ಮಂಗಳೂರು: ‘ಕರಾವಳಿಯ ತುಳು ಭಾಷೆಗೆ ಸಾಂವಿದಾನಿಕ ಮಾನ್ಯತೆ ದೊರೆಯಬೇಕು’ ಎಂದು ಅಸ್ಸಾಂನ ಮುಖ್ಯಮಂತ್ರಿ ಡಾ. ಹಿಮಂತ್ ಬಿಸ್ವಾ ಶರ್ಮಾ ಅವರು ಜೈ ತುಳುನಾಡ್ ಸಂಘಟನೆಯ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಜೈ ತುಳುನಾಡ್ ಸಂಘಟನೆಯು ಸ್ವಾಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ಬಿಡುಗಡೆಗೊಳಿಸಿದ “ತುಳುಪುರ್ಪ’ ಕವನ ಸಂಕಲನ ಕೃತಿಯನ್ನು ಶ್ಲಾಘಿಸಿ ಅಸ್ಸಾಂ ಸಿಎಂ ಸಂಘಟನೆಯ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
‘ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ ಭಾರತ, ಭಾಷಾ ವೈವಿಧ್ಯತೆಯು ದೇಶದ ಏಕತೆಯನ್ನು ಸಧೃಡಗೊಳಿಸುವ ಅಧಾರಸ್ತಂಭಗಳಾಗಿವೆ. ಪಂಚ ಮಹಾದ್ರಾವಿಡ ಭಾಷೆಗಳಲ್ಲೊಂದಾಗಿರುವ ತುಳು ಭಾಷೆಗೆ ಅರ್ಹವಾಗಿಯೇ ಸಂವಿಧಾನದಲ್ಲಿ ಮಾನ್ಯತೆ ದೊರೆಯಬೇಕು. ಈ ನಿಟ್ಟಿನಲ್ಲಿ ಜೈ ತುಳುನಾಡ್ ಸಂಘಟನೆಯ ಕಾರ್ಯ ಶ್ಲಾಘನೀಯ’ ಎಂದು ಅಸ್ಸಾಂ ಸಿಎಂ ಡಾ. ಹಿಮಂತ್ ಬಿಸ್ವಾ ಶರ್ಮಾ ಸಂಘಟನೆಯ ಅಧ್ಯಕ್ಷ ಅಶ್ವತ್ಥ್ ತುಳುವ ಅವರಿಗೆ ಪತ್ರದಲ್ಲಿ ಹೇಳಿದ್ದಾರೆ.
ದೇಶದಾದ್ಯಂತ ತುಳು ಭಾಷೆಯನ್ನು ಪರಿಚಯಿಸುವ ಹಾಗೂ ಭಾಷೆಗೆ ಮಾನ್ಯತೆ ದೊರಕಿಸಿಕೊಡುವಲ್ಲಿ ಸಹಕಾರವನ್ನು ಬಯಸುತ್ತಾ ಈ ಕೃತಿಯನ್ನು ಪ್ರಧಾನಿಯವರಿಗೆ, ರಾಷ್ಟ್ರಪತಿಗಳಿಗೆ ಹಾಗು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕಳುಹಿಸಿ ಕೊಡಲಾಗಿದ್ದು,ಇದೀಗ ಕೃತಿ ಸ್ವೀಕರಿಸಿದ ಅಸ್ಸಾಂ ಸಿಎಂ ಅವರಿಂದ ಪ್ರತಿಕ್ರಿಯೆ ಬಂದಿರುವುದು ಸಂತಸ ತಂದಿದೆ ಎಂದು ಜೈ ತುಳುನಾಡ್ ಸಂಘಟನೆ ತಿಳಿಸಿದೆ.