ಉಳ್ಳಾಲ: ಕೃಷಿ ಕಾರ್ಮಿಕರ ನಗರ ವಲಸೆ ತಪ್ಪಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೃಷಿಗೆ ಪೂರಕವಾದ ಮೂಲಭೂತ ಸೌಕರ್ಯ ಅಭಿವೃದ್ಧಿಯೊಂದಿಗೆ ರೈತರ ಕೃಷಿ ಬದುಕು ಮತ್ತು ಪ್ರಗತಿಪರ ಕೃಷಿಕರ ಜೀವನ ಸಾಧನೆಯ ವಿಚಾರಗಳನ್ನು ಪಠ್ಯಕ್ರಮದಲ್ಲಿ ಸೇರಿಸುವ ಕಾರ್ಯ ಸರಕಾರದಿಂದ ಆಗಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ ಹೇಳಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ಇರುವಕ್ಕಿ ಶಿವಮೊಗ್ಗ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಕಾಪಿಕಾಡ್ ,ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ ಕೊಚ್ಚಿನ್ ಇದರ ಆಶ್ರಯ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಕಾಪಿಕಾಡ್ ನಲ್ಲಿ ಗುರುವಾರ ನಡೆದ ಗೇರು ಮೇಳ ಮತ್ತು ವಿಚಾರ ಸಂಕಿರಣ- 2023 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ನಮ್ಮ ದೇಶದ ಮೂಲ ಸಂಪತ್ತು ಇರುವುದು ಗ್ರಾಮೀಣ ಭಾರತದಲ್ಲಿ ಅದರಲ್ಲೂ ಕೃಷಿ ಪ್ರದಾನವಾದ ನಮ್ಮ ದೇಶದಲ್ಲಿ ಪ್ರಸ್ತುತ ದಿನಗಳಲ್ಲಿ ಕೃಷಿಗೆ ಬೇಕಾದ ಮೂಲಭೂತ ಸೌಕರ್ಯದ ಕೊರತೆಯಿಂದ ಜನರು ಗ್ರಾಮೀಣ ಪ್ರದೇಶವನ್ನು ತೊರೆದು ನಗರದತ್ತ ವಲಸೆ ಹೋಗುತ್ತಿದ್ದಾರೆ.
ಸರಕಾರಗಳು ಆಹಾರ ಭದ್ರತೆಯನ್ನು ಕಾಪಾಡುವುದರೊಂದಿಗೆ ಕೃಷಿ ಮೂಲಭೂತ ಸೌಕರ್ಯ ಅಭಿವೃದ್ಧಿಯೊಂದಿಗೆ ನಮ್ಮ ಮುಂದಿನ ಪೀಳಿಗೆಯನ್ನು ಕೃಷಿಯತ್ತ ಒಲವು ಮೂಡಿಸಲು ಶೈಕ್ಷಣಿಕವಾಗಿ ಕೃಷಿ ಪಠ್ಯಕ್ರಮವನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳನ್ನು ಕೃಷಿ ಕಾರ್ಯಕ್ಷೇತ್ರಕ್ಕೆ ಕರೆದುಕೊಂಡು ಹೋಗುವ ಕಾರ್ಯ ಮಾಡಬೇಕು ಎಂದ ಅವರು ಗೇರು ಕೃಷಿ ಅಭಿವೃದ್ಧಿಯಲ್ಲಿ ವಿಜ್ಞಾನಿಗಳ ಪಾತ್ರ ಮಹತ್ವದ್ದು ಎಂದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ| ಮೃತ್ಯುಂಜಯ ಸಿ. ವಾಲಿ ಗೇರು ಮೇಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿ ಗೇರು ಉತ್ಪಾದನೆಗಿಂತ ಹೆಚ್ಚಾಗಿ ಆಮದು ಮಾಡುತ್ತಿದ್ದೇವೆ. ಹವಾಮಾನ ವೈಪರಿತ್ಯದಿಂದ ಇತರ ಕೃಷಿಗಳಿಗೆ ಸಮಸ್ಯೆಯಾದರೂ ಗೇರು ಕೃಷಿಗೆ ಸಮಸ್ಯೆಯಿಲ್ಲ. ಗೇರುಕೃಷಿ ಕರಾವಳಿ ಪ್ರದೇಶ ಸೇರಿದಂತೆ ಬರಡು ಪ್ರದೇಶದಲ್ಲಿಯೂ ಬೆಳೆಯಲು ಸಾಧ್ಯವಿದ್ದು, ಗೇರಿನ ಪ್ರತಿಯೊಂದು ಭಾಗವೂ ಉಪಯುಕ್ತವಾಗಿದ್ದು, ಕೃಷಿಕರು ಈ ಕೃಷಿಗೆ ಇನ್ನಷ್ಟು ಆಸಕ್ತಿಯಿಂದ ಮುಂದೆ ಬರಬೇಕಾಗಿದ್ದು, ಉತ್ಪಾದನೆಯನ್ನು ಹೆಚ್ಚಿಸುವ ಕಾರ್ಯ ಮಾಡಬೇಕು ಇದಕ್ಕೆ ಬೇಕಾದ ಪರಿಕರಗಳನ್ನು ಕೃಷಿ ವಿಶ್ವವಿದ್ಯಾನಿಲಯ ನೀಡಲು ಸಿದ್ಧವಿದೆ ಎಂದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ| ಬಿ. ಹೇಮ್ಲಾ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ರಾಜ್ಯ ಗೇರು ಉತ್ಪಾದಕರ ಸಂಘದ ಅಧ್ಯಕ್ಷ ಡಿ.ಗೋಪಿನಾಥ ಕಾಮತ್, ಮಂಗಳೂರು ಕೃಷಿ ಇಲಾಖೆ ಇದರ ಜಂಟಿ ಕೃಷಿ ನಿರ್ದೇಶಕ ಡಾ| ಕೆ.ಕೆಂಪೇಗೌಡ, ತೋಟಗಾರಿಕೆ ಇಲಾಖೆಯ ಕೆ.ಪ್ರವೀಣ್ , ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಧನಕೀರ್ತಿ ಬಲಿಪ, ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ಪ್ರಗತಿಪರ ಕೃಷಿಕರಾದ ಮೂಡಬಿದ್ರೆ ಬೊವೀಂದ ಬೆಟ್ಟುವಿನ ಬ್ಯಾಪ್ಟಿಸ್ಟ್ ಡಿಸೋಜ, ಪೂತ್ತೂರು ಬಲ್ನಾಡುವಿನ ಬಿ. ಸುರೇಶ್, ಮೂಡಬಿದ್ರೆ ಬೆಳುವಾಯಿಯ ರಾಮಕೃಷ್ಣ ಜೆ. ಶೆಣೈ, ಬೆಳ್ತಂಗಡಿ ಪೆÇರ್ಕಳದ ಸುಜಾತ ಎನ್ ರೈ, ಹೆಬ್ರಿ ಅಜೆಕಾರುವಿನ ಸಿವಸಂಕರ ಪಿ. ವಿ ಇವರನ್ನು ಸನ್ಮಾನಿಸಲಾಯಿತು.
ಉಳ್ಳಾಲ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ|ರವಿರಾಜ್ ಶೆಟ್ಟಿ ಜಿ. ಸ್ವಾಗತಿಸಿದರು. ಸಹ ಸಂಶೋಧನಾ ನಿರ್ದೇಶಕ ಡಾ| ಲಕ್ಷ್ಮಣ್ ಪ್ರಸ್ತಾವನೆಗೈದರು. , ಪ್ರವೀಣ್ ಎಸ್. ಕುಂಪಲ ಕಾರ್ಯಕ್ರಮ ನಿರ್ವಹಿಸಿದರು.