗರೀಬ್ ಕಲ್ಯಾಣ್ ಯೋಜನೆಗಳು ಜಾರಿಯಾಗಿವೆ. ಅಭಿವೃದ್ಧಿಯಲ್ಲಿ ಜನರು ಫಲಾನುಭವಿ ಆಗದೇ ಪಾಲುದಾರರಾಗಬೇಕು. ಸಬ್ಕ ಸಾಥ್ ಸಬ್ಕ ವಿಕಾಸ್ ಸಬ್ಕ ವಿಶ್ವಾಸ ಧ್ಯೇಯ ನಮ್ಮದಾಗಿದೆ. ಪ್ರತಿ ಮನೆಗೆ ಕುಡಿಯುವ ನೀರು ಮುಟ್ಟಿಸಲು ದಿಟ್ಟ ನಿರ್ಧಾರ ಮಾಡಿದ್ದಾರೆ. ಕರ್ನಾಟಕದಲ್ಲಿ 25 ಲಕ್ಷ ಮನೆಗಳಿಗೆ ಜಲ ಜೀವನ್ ಯೋಜನೆ ಜಾರಿಮಾಡಲಾಗಿದ್ದು, ಈ ವರ್ಷ ಮತ್ತೆ 25 ಲಕ್ಷ ಮನೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಎಲ್ ಪಿ ಜಿ ವಿತರಣೆಗೆ ವ್ಯಾಪಕ ಯೋಜನೆ, ಪ್ರತೀ ಮನೆಗೆ ವಿದ್ಯುತ್ ಮುಟ್ಟಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಶೌಚಾಲಯ ನಿರ್ಮಾಣ ಮತ್ತು ಕಸ ವಿಲೇವಾರಿಗೆ ಅನುದಾನ ಮಾಡಲಾಗಿದೆ. ಉತ್ಪಾದನಾ ವಲಯಕ್ಕೆ ಕೃಷಿ ಬಲ ತುಂಬುವಂತೆ ಕೃಷಿ ಸನ್ಮಾನ ಯೋಜನೆ , ಪ್ರತೀ ರೈತರಿಗೆ 10 ಸಾವಿರ ಬೆಂಬಲ ಮೊತ್ತ ವಿತರಣೆ ಆಗುತ್ತಿದೆ. ಉತ್ಪಾದನ ವಲಯದಲ್ಲಿ ಮುದ್ರಾ ಯೋಜನೆ ಪ್ರತೀ ಜಿಲ್ಲೆಗಳಲ್ಲಿ ಸಾವಿರಾರು ಜನರಿಗೆ ಉಪಯೋಗವಾಗಿದೆ. ಐಟಿ, ಬಿಟಿ, ಫಾರ್ಮ, ಕ್ಷೇತ್ರಗಳಲ್ಲಿ ಸ್ಟಾರ್ಟ್ ಅಪ್ ಆರಂಭವಾಗಿದೆ. ನವಭಾರತ ನಿರ್ಮಾಣಕ್ಕೆ ಮೋದಿ ಸರಕಾರದಿಂದ ನಿರಂತರ ಪರಿಶ್ರಮವಾಗಿದೆ. ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಯೋಜನೆ ಮೂಲಕ ನೇರವಾಗಿ ಫಲಾನುಭವಿಗಳಿಗೆ ಲಾಭ ನೀಡಲಾಗಿದೆ ಎಂದರು.
ಹೊಸ ಶಿಕ್ಷಣ ನೀತಿಯ ಮೂಲಕ ವಿದ್ಯಾರ್ಥಿಗಳಿಗೆ ವ್ಯಾಪಕ ಅವಕಾಶ ಮಾಡಿಕೊಡಲಾಗುತ್ತಿದೆ. 21ನೇ ಶತಮಾನದ ಸವಾಲುಗಳಿಗೆ ಹೊಸ ಶಿಕ್ಷಣ ನೀತಿಯೇ ಉತ್ತರವಾಗಿದೆ. ಪರ್ಯಾಯ ಇಂಧನಗಳ ಬಳಕೆಗೆ ಪಿಎಂ ಒತ್ತು ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ಇಥನಾಲ್ ಪೂರೈಕೆಗೆ ವಿಶೇಷ ಒತ್ತು ನೀಡಿದ್ದಾರೆ. ಹೈಡ್ರೋಜನ್ ಇಂಧನ ಬಳಕೆಗೆ ಸಂಶೋಧನೆ ನಡೆಯುತ್ತಿದೆ. ಸಮುದ್ರದ ನೀರಿನಿಂದ ಅಮೋನೀಯಂ ಉತ್ಪಾದನೆಗೆ ಸಂಶೋಧನೆ ಪ್ರಗತಿಯಲ್ಲಿದೆ. ಸೆಮಿ ಕಂಡಕ್ಟರ್ ಉತ್ಪಾದನೆಗೆ ಕರ್ನಾಟಕವೇ ಮೊದಲು ಸಹಿ ಮಾಡಿದೆ ಎಂದರು.
ಕರಾವಳಿಯಲ್ಲಿ ಕ್ಲೀನ್ ಗ್ರೀನ್ ಎನರ್ಜಿ ಸ್ಥಾಪನೆ ಮಾಡಬಹುದು. ಈ ಬಗ್ಗೆ ಚರ್ಚೆ ಚಿಂತನೆ ನಡೆದಿದೆ ಎಂದರು. ಪ್ರಧಾನಿ ಮೋದಿ ಎರಡು ಆಯಾಮದ ರಾಜಕಾರಣಿಯಾಗಿದ್ದಾರೆ. ಮೋದಿ ಪೀಪಲ್ ಪಾಲಿಟಿಕ್ಸ್ ಮಾಡುತ್ತಾರೆ. ಮೋದಿ ಮುಂದಿನ ಜನಾಂಗ ಕಟ್ಟುವ ಮುತ್ಸದ್ಧಿ ರಾಜಕಾರಣಿಯು ಆಗಿದ್ದಾರೆ ಎಂದು ಕೂಡ ಸಿಎಂ ಬೊಮ್ಮಾಯಿ ಶ್ಲಾಘಿಸಿದರು.