ಪುತ್ತೂರು: ಹಿಂದೂ ಧರ್ಮದ ಬಗ್ಗೆ ಗೃಹಸಚಿವ ವಿವಾದಾತ್ಮಕ ಜಿ.ಪರಮೇಶ್ವರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪುತ್ತೂರಿನಲ್ಲಿ ಪ್ರತಿಕ್ರಿಯಿಸಿದ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇದೊಂದು ಹುಚ್ಚು ಶುರುವಾಗಿದೆ. ಸನಾತನ ಧರ್ಮದ ಬಗ್ಗೆ ದೂಷಣೆ ಮಾಡಿದರೆ ಅಲ್ಪಸಂಖ್ಯಾತರ ಮತ ಸಿಗುತ್ತದೆ. ಅಧಿಕಾರಿ ಸಿಗುತ್ತೆ ಅನ್ನುವ ಕಾರಣಕ್ಕೆ ಈ ರೀತಿ ಹೇಳಿಕೆ ನೀಡುತ್ತಾರೆ. ಹಿಂದೂ ಧರ್ಮದ ಹುಟ್ಟು ಗೊತ್ತಿಲ್ಲದ ಪರಮೇಶ್ವರ್ ಅವರ ಹೆಸರನ್ನು ಇಸ್ಮಾಯಿಲ್ ಅಂತ ಯಾಕೆ ಇಟ್ಟುಕೊಂಡಿಲ್ಲ. ಸ್ಟಾಲಿನ್ ಎಂದು ಹೆಸರು ಇಟ್ಟುಕೊಳ್ಳುಬಹುದಿತ್ತಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದ್ದ ದೇವಸ್ಥಾನಕ್ಕೆಲ್ಲಾ ಭೇಟಿ ನೀಡುವ ಪರಮೇಶ್ವರ್, ದೇವಸ್ಥಾನದ ಹೊರಗೆ ಬಂದ ಬಳಿಕ ಈ ರೀತಿ ಹೇಳಿಕೆ ನೀಡುತ್ತಾರೆ. ಸನಾತನ ಧರ್ಮದ ಹುಟ್ಟು ಯಾರಿಗೂ ತಿಳಿದಿಲ್ಲ. ಸನಾತನ ಧರ್ಮಕ್ಕೆ ಹುಟ್ಟೂ ಇಲ್ಲ, ನಾಶವೂ ಇಲ್ಲ. ಕ್ರಿಶ್ಚಿಯನ್, ಇಸ್ಲಾಂ ಮತ ಇತ್ತೀಚೆಗೆ ಹುಟ್ಟಿರುವ ಮತಗಳು. ಸನಾತನ ಧರ್ಮ ನಿತ್ಯ ನೂತನವಾದ ಧರ್ಮ.
ಎಲ್ಲಾ ಕಾಲಕ್ಕೂ, ಎಲ್ಲವನ್ನೂ ಒಪ್ಪಿಕೊಳ್ಳುವ ಧರ್ಮ. ಕಾಲಕ್ಕೆ ತಕ್ಕಂತೆ ತನ್ನಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಕಾಶವಿರುವ ಧರ್ಮ. ಹಿಂದೆ ಹಿಂದು ಧರ್ಮದಲ್ಲಿದ್ದ ಬಾಲ್ಯವಿವಾಹ, ವರದಕ್ಷಿಣೆ ಮೊದಲಾದ ಪಿಡುಗನ್ನು ತೆಗೆದು ಹಾಕಲಾಗಿದೆ. ಮೂಢನಂಬಿಕೆಯನ್ನು ತೊಡೆದು ಹಾಕುವ ಕೆಲಸವನ್ನು ಮಹಾಪುರುಷರು ಮಾಡಿದ್ದಾರೆ. ಈಗಿರುವ ಕೆಲವು ಆಚಾರಗಳನ್ನೂ ಬದಲಾಯಿಸಲಾಗುತ್ತದೆ.
ಆ ಬದಲಾವಣೆಯನ್ನು ನಾವು ಮಾಡುತ್ತೇವೆ. ಆದರೆ ಇಸ್ಲಾಂ ಮತ್ತು ಕ್ರಿಶ್ಚಿಯನ್ ಮತದಲ್ಲಿ ಈ ಅವಕಾಶವಿಲ್ಲ. ಆ ಕಾರಣಕ್ಕಾಗಿಯೇ ಆ ಮತದ ಜನರೇ ಮತವನ್ನು ಒಪ್ಪಿಕೊಳ್ಳುತ್ತಿಲ್ಲ. ಅಮೇರಿಕಾ ಮತ್ತು ಬ್ರಿಟನ್ ನಲ್ಲಿ ಚರ್ಚುಗಳಿಗೆ ಜನ ಬರುತ್ತಿಲ್ಲ. ಆ ಕಾರಣಕ್ಕಾಗಿ ಅಲ್ಲಿ ಚರ್ಚುಗಳನ್ನು ಹರಾಜಿಗೆ ಇಡುತ್ತಿದ್ದಾರೆ. ಚಂದ್ರನ ಬಗ್ಗೆ ಸನಾತನ ಧರ್ಮದಲ್ಲಿ ಉಲ್ಲೇಖವಿದೆ. ಅಲ್ಲಿನ ಕೃಷ್ಣ ಪರ್ವ, ಶ್ವೇತ ಪರ್ವದ ಉಲ್ಲೇಖವಿದೆ. ಆ ಸತ್ಯ ಇದೀಗ ಚಂದ್ರಯಾನ-3 ಉಡಾವಣೆ ಯಶಸ್ವಿಯಾದಾಗ ಬೆಳಕಿಗೆ ಬಂದಿದೆ.
ಸನಾತನ ಧರ್ಮ ಮತ್ತು ವಿಜ್ಞಾನ ಪರಸ್ಪರ ಒಪ್ಪಿಕೊಂಡಿದೆ. ಹಿಂದೂ ಧರ್ಮ ಮತ್ತು ವಿಜ್ಞಾನ ಒಟ್ಟೊಟ್ಟಿಗೆ ಹೋಗುತ್ತದೆ. ಸನಾತನ ಧರ್ಮದ ಬಗ್ಗೆ ಮಾತನಾಡುವ ಉದಯನಿಧಿ ಸ್ಟಾಲಿನ್ ತಂದೆ ಹಿಂದೂ ಧರ್ಮದ ಸತ್ವ ಒಪ್ಪಿಕೊಂಡಿದ್ದರು. ಅವರ ಕಾರನ್ನು ಅವರ ಮನೆ ಮುಂದೆ ದೇವಸ್ಥಾನಕ್ಕೆ ಮುಖಮಾಡಿ ನಿಲ್ಲಿಸುತ್ತಿದ್ದರು. ಈಗ ಢೋಂಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸನಾತನ ಧರ್ಮದ ಬಗ್ಗೆ ಮಾತನಾಡುವವರು ಎಚ್ಚರಿಕೆಯಿಂದ ಮಾತನಾಡಬೇಕು. ಇದರಿಂದ ಅವರ ಮುಂದಿನ ಪೀಳಿಗೆ ಚೆನ್ನಾಗಿ ಇರುತ್ತದೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.