ಮಂಗಳೂರು: ಜನರು ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಮತ್ತು ಪಕ್ಷದ ಚಿಹ್ನೆ( ಕಮಲ) ನೋಡಿ ವೋಟ್ ಹಾಕುವ ಪರಿಸ್ಥಿತಿ ಇದೆ ಎಂದಾದರೆ ನಿಮ್ಮ ಸಾಧನೆ ಏನು ಎಂಬ ಪ್ರಶ್ನೆ ಎದುರಾಗುತ್ತದೆ. ನಿಮಗೆ ಪಕ್ಷಕ್ಕಾಗಿ ದುಡಿಯುವುದು ಕಷ್ಟವಾದರೇ ನಮ್ಮ ಕಾರ್ಯಕರ್ತರಿಗೆ ಹೇಳುತ್ತೇನೆ. ಕಾರ್ಯಕರ್ತರೇ ಚುನಾವಣಾ ಜಯದ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ.
ಇದು ಪುತ್ತೂರಿನ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಮಾವೇಶದಿಂದ ಆಗಮಿಸಿ ರಾತ್ರಿ ಮಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಸಭೆಯಲ್ಲಿ ಕೇಂದ್ರ ಗೃಹ ಸಚಿವ, ಬಿಜೆಪಿ ಪರಮೋಚ್ಛ ನಾಯಕ ಅಮಿತ್ ಶಾ ಆಡಿದ ಖಡಕ್ ಮಾತು. ಮಂಗಳೂರಿನಲ್ಲಿ ಶಾ ಶನಿವಾರ ರಾತ್ರಿ ಕರಾವಳಿ ಮತ್ತು ಮಲೆನಾಡಿನ ಆರು ಜಿಲ್ಲೆಗಳ ಶಾಸಕರು ಮತ್ತು ಸಂಸದರ ಹಾಗೂ ಪದಾಧಿಕಾರುಗಳ ಸಭೆ ನಡೆಸಿದರು. ಈ ವೇಳೆ ಸಂಸದರು, ಶಾಸಕರು ಪಕ್ಷದ ಮುಖಂಡರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕರಾವಳಿ ಮತ್ತು ಮಲೆನಾಡು ಬಿಜೆಪಿಯ ಮೂಲನೆಲೆ ಇಲ್ಲಿ ಅಧಿಕಾರಿ ಕಳೆದುಕೊಳ್ಳುವ ಸ್ಥಿತಿಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಯಾರಿಗೆ ಟಿಕೇಟ್ ನೀಡಬೇಕೆಂದು ಗೊತ್ತು: ಟಿಕೆಟ್ ಪಡೆಯಲು ಪಕ್ಷದೊಳಗೆ ಇರುವ ತೀವ್ರ ಪೈಪೋಟಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಶಾ. ನಿಮ್ಮ ಅಭಿವೃದ್ಧಿ ಕಾರ್ಯ ನೋಡಿ ಪಕ್ಷ ಟಿಕೆಟ್ ನೀಡುತ್ತದೆ. ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡಿದರೆ ಸರಿ. ಇಲ್ಲದಿದ್ದಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳುವ ಕಲೆ ಗೊತ್ತಿದೆ ಎಂದು ಮುಖಂಡರಿಗೆ ಎಚ್ಚರಿಸಿದ್ದಾರೆ.