ಮಂಗಳೂರು: ಸಮುದಾಯ ಮಂಗಳೂರು ಇದರ ಎಂಟನೇ ಸಮ್ಮೇಳನದ ಅಂಗವಾಗಿ ನಡೆದ ವಿಚಾರ ಸಂಕಿರಣವನ್ನು ಉದ್ದೇಶಿಸಿ ಜನಪದ ವಿದ್ವಾಂಸರಾದ ಡಾ. ಗಣನಾಥ ಶೆಟ್ಟಿ ಎಕ್ಕಾರು ಇವರು ಮಾತನಾಡುತ್ತಾ ಕಾಲದಿಂದ ಕಾಲಕ್ಕೆ ಬದಲಾಗುವ ಮೌಖಿಕ ಪರಂಪರೆ, ನಿರ್ದಿಷ್ಟ ಪಡಿಸಲು ಸಾಧ್ಯವಿಲ್ಲದ ವಿಚಾರಗಳು, ಕ್ರಿಯಾಶೀಲತೆಯೊಂದಿಗೆ ಹೊಂದಿರುವ ಸಂಬಂಧಗಳು ಮತ್ತು ನಿರಂತರ ಚಲನಶೀಲತೆಯೇ ಜನಪದದ ಲಕ್ಷಣವಾಗಿದೆ. ಜನಪದ ಸಂಸ್ಕೃತಿಗೆ ಶಾಸ್ತ್ರೀಯತೆಯಲ್ಲಿ ಇರುವಂತೆ ಕಟ್ಟುಪಾಡುಗಳು ಇಲ್ಲ. ಅವುಗಳು ಜನತೆಯ ಬದುಕಿನೊಂದಿಗೆ ಬೆಳೆಯುವಂತದ್ದು ತುಳುನಾಡಿನ ಜನಪದವು ಇದಕ್ಕೆ ಹೊರತಾಗಿಲ್ಲ ತುಳುವರ ಎಲ್ಲರ ಆಚರಣೆಗಳು ಕೂಡ ಒಂದೇ ರೀತಿ ಇದೆ.
ಈ ಜನಪದವನ್ನು ಉಳಿಸಬೇಕಾಗಿದೆ. ತುಳುನಾಡಿನ ಈ ಜನಪದಕ್ಕೂ ವೈದಿಕ ಆಚರಣೆಗಳಿಗೂ ಯಾವುದೇ ಸಂಬಂಧವಿಲ್ಲ ತುಳುನಾಡು ಪರಶುರಾಮ ಸೃಷ್ಟಿ ಎನ್ನುವ ವಿಚಾರಕ್ಕೆ ತುಳುನಾಡಿನ ಕಥೆಗಳಲ್ಲಿ ಆಗಲಿ ಇಲ್ಲವೇ ಪಾಡ್ದನಗಳಲ್ಲಿ ಆಗಲಿ ಯಾವುದೇ ಕುರುಹುಗಳು ಇಲ್ಲ. ಈ ಸೃಷ್ಟಿಯ ಹೊರತಾಗಿ ಕೋಟಿ ಚೆನ್ನಯರ ಪಾಡ್ದನಗಳಲ್ಲಿ ಬರುವ ಸೂರ್ಯ ಚಂದ್ರರಿಂದ ಭೂಮಿ ಉಗಮವಾಯಿತು ಎಂಬ ಸಾಲುಗಳು ವೈಜ್ಞಾನಿಕತೆಗೆ ಹತ್ತಿರವಾಗಿದೆ. ಕೋಟಿ ಚೆನ್ನಯ್ಯ ಕೊರ್ದಬ್ಬು ದೈವದ ಕಥೆಗಳನ್ನು ಗಮನಿಸಿದರೆ ಇದು ಸಾಮಾಜಿಕ ಬದಲಾವಣೆಗಾಗಿ ನಡೆದ ಹೋರಾಟವೇ ಆಗಿದೆ. ತುಳು ನಾಡಿನ ಜನಪದವೇ ಕೃಷಿ ಸಂಸ್ಕೃತಿ, ಅವೈದಿಕ ಆಚರಣೆಗಳು, ಮಾತೃಮೂಲಿ ಪದ್ಧತಿ ಮೊದಲಾದ ಮೂಲ ಅಂಶಗಳನ್ನು ಹೊಂದಿದೆ. ಇಂದಿನ ಈ ಕಾಲಮಾನದಲ್ಲಿ ಮನುಷ್ಯತ್ವವನ್ನು ಪ್ರೀತಿಸುವ ಜನಪದ ಧರ್ಮವನ್ನು ಪ್ರತಿಪಾದಿಸುವ ಅವಶ್ಯಕತೆ ಇದೆ ಎಂದರು.
ಸಮುದಾಯ ಮಂಗಳೂರು ಅಧ್ಯಕ್ಷರಾದ ಪ್ರೊಫೆಸರ್ ರಾಜೇಂದ್ರ ಉಡುಪ, ಸಮುದಾಯ ಕರ್ನಾಟಕದ ಜೊತೆ ಕಾರ್ಯದರ್ಶಿಯಾದ ಉದಯ್ ಗಾಂವ್ಕರ್ ಪ್ರತಿಕ್ರಿಯೆ ನೀಡಿ ಮಾತನಾಡಿದರು. ಈ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಸಮುದಾಯ ಕರ್ನಾಟಕದ ಉಪಾಧ್ಯಕ್ಷರಾದ ವಾಸುದೇವ ಉಚ್ಚಿಲ್ ಇವರು ವಹಿಸಿದ್ದು ಸಭೆಯನ್ನುದ್ದೇಶಿಸಿ ಮಾತನಾಡಿದರು.