News Karnataka Kannada
Sunday, May 12 2024
ಮಂಗಳೂರು

ವೇಣೂರು: ಗರ್ಡಾಡಿ ಎಂಬಲ್ಲಿ ಇನೋವಾ ಕಾರು ಮತ್ತು ಖಾಸಗಿ ಬಸ್ಸಿನ ನಡುವೆ ಅಪಘಾತ!

Venoor
Photo Credit : By Author

ಬೆಳ್ತಂಗಡಿ; ಇಲ್ಲಿನ ಗುರುವಾಯನಕೆರೆ ವೇಣೂರು ರಸ್ತೆಯ ಗರ್ಡಾಡಿ (ಗೋಳಿಯಂಗಡಿ) ಗ್ರಾಮದ ಮೊಗೇರಡ್ಕ ಎಂಬಲ್ಲಿ ಇನೋವಾ ಕಾರು ಮತ್ತು ಲೀಝಾ ಖಾಸಗಿ ಬಸ್ಸಿನ ನಡುವೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಡಿದ್ದಾರೆ.

ಮೃತರನ್ನು ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಮಂಗಳೂರು ತಾಲೂಕು ಗಂಜಿಮಠ ಬಲ್ಗುಲಿಪಾಡಿ “ದಾರುಲ್ ಕರಾಮ” ನಿವಾಸಿ ಸೂರಲ್ಪಾಡಿ ನೌಶಾದ್ ಹಾಜಿ(44) (ಅಬ್ದುಲ್ ಹಮೀದ್ ಎನ್.) ಮತ್ತು ಅವರ ವಾಹನ ಚಾಲಕ ಮಂಗಳೂರು ತಾಲೂಕು ಉಳಾಯಿಬೆಟ್ಟು ಸನಿಹದ ಆಚೆಬೆಟ್ಟು ನಿವಾಸಿ ಮುಹಮ್ಮದ್ ಮುಶ್ರಫ್(20) ಎಂಬವರೆಂದು ಗುರುತಿಸಲಾಗಿದೆ.

ಇನೋವ ಕಾರು, ಬಸ್ಸು ನಡುವೆ ಈ ಅವಘಡ ಸಂಭವಿಸಿದೆ. ನೌಶಾದ್ ಹಾಜಿ‌ ಅವರು ಇಂಜಿನಿಯರ್ ಕೂಡ ಆಗಿದ್ದು, ಬೆಳ್ತಂಗಡಿ ದಾರುಸ್ಸಲಾಂ ಸಂಸ್ಥೆ ಕೋಶಾಧಿಕಾರಿಯೂ ಆಗಿದ್ದರು.

ಅಗತ್ಯ ಕೆಲಸದ ನಿಮಿತ್ತ ಅವರು ಬೆಳ್ತಂಗಡಿಗೆ ಆಗಮಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಅಪಘಾತವಾದ ತಕ್ಷಣ ಗಾಯಾಳುಗಳನ್ನು ಸ್ಥಳೀಯರು ಬೆಳ್ತಂಗಡಿ ಆಸ್ಪತ್ರೆಗೆ ಕರೆತಂದರು. ಆದರೆ ಅದಾಗಲೇ ಇಬ್ಬರೂ ಕೂಡ ಮೃತಪಟ್ಟಿದ್ದರು.

ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಮತ್ತು ಬಸ್ಸಿನ ಒಂದು ಪಾರ್ಶ್ವ ಬಹುತೇಕ ನುಜ್ಜುಗುಜ್ಜಾಗಿದೆ. ಬಸ್ಸಿನ ಎದುರಿಮನ ಚಕ್ರದ ಸೆಟ್ ಸಮೇತ ಕಿತ್ತು ಬಂದಿದ್ದು ಹಿಂದಿನ ಚಕ್ರದ ವರೆಗೆ ಬಂತು ನಿಂತಿತ್ತು.

ಮೃತರಾದವರ ಪಾರ್ಥಿವ ಶರೀರವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದ ಬಳಿ ತರುತ್ತಿರುವಂತೆಯೇ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು ಮೃತದೇಹ ವೀಕ್ಷಿಸಿದರು. ದಾರುಸ್ಸಲಾಂ ಸಂಸ್ಥೆ ಅಧ್ಯಕ್ಷ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರ ತಂಙಳ್ ಅವರು ಆಗಮಿಸಿ ದುಆ ನೆರವೇರಿಸಿ, ಮೃತರ ಬಂಧುಗಳಿಗೆ ಸಾಂತ್ವಾನ ಹೇಳಿದರು. ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷ ಎನ್.ಕೆ.ಎಮ್ ಶಾಫಿ‌ ಸ‌ಅದಿ, ಬೆಳ್ತಂಗಡಿ ಮಾಜಿ ಶಾಸಕ‌ ವಸಂತ ಬಂಗೇರ, ಮಂಗಳೂರಿನ ಮಾಜಿ ಶಾಸಕ ಮೊಯಿದಿನ್‌ ಬಾವಾ, ಮಾಜಿ ಸಚಿವ ಗಂಗಾಧರ ಗೌಡ, ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಂ ಹಮೀದ್ ಹಾಜಿ ಉಜಿರೆ,‌ ಮಾಜಿ ಮೇಯರ್‌ ಅಶ್ರಫ್, ಉಳ್ಳಾಲ ಪ್ರಾಂಶುಪಾಳ ಉಸ್ಮಾನ್ ಪೈಝಿ ಮೊದಲಾದ ಅನೇಕ ಗಣ್ಯರು ಮತ್ತು ಧಾರ್ಮಿಕ ವಿದ್ವಾಂಸರು ಅಂತಿಮ ದರ್ಶನ ಪಡೆದರು.

ಬೆಳ್ತಂಗಡಿ ಖಿಲ್‌ರ್ ಜುಮ್ಮಾ ಮಸ್ಜಿದ್ ನಲ್ಲಿ ಮೃತದೇಹದ ವಿಧಿ‌ವಿಧಾನಗಳನ್ನು ಪೂರೈಸಿ ಅಂತಿಮ ನಮಾಝ್ ನಿರ್ವಹಿಸಿ ಬಳಿಕ ಇಬ್ಬರ ಮೃತದೇಹಗಳನ್ನೂ ಪ್ರತ್ಯೇಕ‌ ಆಂಬುಲೆನ್ಸ್ ನಲ್ಲಿ ಮಂಗಳೂರಿಗೆ ಕೊಂಡೊಯ್ಯಲಾಯಿತು.

ಮೂಲತಃ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ನಿವಾಸಿಯಾಗಿದ್ದ ನೌಶಾದ್ ಹಾಜಿ ಪ್ರಸಕ್ತ ಗಂಜಿಮಠದ ಸೂರಲ್ಪಾಡಿಯಲ್ಲಿ ನೆಲೆಸಿದ್ದರು. ದ.ಕ. ಜಿಲ್ಲಾ ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷರಾಗಿದ್ದ ಅವರು “ನಂಡೆ ಪೆಂಜಳ್” ಅಭಿಯಾನದ ಸ್ಥಾಪಕಾಧ್ಯಕ್ಷರಾಗಿದ್ದರು. ಬೆಳ್ತಂಗಡಿಯ ದಾರುಸ್ಸಲಾಂ ಎಜ್ಯುಕೇಶನ್ ಸೆಂಟರ್ ಕೋಶಾಧಿಕಾರಿಯಾಗಿ, ಮೂಡುಬಿದಿರೆ ಕಾಶಿಪಟ್ಟದ ದಾರುನ್ನೂರ್ ಎಜ್ಯುಕೇಶನ್ ಸೆಂಟರ್ ಕಾರ್ಯದರ್ಶಿಯಾಗಿ, ಗುರುಪುರ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ಇಂದು ಬೆಳ್ತಂಗಡಿಯ ದಾರುಸ್ಸಲಾಂ ಸಂಸ್ಥೆಯ ವತಿಯಿಂದ ನೂತನವಾಗಿ ಆರಂಭಿಸಿದ ಹಜ್ಜ್ ಟೂರ್ ಇದರ ಲಾಯಿಲದ ಕಚೇರಿ ಉದ್ಘಾಟನೆಗಾಗಿ ಆಗಮಿಸುತ್ತಿದ್ದರು ಎಂದು ತಿಳಿದು ಬಂದಿದೆ. ನಿರಂತರವಾಗಿ ಸಾಮಾಜಿಕ ಮತ್ತು ಧಾರ್ಮಿಕ ವಿಚಾರಗಳಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡಿದ್ದ ಅವರು ಕಳೆದ ರಾತ್ರಿಯೂ ಕೂಡ ಅಡ್ಕ ಬೈಕಂಪಾಡಿ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮೃತ ನೌಶಾದ್ ಹಾಜಿಯವರು ಪತ್ನಿ, ಐವರು ಮಕ್ಕಳು, ಸಹೋದರ ಸಹೋದರಿಯರು‌ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು