ಹೆಬ್ರಿ: ಹೆಬ್ರಿ ತಾಲೂಕು ವ್ಯಾಪ್ತಿಯ ಕುಚ್ಚೂರು ಗ್ರಾಮದ ಕುಡಿಬೈಲು ಗ್ರಾಮೀಣ ರಸ್ತೆ ಇದುವರೆಗೆ ಡಾಮಾರು ಕಾಣದೆ ಸಂಪೂರ್ಣ ಹದಗೆಟ್ಟಿದ್ದು ಸಂಚಾರಕ್ಕೆ ಭಾರೀ ಸಮಸ್ಯೆಯಾಗಿ ಪರಿಣಮಿಸಿದೆ.
ಕುಚ್ಚೂರಿನಿಂದ ಸೊಳ್ಳೆಕಟ್ಟೆಗೆ ಸಂಪರ್ಕ ಕಲ್ಪಿಸುವ ಕೇವಲ 2 ಕಿ.ಮೀ ರಸ್ತೆ ಇದುವರೆಗೆ ಡಾಮಾರು ಕಂಡಿಲ್ಲ. ಈ ಭಾಗದಲ್ಲಿ ಸುಮಾರು 500ಕ್ಕೂ ಹೆಚ್ಚು ಹಿಂದುಳಿದ ವರ್ಗಗಳ ನಿವಾಸಿಗಳು ಸೇರಿದಂತೆ ಗ್ರಾಮಸ್ಥರು ವಾಸವಾಗಿದ್ದಾರೆ. ಸ್ಥಳೀಯಾಡಳಿತ ಗುಂಡಿಗಳಿಗೆ ಕೇವಲ ಮಣ್ಣು ಹಾಕಿ ಸುಮ್ಮನಾಗುತ್ತದೆ. ಆದರೆ ಮಳೆಗಾಲದಲ್ಲಿ ನೀರು ರಸ್ತೆಯಲ್ಲಿಯೇ ಹರಿದು ಮಣ್ಣು ಸಂಪೂರ್ಣ ಕೊಚ್ಚಿಕೊಂಡು ಹೋಗಿ ಕೆಸರು ಗದ್ದೆಯಾಗಿ ಮಾರ್ಪಡುತ್ತದೆ.
ಈ ಕೆಸರಿನ ರಸ್ತೆ ಮೇಲೆ ದ್ವಿಚಕ್ರ ವಾಹನ ಸವಾರರು ಹಾಗೂ ಇತರ ವಾಹನಗಳು ಸಂಚರಿಸಲಾಗದೆ ಅನೇಕ ಅನಾಹುತಗಳು ಸಂಭವಿಸಿದೆ. ಈ ಬಗ್ಗೆ ಸ್ಥಳೀಯರು ಹಾಗೂ ಕುಚ್ಚೂರು ಕುಡಿಬೈಲು ಶಾಂತಿನಿಕೇತನ ತಂಡದ ಸದಸ್ಯರು ಹಲವು ಬಾರಿ ಶ್ರಮದಾನದ ಮೂಲಕ ರಸ್ತೆ ದುರಸ್ತಿ ಮಾಡಿ ಶಾಶ್ವತ ದುರಸ್ತಿ ಬಗ್ಗೆ ಸಂಬಂಧ ಪಟ್ಟವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ರಸ್ತೆ ಮಳೆಗಾಲದಲ್ಲಿ ಹೊಂಡಗಳಾಗಿ ರಸ್ತೆಯಲ್ಲಿ ನೀರು ಹರಿದು ರಸ್ತೆ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆ ಡಾಮಾರು ಕಾಮಗಾರಿ ಮಾಡುವಂತೆ ಹಲವಾರು ಬಾರಿ ಸ್ಥಳೀಯಾಡಳಿತ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಈ ಹಿಂದೆ ರಸ್ತೆ ಅಭಿವೃದ್ಧಿಗೆ 1.50 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಜನಪ್ರತಿನಿಧಿಗಳು ಆಶ್ವಾಸನೆ ನೀಡಿದ್ದರು. ಆದರೆ ರಸ್ತೆ ಮಾತ್ರ ಅಭಿವೃದ್ಧಿಯಾಗಿಲ್ಲ. ಚುನಾವಣೆ ಬಂದಾಗ ಜನಪ್ರತಿನಿಧಿಗಳು ಭರವಸೆ ನೀಡುತ್ತಾರೆ. ಬಳಿಕ ಈ ಕಡೆ ಸುಳಿಯುವುದಿಲ್ಲ. ಶೀಘ್ರ ಈ ರಸ್ತೆ ದುರಸ್ತಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರತಿಭಟನೆಗೆ ಕರೆ
ಸಕಾಲದಲ್ಲಿ ರಸ್ತೆ ದುರಸ್ತಿಯಾಗದಿದ್ದಲ್ಲಿ ಪಕ್ಷ ಭೇದ ಮರೆತು ಹೆಬ್ರಿಯಲ್ಲಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಸ್ಥಳೀಯರು ಹೇಳಿದ್ದಾರೆ. ಊರಿನ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡದೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ ಎಂದು ಸ್ಥಳೀಯ ನಾಯಕರು ಕರೆ ಕೊಟ್ಟಿದ್ದಾರೆ.
ನ್ಯೂಸ್ ಕನ್ನಡದ ಜೊತೆ ಮಾತನಾಡಿದ ಕುಚ್ಚೂರು, ಕುಡಿಬೈಲು ಶಾಂತಿನಿಕೇತನ ಯುವ ವೃಂದದ ಅಧ್ಯಕ್ಷ ರಾಜೇಶ್, ಈ ಪರಿಸರದಲ್ಲಿ ಸುಮಾರು 500ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ದಿನನಿತ್ಯ ಈ ರಸ್ತೆಯಲ್ಲಿ ಓಡಾಡುವ ಕಾರ್ಮಿಕರು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಂತು ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಹಾಗೂ ಇತರ ವಾಹನಗಳು ಸಂಚರಿಸಲಾಗದೆ ಅನಾಹುತಗಳು ಸಂಭವಿಸುತ್ತಲೇ ಇರುತ್ತದೆ. ಆದ್ದರಿಂದ ದಯವಿಟ್ಟು ಸಂಬಂಧ ಪಟ್ಟವರು ಈ ರಸ್ತೆ ಸಮಸ್ಯೆ ಬಗೆಹರಿಸಬೇಕಾಗಿ ವಿನಂತಿಸಿಕೊಂಡರು.
ನ್ಯೂಸ್ ಕನ್ನಡದ ಜೊತೆ ಮಾತನಾಡಿದ ಕೊಡಿ ಬೈಲು ನಿವಾಸಿ, ದೀಕ್ಷಿತ್ ನಾಯಕ್, ಕುಚ್ಚೂರು ಗ್ರಾಮದ ಕುಡಿಬೈಲು ರಸ್ತೆ ಸಮಸ್ಯೆ ಇಂದಿನದಲ್ಲ, ಸುಮಾರು ವರ್ಷಗಳಿಂದ ಇಲ್ಲಿನ ಜನರು ಮಳೆಗಾಲದ ಸಂದರ್ಭದಲ್ಲಿ ಸಮಸ್ಯೆ ಅನುಭವಿಸುತ್ತಿದ್ದಾರೆ. ಇಲ್ಲಿ ಹೈನುಗಾಗಿಕೆಗೆ ಹೆಚ್ಚಿನ ಜನ ಅವಲಂಭಿತರಾಗಿರೊದ್ರಿಂದ ಬೆಳಗ್ಗಿನ ಜಾವ ಹಾಲು ತೆಗೆದುಕೊಂಡು ಹೋಗುವಾಗ, ಬರುವಾಗ ಅನೇಕರು ಇಲ್ಲಿ ಸ್ಕೂಟರ್ ಸ್ಕಿಡ್ ಆಗಿ ಬಿದ್ದ ನಿದರ್ಶನಗಳಿವೆ. ಈ ಸಮಸ್ಯೆಯಿಂದ ದೂರ ಆಗಲು ರಾಜಕಾರಣಿಗಳ ಮೊರೆ ಹೋದರು ಕೇವಲ ಆಶ್ವಾಸನೆಗಳು ನಮ್ಮ ಪಾಲಿಗೆ ಸಿಗುತ್ತಿವೆ. ದಯವಿಟ್ಟು ನಮಗೆ ಸಾರ್ವಕಾಲಿಕ ರಸ್ತೆ ನಿರ್ಮಿಸಿ ಕೊಡಿ ಎಂದು ಮನವಿ ಮಾಡಿದರು.