ಧರ್ಮಸ್ಥಳ: ಧರ್ಮದಲ್ಲಿ ಪ್ರೀತಿ ಮತ್ತು ಅಂತಃಕರಣವಿರುತ್ತದೆಯೇ ಹೊರತು ಖಡ್ಗ ಮತ್ತು ಕ್ರೂರತೆಯಲ್ಲ ಎಂದು ಡಾ. ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟರು.
ಅಮೃತವರ್ಷಿಣಿ ಸಭಾಭವನದಲ್ಲಿ ಸೋಮವಾರ ಲಕ್ಷದೀಪೋತ್ಸವದ ಪ್ರಯುಕ್ತ ಏರ್ಪಡಿಸಿದ್ದ 91ನೇ ಸರ್ವಧರ್ಮ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮದ ಅರ್ಥ ಗೊತ್ತಿಲ್ಲದದವರ ಭಾಷೆ ಹಿಂಸೆ. ಧರ್ಮ ಹಿಂಸೆಗೆ ಪ್ರಚೋದನೆ ನೀಡುತ್ತಿದೆ ಎಂದಾದಲ್ಲಿ ಅದನ್ನು ಯಾರೋ ತಪ್ಪಾಗಿ ತಿರುಚಿ ಪಸರಿಸುತ್ತಿದ್ದಾರೆ ಎಂದರ್ಥ ಎಂದು ತಿಳಿಸಿದರು.
ಧರ್ಮದಲ್ಲಿರುವ ತತ್ವ ಮತ್ತು ಆಚಾರಗಳೆಂಬ ಎರಡು ವಿಭಿನ್ನ ಭಾಗಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವುತ್ತಿದ್ದೇವೆ. ಆಚಾರ ಎಂಬುದು ತೆಂಗಿನ ಚಿಪ್ಪಿನಂತೆ ಒಳಗಿರುವ ತತ್ವ ರಕ್ಷಣೆ ಮಾಡುತ್ತದೆ. ಧರ್ಮ ಸಂರಕ್ಷಣೆ ಆಚಾರದಿಂದ ಸಾಧ್ಯ ಎಂದರು. ಸರ್ವಧರ್ಮ ಸಮನ್ವಯತೆಗೆ ಸಾರ್ಥಕ ಹೆಸರು ಧಮಸ್ಥಳ. ಕ್ಷೇತ್ರದ ಎಲ್ಲಾ ಕೆಲಸಗಳಲ್ಲೂ ಸಾಮರಸ್ಯವಿದೆ. ಸಮ್ಮೇಳನದಂತಹ ಕಾರ್ಯಗಳನ್ನು ಪರಂಪರಾಗತವಾಗಿ ವೃತದಂತೆ ನಡೆಸಿಕೊಂಡು ಬರುವುದು ದೊಡ್ಡ ಸಾಧನೆ ಎಂದು ಶ್ಲಾಘಿಸಿದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಸಿದ್ದಗಂಗಾ ಮಠದ ಪೀಠಾಧಿಪತಿ ಸಿದ್ದಗಂಗಾ ಸ್ವಾಮಿಗಳು ವಹಿಸಿದ್ದರು. ಡಾ.ಡಿ ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಿದರು. ಉಪನ್ಯಾಸಕರಾದ ಡಾ. ಬಿ.ವಿ ಆರತಿ, ಮಹಮ್ಮದಗೌಸ ರ ಹವಾಲ್ದಾರ್ ಮತ್ತು ಎಂ. ಆರ್ ವೆಂಕಟೇಶ್ ಉಪಸ್ಥಿತರಿದ್ದರು. ಗ್ರಾ. ಪಂ ಉಪಾಧ್ಯಕ್ಷ ಶ್ರೀನಿವಾಸ್ ವಂದಿಸಿದರು.