ಉಜಿರೆ: ವಿದ್ಯಾರ್ಥಿಗಳು ಗುರು ಕಲಿಸಿಕೊಟ್ಟದ್ದನಷ್ಟೇ ಕಲಿಯುವುದಕ್ಕೆ ಸೀಮಿತರಾಗದೆ, ಸ್ವಯಂ ಅಧ್ಯಯನವನ್ನು ನಡೆಸುವುದರಿಂದ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದು ಎಸ್.ಕೆ.ಡಿ.ಆರ್.ಡಿ.ಪಿ.ಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಎಲ್ ಹೆಚ್ ಮಂಜುನಾಥ್ ನುಡಿದರು.
ಶ್ರೀ ಧ.ಮಂ.ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಶ್ರೀ ಧ.ಮಂ.ಕಾಲೇಜಿನ ಬಿ.ವೊಕ್ ವಿಭಾಗವು ಆಯೋಜಿಸಿದ್ದ ಎರಡು ದಿನಗಳ ರಾಜ್ಯ ಮಟ್ಟದ ಎಜುಕಲ್ಚರಲ್ ಫೆಸ್ಟ್ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್.ಡಿ.ಎಂ. ಶಿಕ್ಷಣಾ ಸಂಸ್ಥೆಗಳ ಅಧ್ಯಕ್ಷ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಮಾಜಿ ಪ್ರಾಂಶುಪಾಲರಾದ ಪ್ರೊ.ಎಸ್. ಪ್ರಭಾಕರ್ ಅವರ ನೇತೃತ್ವದಲ್ಲಿ ಪ್ರಾರಂಭವಾದ ಕಾಲೇಜು, ಇಂದಿನವರೆಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಇದೇ ಸದುದ್ದೇಶದಿಂದ ವಿದ್ಯಾರ್ಥಿಗಳಲ್ಲಿ ಪ್ರಯೋಗಾತ್ಮಕ ಶಿಕ್ಷಣದ ಅವಶ್ಯಕತೆ ಇರುವುದನ್ನು ಮನಗಂಡು ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಅಂದಿನ ಕಾರ್ಯದರ್ಶಿ ಡಾ.ಬಿ ಯಶೋವರ್ಮ ಅವರು ಪ್ರಾರಂಭಿಸಿದ ವಿನೂತನ ಕೋರ್ಸ್ ಬಿ.ವೊಕ್ ಇಂದು ಸಮಾಜಕ್ಕೆ ನುರಿತಯುವ ಪೀಳಿಗೆಯನ್ನು ನೀಡುತ್ತಿದೆ ಎಂದರು.
ಕಾಲೇಜುಗಳು ಆಯೋಜಿಸುವ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಚಿಂತನಾ ಶಕ್ತಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ನೀಡುತ್ತವೆ. ಹಾಗಾಗಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಬೇಕೆಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿ, ‘ಎಕ್ಸ್ಟ್ರಾರ್ಡಿನರಿ ಮತ್ತು ಆರ್ಡಿನರಿ ಎಂಬ ಎರಡು ಪದಗಳ ನಡುವೆ ಇರುವ ವ್ಯತ್ಯಾಸವೆಂದರೆ ಎಕ್ಸ್ಟ್ರಾ ಎಂಬ ಹೆಚ್ಚುವರಿ ಪದ. ಇಲ್ಲಿ ಎಕ್ಸ್ಟ್ರಾ ಎಂದರೆ ನಮ್ಮಲ್ಲಿನ ಪ್ರತಿಭೆಗಳು. ಪ್ರತಿಭೆಗಳು ನಮ್ಮಲ್ಲಿದ್ದರೆ ನಾವು ಎಕ್ಸ್ಟಾರ್ಡಿನರಿಯಾಗಿ ಗುರುತಿಸಿಕೊಳ್ಳಬಹುದು. ಇಂತಹ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಕೌಶಲ್ಯವನ್ನು ಗುರುತಿಸುವ, ಉತ್ತೇಜಿಸುವ ಕಾರ್ಯವನ್ನು ಹಾಗೂ ವಿದ್ಯಾರ್ಥಿಗಳಲ್ಲಿನ ಎಕ್ಸ್ಟ್ರಾ ಪ್ರತಿಭೆಗಳನ್ನು ಹೊರ ತರುವ ಕಾರ್ಯವನ್ನು ಮಾಡುತ್ತವೆ’ ಎಂದರು. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳನ್ನು ತಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳಲು, ಪ್ರದರ್ಶಿಸಲು, ಹೊಸತನವನ್ನು ಅರಿಯಲು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪಿ ಜಿ ವಿಭಾಗದಡೀನ್ಡಾ. ವಿಶ್ವನಾಥ್ ಪಿ., ಬಿ.ವೊಕ್ಕೋರ್ಸ್ ವಿಭಾಗಗಳ ಮುಖ್ಯಸ್ಥರಾದ ಮಾಧವ ಹೊಳ್ಳ, ಸಮ್ಮೇದ್ಜೈನ್, ವಿಭಾಗದ ಅಧ್ಯಾಪಕರು, ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಿ.ವೊಕ್ ವಿಭಾಗ ಸಂಯೋಜಕ ಸುವೀರ್ ಜೈನ್ ಸ್ವಾಗತಿಸಿದರು. ಬಿ.ವೊಕ್.ವಿಭಾಗ ಮುಖ್ಯಸ್ಥ ಅಶ್ವಿತ್ ಹೆಚ್.ಆರ್. ವಂದಿಸಿದರು. ಸೃಜನ್ ಭಟ್ ನಿರೂಪಿಸಿದರು.