ಉಜಿರೆ: ಕನ್ನಡವು ಜಗತ್ತಿನ ಪರಿಪೂರ್ಣ ಭಾಷೆಗಳಲ್ಲಿ ಒಂದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ ಅಭಿಪ್ರಾಯಪಟ್ಟರು.
ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆದ ೨೫ನೇ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅತ್ಯಂತ ಸರಳ ಮತ್ತು ಬರೆದಂತೆಯೇ ಉಚ್ಛರಿಸಲು ಸಾಧ್ಯವಾಗುವ ಕೆಲವೇ ಕೆಲವು ಭಾಷೆಗಳಲ್ಲಿ ಕನ್ನಡವೂ ಒಂದು. ಈ ಮೂಲಕವೇ ಕನ್ನಡ ಭಾಷೆ ಜಾಗತಿಕ ಮಟ್ಟದಲ್ಲಿ ಪರಿಪೂರ್ಣ ಎನಿಸಿಕೊಂಡಿದೆ. ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬ ಕನ್ನಡಿಗರ ಶ್ರಮವಿದೆ ಎಂದು ಅವರು ತಿಳಿಸಿದರು.
“ಕನ್ನಡದ ರಾಯಭಾರಿಗಳೆಂದರೆ ಕರಾವಳಿಯವರು. ಬರೆದಂತೆ ಓದುವ, ಓದುವಂತೆ ಮಾತನಾಡುವ, ಮಾತನಾಡಿದಂತೆ ನಡೆದುಕೊಳ್ಳುವ ಇವರ ಕೊಡುಗೆಯಿಂದ ಕನ್ನಡ ಹೆಚ್ಚು ಬೆಳೆಯುತ್ತಿದೆ. ಗಟ್ಟಿತನದಿಂದ, ವಿನಯದಿಂದ ಕೆಲಸ ಸಾಧಿಸುವ ಛಲ ಕರಾವಳಿಗರಿಗಿದೆ. ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟು ಸಂಪ್ರದಾಯವನ್ನು ಗೌರವಿಸುವ ಜನ ಕರಾವಳಿಯವರು. ದೇವರನ್ನೇ ಸಾಕ್ಷಾತ್ಕಾರಗೊಳಿಸಿರುವ ಶಕ್ತಿ ಕನ್ನಡಕ್ಕಿದೆ ಎಂದು ತೋರಿಸಿದವರು ಇವರು” ಎಂದು ಅವರು ಬಣ್ಣಿಸಿದರು.
ಇತಿಹಾಸ ಕಾಲದಿಂದಲೂ ಕನ್ನಡದ ಬೆಳವಣಿಗೆಗೆ ಅಪೂರ್ವ ಕೊಡುಗೆಯನ್ನು ಕರಾವಳಿ ಭಾಗದ ಜನರು ನೀಡಿದ್ದಾರೆ. ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ ಹೊರಬಂದಿದ್ದು ಈ ನೆಲದಿಂದಲೇ, ಈ ಮೂಲಕ ಕನ್ನಡ ಪತ್ರಿಕೋದ್ಯಮಕ್ಕೆ ಭದ್ರ ಬುನಾದಿ ದೊರೆತಿದೆ ಎಂದು ಅವರು ಹೇಳಿದರು.
ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಹೇಮಾವತಿ ವೀ ಹೆಗ್ಗಡೆಯವರು ಕನ್ನಡವನ್ನು ಉಳಿಸುವ, ಬೆಳೆಸುವ ಜವಾಬ್ದಾರಿ ಕೇವಲ ಸರ್ಕಾರ ಮತ್ತು ಸಂಘ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಬಾರದು, ಪ್ರತಿಯೊಬ್ಬರೂ ಸಾಹಿತ್ಯ ಮತ್ತು ಭಾಷೆಯ ಉಳಿಸುವಿಕೆಗೆ ಮನಃಪೂರ್ವಕವಾಗಿ ಪ್ರಯತ್ನಿಸಬೇಕು ಎಂದರು.
ಸನ್ಮಾನ :
ಈ ಸಂದರ್ಭದಲ್ಲಿ ಹಿರಿಯ ನೃತ್ಯಗುರುಗಳಾದ ಪಿ. ಕಮಲಾಕ್ಷ ಆಚಾರ್ ಬೆಳ್ತಂಗಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಹೆಚ್ ಮಂಜುನಾಥ್, ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ, ಸಂಗೀತ ವಿದ್ವಾನ್ ನಾರಾಯಣ ಎಂ. ಸುರತ್ಕಲ್, ಹಿರಿಯ ರಂಗ ಕಲಾವಿದ ದೇವದಾಸ್ ಕಾಪಿಕಾಡ್ ಅವರನ್ನು ಸಮ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಸಮ್ಮೇಳನದ ಸಂಚಿಕೆ ಅನಾವರಣಗೊಳಿಸಿದರು.
ಸಮ್ಮೇಳನ ಸಂಯೋಜನ ಸಮಿತಿಯ ಗೌರವಾಧ್ಯಕ್ಷ ಡಿ. ಹರ್ಷೇಂದ್ರ ಕುಮಾರ್, ಸ್ವಾಗತ ಸಮಿತಿಯ ಅಧ್ಯಕ್ಷ ಡಿ. ಯದುಪತಿ ಗೌಡ, ಬೆಂಗಳೂರಿನ ಸೋಮಯಾಜಿ ಸಮೂಹ ಸಂಸ್ಥೆಗಳ ರಘುನಾಥ ಸೋಮಯಾಜಿ, ಜಿಲ್ಲೆ ಹಾಗೂ ತಾಲೂಕು ಕ.ಸಾ.ಪ.ದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ಆಶ್ರಯನುಡಿಗಳನ್ನಾಡಿದರು. ಸಮ್ಮೇಳನದ ಸಂಯೋಜನಾ ಸಮಿತಿಯ ಅಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ ಸ್ವಾಗತಿಸಿದರೆ, ದ.ಕ. ಕ.ಸಾ.ಪ.ದ ಗೌರವ ಕಾರ್ಯದರ್ಶಿ ರಾಜೇಶ್ವರಿ ವಂದಿಸಿದರು. ಡಾ. ಬಿ.ಎ. ಕುಮಾರ ಹೆಗ್ಡೆ ಹಾಗೂ ಅನುರಾಧ ಕೆ. ರಾವ್ ಕಾರ್ಯಕ್ರಮ ನಿರೂಪಿಸಿದರು.
ಮೆರವಣಿಗೆ
ಸಮ್ಮೇಳನದ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಉಜಿರೆ ವೃತ್ತದಿಂದ ಸಮ್ಮೇಳನದ ಸಭಾಂಗಣದವರೆಗೆ ಅದ್ಧೂರಿ ಮೆರವಣಿಗೆ ಏರ್ಪಡಿಸಲಾಗಿತ್ತು. ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಗಣ್ಯರು ಹೂ ಅರ್ಪಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಡೊಳ್ಳು ಕುಣಿತ, ಚೆಂಡೆ ವಾದನ, ಯಕ್ಷಗಾನ ವೇಷ, ವೀರಗಾಸೆ, ಧಾರವಾಡದ ಶ್ರೀ ಕರಿಯಮ್ಮ ದೇವಿ ಜಗ್ಗಲಗಿ ತಂಡದ ನೃತ್ಯ, ವಿಜಯನಗರ ಸಾಮ್ರಾಜ್ಯದ ಸೈನಿಕರು ಹಾಗೂ ವಿವಿಧ ಜಿಲ್ಲೆಗಳ ವೇಷಭೂಷಣಗಳು ಹಾಗೂ ಕನ್ನಡಾಂಬೆಯ ವೇಷ ಧರಿಸಿದ್ದ
ವಿದ್ಯಾರ್ಥಿನಿ, ಇನ್ನಿತರ ಕಲಾತಂಡಗಳು ಮೆರವಣಿಗೆಯಲ್ಲಿ ಗಮನ ಸೆಳೆದರು.
ಮೆರವಣಿಗೆಯಲ್ಲಿ ಪೂರ್ಣಕುಂಭ ಸ್ವಾಗತ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಅತಿಥಿಗಳನ್ನೂ ಬರಮಾಡಿಕೊಳ್ಳಲಾಯಿತು. ಬಳಿಕ ಪ್ರದರ್ಶನ ಮಳಿಗೆಗಳನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು.