ಮಂಗಳೂರು: ಯಕ್ಷಗಾನ ಮೇಳಗಳು ರಾತ್ರಿಯಿಡೀ ಯಕ್ಷಗಾನ ಪ್ರದರ್ಶನ ನೀಡುವುದಕ್ಕೆ ಇದ್ದ ನಿರ್ಬಂಧವನ್ನು ಕರ್ನಾಟಕ ಹೈಕೋರ್ಟ್ ತೆರವುಗೊಳಿಸಿದೆ.
ಆದರೆ, ಕಟೀಲು ದೇಗುಲದ ಯಕ್ಷಗಾನ ಮೇಳಗಳ ಪ್ರದರ್ಶನವು ಕಾಲಮಿತಿಯಲ್ಲೇ ಮುಂದುವರಿಯಲಿದೆ ಎನ್ನಲಾಗಿದೆ.
2022 ರ ನವೆಂಬರ್ 15ರಂದು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು ಯಕ್ಷಗಾನ ಮೇಳಗಳಿಗೆ ಸಮಯ ನಿರ್ಬಂಧವನ್ನು ವಿಧಿಸಿ, ಸಂಜೆ 5 ರಿಂದ 12.30 ರವರೆಗೆ ಮಾತ್ರ ಪ್ರದರ್ಶನಕ್ಕೆ ಅವಕಾಶ ನೀಡಿ ಆದೇಶ ಹೊರಡಿಸಿದ್ದರು.
ಯಕ್ಷಗಾನ ಪ್ರದರ್ಶನಗಳು ‘ಶಬ್ದ ಮಾಲಿನ್ಯ ನಿಯಮಗಳು, 2000’ ರ ಅಡಿಯಲ್ಲಿ ಅನುಮತಿಸಿರುವ ಡೆಸಿಬಲ್ ಮಟ್ಟವನ್ನು ಮೀರುತ್ತದೆ ಎಂಬ ಕಾರಣ, ಶಬ್ದ ಮಾಲಿನ್ಯವನ್ನು ಕಡಿಮೆ ಮಾಡುವ ಆಧಾರದ ಮೇಲೆ ಈ ನಿರ್ಬಂಧ ಹೇರಲಾಗಿತ್ತು.
ರಾತ್ರಿಯಿಂದ ಬೆಳಗಿನ ಜಾವದವರೆಗೆ ಯಕ್ಷಗಾನ ಪ್ರದರ್ಶನಕ್ಕೆ ಇರುವ ನಿರ್ಬಂಧ ಪ್ರಶ್ನಿಸಿ ಬೆಂಗಳೂರಿನ ಭಕ್ತ ಹಾಗೂ ದೇವಸ್ಥಾನದ ಭಕ್ತರಾದ ಕೃಷ್ಣ ಕುಮಾರ್ ಅವರು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ನಿರ್ಬಂಧ ತೆರವುಗೊಳಿಸಿ ಇತ್ತೀಚೆಗೆ ಆದೇಶ ನೀಡಿತ್ತು.
ಯಕ್ಷಗಾನವನ್ನು ಹಿಂದಿನಿಂದಲೂ ರಾತ್ರಿಯಿಂದ ಮುಂಜಾನೆಯವರೆಗೆ ಪ್ರದರ್ಶಿಸುತ್ತಾ ಬರಲಾಗಿದೆ. ಈಗ ಅದೇ ಕಾಲಮಿತಿ ಮುಂದುವರಿದಿರುವುದು ಯಕ್ಷಗಾನ ಪ್ರಿಯರಲ್ಲಿ ಸಂತಸ ಮೂಡಿದೆ.