ಮಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10ರ ವಿಜೇತರಾಗಿ ಕಾರ್ತಿಕ್ ಮಹೇಶ್ ಕಪ್ ಎತ್ತಿ ಹಿಡಿದಿದ್ದಾರೆ. ಇತ್ತ ಡ್ರೋಣ್ ಪ್ರತಾಪ್ ಮೊದಲ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಈ ನಡುವೆಯೇ ಇಲ್ಲೊಬ್ಬ ಅಪರೂಪದ ಅಭಿಮಾನಿ ಡ್ರೋಣ್ ಪ್ರತಾಪ್ ವಿಚಾರಕ್ಕೆ ಮುನ್ನೆಲೆಗೆ ಸದ್ದು ಮಾಡುತ್ತಿದ್ದಾರೆ.
ಬಿಗ್ ಬಾಸ್ ಸೀಸನ್ 10ರಲ್ಲಿ ಡ್ರೋನ್ ಪ್ರತಾಪ್ ಸೋತದ್ದೇ ತಡ, ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಯುವಕನೋರ್ವ ಅರ್ಧ ಗಡ್ಡ, ಅರ್ಧ ಮೀಸೆ ತೆಗೆದು ಗಮನ ಸೆಳೆದಿದ್ದಾರೆ. ಕಡಬ ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ನಿವಾಸಿ ಝೈನುಲ್ ಅಬಿದ್ ಎಂಬಾತ ಬಿಗ್ಬಾಸ್ ನಲ್ಲಿ ಡ್ರೋಣ್ ಪ್ರತಾಪ್ ಗೆದ್ದೇ ಗೆಲ್ಲುತ್ತಾರೆ, ಸೋತರೆ ಅರ್ಧ ಗಡ್ಡ, ಮೀಸೆ ತೆಗೆಯುತ್ತೇನೆ ಎಂದು ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಂನಲ್ಲಿ ಚಾಲೆಂಜ್ ಹಾಕಿದ್ದರು. ಅಲ್ಲದೆ, ಹಸಿ ಮೆಣಸಿನಕಾಯಿ ತಿನ್ನುವುದಾಗಿ ಮತ್ತೊಂದು ವಿಡಿಯೋ ಹರಿಬಿಟ್ಟಿದ್ದರು.
ಆದರೆ, ಭಾನುವಾರ ಝೈನುಲ್ ಅಬಿದ್ ಅವರ ಲೆಕ್ಕಾಚಾರ ಉಲ್ಟಾ ಆಗಿದೆ. ಕಾರ್ತಿಕ್ ಮಹೇಶ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ಡ್ರೋಣ್ ಪ್ರತಾಪ್ ಕೇವಲ ರನ್ನರ್ ಅಪ್ಗೆ ಸಮಾಧಾನಪಟ್ಟುಕೊಂಡಿದ್ದಾರೆ. ಇತ್ತ ಈ ಫಲಿತಾಂಶ ಹೊರಬರುತ್ತಿದ್ದಂತೆಯೇ ಅಬಿದ್ ಅರ್ಧ ಗಡ್ಡ, ಅರ್ಧ ಮೀಸೆ ಬೋಳಿಸಿಕೊಂಡಿದ್ದಾರೆ. ಹಸಿಮೆಣಸಿನಕಾಯಿ ತಿಂದ ವಿಡಿಯೋವನ್ನೂ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಈಗ ವೈರಲ್ ಆಗ್ತಿದೆ.