ಉಜಿರೆ: ಬೌದ್ಧಿಕ ಆಸ್ತಿ ಹಕ್ಕುಗಳ ನಿರ್ವಹಣೆಯು ಸುಸ್ಥಿರ ಬೆಳವಣಿಗೆಯ ಪರಿಕಲ್ಪನೆಯ ಆಧಾರದಲ್ಲಿ ನಡೆದಾಗ ಮಾತ್ರ ವೈಜ್ಞಾನಿಕ ಸಂಶೋಧನೆ ಮತ್ತು ಆವಿಷ್ಕಾರಗಳಿಗೆ ಬಹು ಆಯಾಮಗಳ ಮನ್ನಣೆ ದೊರಕುತ್ತದೆ ಎಂದು ಬೆಂಗಳೂರಿನ ಇಂಟೆಲಿಕೋಪಿಯಾ ಐಪಿ ಸರ್ವಿಸಸ್ ಸಂಸ್ಥೆಯ ಸಂಸ್ಥಾಪಕ ಡಾ.ಎಚ್.ಎಲ್.ನರೇಂದ್ರ ಭಟ್ಟ ಅಭಿಪ್ರಾಯಪಟ್ಟರು.
ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನ ಶಾಸ್ತ್ರ ವಿಭಾಗ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಸಹಯೋಗದಲ್ಲಿ ಮಂಗಳವಾರ ‘ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಆವಿಷ್ಕಾರ ಉತ್ತೇಜನ’ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ವಿಶ್ವಸಂಸ್ಥೆಯು ಸುಸ್ಥಿರ ಬೆಳವಣಿಗೆಗಾಗಿ ಹದಿಮೂರು ಮೌಲಿಕ ತತ್ವಗಳನ್ನು ಪಟ್ಟಿಮಾಡಿದೆ. ಇಂತಹ ಮಹತ್ವಪೂರ್ಣ ತತ್ವಗಳಲ್ಲಿ ಬೌದ್ಧಿಕ ಆಸ್ತಿ ಮತ್ತು ಆವಿಷ್ಕಾರದ ಸುಸ್ಥಿರ ನಿರ್ವಹಣೆಯ ಅಂಶವೂ ಒಂದು. ನಿರ್ದಿಷ್ಟ ಆವಿಷ್ಕಾರವನ್ನು ವ್ಯಾವಹಾರಿಕ ಉದ್ದೇಶಕ್ಕಾಗಿ ಬಳಸಿಕೊಳ್ಳುವಾಗ ಸುಸ್ಥಿರ ಪರಿಕಲ್ಪನೆಯನ್ನೂ ಅನ್ವಯಿಸಿಕೊಂಡು ಹೆಜ್ಜೆ ಇಡಬೇಕು. ಈ
ಅನ್ವಯಿಸಿಕೊಳ್ಳುವಿಕೆಯಿಂದಾಗಿ ದೇಶ ಮತ್ತು ಜಾಗತಿಕ ಮಟ್ಟದಲ್ಲಿ ಪರಿಸರ ಮತ್ತು ಅಭಿವೃದ್ಧಿಯ ಆಯಾಮಗಳು ಸುಸ್ಥಿರ ನೆಲೆಯಲ್ಲಿ ಅನುಷ್ಠಾನಗೊಳ್ಳಲು ಸಾಧ್ಯವಾಗುತ್ತವೆ ಎಂದು ಹೇಳದರು.
ಹೊಸದೊಂದನ್ನು ಅನ್ವೇಷಿಸುವ ಪ್ರವೃತ್ತಿಯುಳ್ಳ ವಿಜ್ಞಾನಿ ತನ್ನ ಆವಿಷ್ಕಾರದ ಪರಿಕಲ್ಪನೆಯನ್ನು ವರ್ತಮಾನಕ್ಕೆ ಅನ್ವಯಿಸಿ ವ್ಯಾವಹಾರಿಕವಾಗಿ ಗೆಲ್ಲುವುದರ ಕಡೆಗೆ ಅಷ್ಟಾಗಿ ಆಸಕ್ತಿ ತೋರುವುದಿಲ್ಲ. ತನ್ನ ಆವಿಷ್ಕಾರದ ಪರಿಕಲ್ಪನೆಯನ್ನು ಮುಂದಿಟ್ಟು ಬಂಡವಾಳ ಹೂಡಿಕೆದಾರರನ್ನು ಹುಡುಕಿ ಅದರ ಉಪಯುಕ್ತತೆಯನ್ನು ವಾಣಿಜ್ಯಿಕವಾಗಿ ವಿಸ್ತರಿಸಿದಾಗ ಅದಕ್ಕೆ ಪ್ರಾಶಸ್ತö್ಯ
ಸಿಗುತ್ತದೆ. ಹೀಗಾಗಿ ಹೊಸದನ್ನು ಆವಿಷ್ಕರಿಸುವ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಆಲೋಚಿಸಬೇಕು. ಹೊಸದೊಂದರ ಅನ್ವೇಷಣೆಯು ಪರಿಸರ ಮತ್ತು ಸಾಮಾಜಿಕತೆಯ ಮನ್ನಣೆ ಪಡೆಯುವಂತಿರಬೇಕು. ಈ ಹಂತದಲ್ಲಿಯೇ ಬೌದ್ಧಿಕ ಆಸ್ತಿ ಹಕ್ಕುಗಳ ನಿರ್ವಹಣೆ ಸುಸ್ಥಿರ ಬೆಳವಣಿಗೆಯ ಸ್ಪರ್ಶ ಪಡೆಯುತ್ತದೆ ಎಂದು ತಿಳಿಸಿದರು.
ಆವಿಷ್ಕಾರದ ಕ್ರಿಯಾಶೀಲ ಯೋಚನಾ ಸಾಮರ್ಥ್ಯದಿಂದ ಬೇರೆಯವರಿಗೆ ಉದ್ಯೋಗ ನೀಡುವ ಹಂತದಲ್ಲಿ ವಿಜ್ಞಾನಿಗಳು ಪ್ರಬಲರಾಗಬೇಕು. ಜೊತೆಗೆ ಆವಿಷ್ಕಾರದ ವಿನೂತನ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ನುಡಿದರು.
ಕಾರ್ಯಕ್ರಮವನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಉದ್ಘಾಟಿಸಿದರು. ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಆವಿಷ್ಕಾರ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇದು ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಎನ್ ಉದಯಚಂದ್ರ ಮಾತನಾಡಿದರು. ಕ್ರಿಯಾಶೀಲ ಆವಿಷ್ಕಾರದ ನಂತರ ಅದನ್ನು ಅಭಿವೃದ್ಧಿಪಡಿಸುವ ಹಂತವೇ ನಿರ್ಣಾಯಕವಾಗಿರುತ್ತದೆ. ಈ ಹಂತದಲ್ಲಿ ನಿರ್ದಿಷ್ಟ ಚೌಕಟ್ಟಿನ ಹೊರಗೆ ನಿಂತು ಯೋಚಿಸಬೇಕು ಎಂದು ಹೇಳಿದರು.
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ, ಅತಿಥಿಗಳನ್ನು ಸ್ವಾಗತಿಸಿ ಕಾರ್ಯಾಗಾರದ ರೂಪು ರೇಷೆಗಳನ್ನು ವಿವರಿಸಿದರು. ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ನೆಫೀಸತ್ ಪಿ ಕಾರ್ಯಕ್ರಮ ನಿರೂಪಿಸಿದರೆ, ಸಹಾಯಕ ಪ್ರಾಧ್ಯಾಪಕಿ ಡಾ.ಶಶಿಪ್ರಭಾ ವಂದಿಸಿದರು.