ಕಾರವಾರ: ದೌರ್ಜನ್ಯಕ್ಕೊಳಗಾಗುವ ಮಹಿಳೆಯರಿಗೆ ನೆರವಾಗುವ ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರಗಳನ್ನು ಪುನರ್ ಆರಂಭಿಸುವಂತೆ ಶಾಸಕರಾದ ಶ್ರೀಮತಿ ರೂಪಾಲಿ ಎಸ್.ನಾಯ್ಕ ಅವರ ಮನವಿಗೆ ಸ್ಪಂದಿಸಿದ ಮಹಿಳಾ ಮಕ್ಕಳ ಕಲ್ಯಾಣ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಶ್ರೀ ಹಾಲಪ್ಪ ಅಚಾರ್, ಸಾಂತ್ವನ ಸಹಾಯವಾಣಿ ಕೇಂದ್ರಗಳನ್ನು ಕೂಡಲೇ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸರ್ಕಾರ ಸಾಂತ್ವನ ಸಹಾಯವಾಣಿ ಕೇಂದ್ರಗಳನ್ನು ಸ್ಥಗಿತಗೊಳಿಸಲು ದಿನಾಂಕ 24/04/2021ರಂದು ಆದೇಶ ಹೊರಡಿಸಿರುತ್ತದೆ. ಸಾಂತ್ವನ ಸಹಾಯವಾಣಿಯನ್ನು ಸ್ಥಗಿತಗೊಳಿಸುವ ಸರಕಾರದ ನಿರ್ಧಾರ ಸಾರ್ವಜನಿಕರ ಕಳವಳಕ್ಕೂ ಕಾರಣವಾಗಿದೆ. ಮಹಿಳೆಯರ ರಕ್ಷಣೆಗೆ ಸಾಂತ್ವನ ಸಹಾಯವಾಣಿ ಅವಶ್ಯಕವಾಗಿದೆ.
ಸಾಂತ್ವನ ಮಹಿಳಾ ವೇದಿಕೆಗಳು ಕಳೆದ 12 ವರ್ಷಗಳಿಂದ ನೊಂದ ಹೆಣ್ಣು ಮಕ್ಕಳ ಸಂಕಷ್ಟಕ್ಕೆ ಸದಾ ಸ್ಪಂಧಿಸುತ್ತ ಬಂದಿದೆ. ಕೊರೋನಾದಂತಹ ಸಂಕಷ್ಟ ಕಾಲದಲ್ಲಿ ಸಹಾಯವಾಣಿಯು ಸ್ಥಗಿತಗೊಂಡಲ್ಲಿ ಮಹಿಳೆಯರ ಸಂಕಷ್ಟಕ್ಕೆ ಸಹಾಯ ಹಸ್ತ ಇಲ್ಲದಂತಾಗುತ್ತದೆ ಎಂದು ಸಚಿವರಿಗೆ ಮನವರಿಕೆ ಮಾಡಿದರು.
ಸಚಿವರಿಂದ ಸಕಾರಾತ್ಮಕ ಸ್ಪಂದನೆ
ಶಾಸಕಿ ಶ್ರೀಮತಿ ರೂಪಾಲಿ ಎಸ್. ನಾಯ್ಕ ಅವರ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ಹಾಲಪ್ಪ ಆಚಾರ ಅವರು ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಮತ್ತು ಶಿರಸಿ ಸಾಂತ್ವನ ಸಹಾಯವಾಣಿ ಕೇಂದ್ರದ ಮರು ಪ್ರಾರಂಭಿಸುವುದು ಅತಿ ಅವಶ್ಯಕವಾಗಿದ್ದು ಅದನ್ನು ಕೂಡಲೆ ಆರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇನ್ನೂ ಕಾರವಾರದಲ್ಲಿ ಸಖಿ ಮತ್ತು ಒನ್ಸ್ಟಾಪ್ ಸೆಂಟರ್ ಇರುವುದರಿಂದ ಸಾಂತ್ವನ ಸಹಾಯವಾಣಿ ಕೇಂದ್ರದ ಅವಶ್ಯಕತೆ ಕುರಿತು ಮರುಪರಿಶೀಲಿಸಲಾಗುವುದು ಸಚಿವರು ಭರವಸೆ ನೀಡಿದ್ದಾರೆ. ತಮ್ಮ ಬೇಡಿಕೆಗೆ ಸ್ಪಂದಿಸಿದ ಸಚಿವರಿಗೆ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ಶ್ರೀಮತಿ ರೂಪಾಲಿ ಎಸ್. ನಾಯ್ಕ ಅವರು ಅಭಿನಂದನೆ ಸಲ್ಲಿಸಿದ್ದಾರೆ.