ಬಂಟ್ವಾಳ: ಜಿಲ್ಲಾಧಿಕಾರಿ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮದ ಅಂಗವಾಗಿ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಮಂಗಳವಾರ ಬಂಟ್ವಾಳಕ್ಕೆ ಭೇಟಿ ನೀಡಿ ಬಿ.ಸಿ.ರೋಡಿನ ತಾಲೂಕು ಆಡಳಿತ ಸೌಧದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಮುಂದೆ ಅಹವಾಲುಗಳ ಮಹಾಪೂರವೇ ಬಂತು.
ಬಿ.ಸಿ.ರೋಡು- ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಜಮೀನು ನೀಡಿದರೂ ಸೂಕ್ತ ಪರಿಹಾರ ಧನ ಪ್ರಾಪ್ತಿಯಾಗಿಲ್ಲ ಎಂದು ಸಂತ್ರಸ್ತ ಭೂ ಮಾಲಕರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರು. ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡರೂ ಇನ್ನೂ ಅನೇಕ ಮಂದಿ ಭೂಮಾಲಿಕರಿಗೆ ಪರಿಹಾರ ಮೊತ್ತ ಪಾವತಿಯಾಗದೆ ಇರುವುದು ಗಮನಕ್ಕೆ ಬಂದಿದೆ. ಪರಿಹಾರ ಸಿಗುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ನಡೆಸುವುದಾಗಿ ಡಿಸಿ ಭರವಸೆ ನೀಡಿದರು.
ಅಜಿಲಮೊಗರು ಕಡೇಶಿವಾಲಯ ಮಧ್ಯೆ ನೇತ್ರಾವತಿ ನದಿಗೆ ನಿರ್ಮಾಣಗೊಳ್ಳುತ್ತುರುವ ಸೌಹಾರ್ದ ಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಅವರ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಯವರ ಗಮನ ಸೆಳೆದರು.
ಶಂಭೂರಿನ ಎಎಂಆರ್ ಡ್ಯಾಂನಲ್ಲಿ ನೀರು ನಿಲುಗಡೆ ಮಾಡುತ್ತಿರುವುದರಿಂದ ಈ ಭಾಗದ ಕೃಷಿಕರು ತೊಂದರೆ ಅನುಭವಿಸುತ್ತಿದ್ದಾರೆ. ಸ್ಥಳೀಯ ತೋಟಗಳಲ್ಲಿ ನೀರು ನಿಂತು ಕೊಳೆರೋಗ ಬಾಧಿಸುತ್ತಿದೆ. ಆದ್ದರಿಂದ ಸಂತ್ತಸ್ತ ರೈತರಿಗೆ ಸೂಕ್ತ ಪರಿಹಾರ ನೀಡುವಂತೆಯೂ ಅವರು ಒತ್ತಾಯಿಸಿದರು.
ದೈವಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪೂರ್ಣಕಾಲಿಕ ವೈದ್ಯಾಧಿಕಾರಿಯನ್ನು ನೇಮಿಸಬೇಕು ಎಂದು ಅವರು ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದರು.
ಮಣಿನಾಲ್ಕೂರು ಸರಪಾಡಿಗೆ ಒಬ್ಬರೇ ವಿ.ಎ ಇದ್ದು ಜನರಿಗೆ ತೊಂದರೆ ಆಗುತ್ತಿರುವ ಬಗ್ಗೆ ಗ್ರಾಮಸ್ಥರೊಬ್ಬರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರು. ಜಿಲ್ಲೆಯಲ್ಲಿ 90 ಗ್ರಾಮ ಲೆಕ್ಕಿಗರು ಬೇಕಾಗಿದ್ದು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದೇವೆ ಎಂದು ಡಿ.ಸಿ.ಡಾ.ರಾಜೇಂದ್ರ ಅವರು ಹೇಳಿದರು.
ಕೆಲದಿನಗಳ ಹಿಂದೆ ಅಕ್ರಮ ಮರಳುಗಾರಿಕೆಗೆ ಗಣಿ ಇಲಾಖೆ ದಾಳಿ ನಡೆಸಿ ಮುಟ್ಟುಗೋಲು ಹಾಕಿ ಪಂಚಾಯತ್ ವಶಕ್ಕೆ ಒಪ್ಪಿಸಿದ್ದ ದೋಣಿ ಹಾಗೂ ಮರಳನ್ನು ಯಾರೋ ಕದ್ದೊಯ್ದಿದ್ದು, ಅಪರಾಧಿಗಳನ್ನು ಪತ್ತೆ ಹಚ್ಚುವ ಕಾರ್ಯ ಅಗಿಲ್ಲ ಎಂದು ಮಣಿನಾಲ್ಕೂರು ಗ್ರಾಪಂ.ಅಧ್ಯಕ್ಷೆ ನಾಗವೇಣಿ ನೇತೃತ್ವದಲ್ಲಿ ಪಂಚಾಯತ್ ಸದಸ್ಯರು ಡಿ.ಸಿ.ಅವರಿಗೆ ದೂರು ಸಲ್ಲಿಸಿತು.
ಸಜೀಪಮುನ್ನೂರು ಗ್ರಾಮದ ಶಾರದ ನಗರದಲ್ಲಿ ಹಿಂದೂ ರುದ್ರಭೂಮಿಗೆ ಮಂಜೂರಾದ ಜಮೀನಿನಲ್ಲಿ ತಕ್ಷಣ ಸ್ಮಶಾನ ನಿರ್ಮಿಸಬೇಕು, ನರಿಕೊಂಬು ಗ್ರಾಮದ ನಾಯಿಲ ಪ್ರದೇಶದ ರೈತರು ರಾಜ ಕಾಲುವೆ ಒತ್ತುವರಿಯನ್ನು ತೆರವುಗೊಳಿಸುವುದಲ್ಲದೆ ತೋಡಿನ ಹೂಳೆತ್ತಿ ರೈತರಿಗಾಗುವ ನಷ್ಟವನ್ನು ಪರಿಹರಿಸಬೇಕು ಹಾಗೂ ತುಂಬೆ ಡ್ಯಾಂ ಸಂತ್ರಸ್ತ ರೈತರಿಗೆ ವರತೆ ಪ್ರದೇಶಕ್ಕೆ ಪರಿಹಾರ ದೊರಕದಿರುವ ಬಗ್ಗೆ ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್ ಅವರು ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ರಾಜೇಂದ್ರ ಅವರು ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕೃಷಿ ಇಲಾಖೆಯ ಮೂಲಕ ವರತೆ ಪ್ರದೇಶ ಗುರುತಿಸಿ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪಿಂಕ್ ಟಾಯ್ಲೆಟ್ ;ಡಿ.ಸಿ.ಗರಂ
ಬಿ.ಸಿ.ರೋಡಿನ ತಾಲೂಕು ಆಡಳಿತ ಸೌಧದ ಗೇಟ್ ಗೆ ತಾಗಿಕೊಂಡೆ ಪುರಸಭೆ ಪಿಂಕ್ ಟಾಯ್ಲೆಟ್ ನಿರ್ಮಿಸುತ್ತಿರುವ ಬಗ್ಗೆ ಆರಂಭದಲ್ಲೇ ಗರಂ ಆದ ಜಿಲ್ಲಾಧಿಕಾರಿಯವರು ಪುರಸಭಾ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಅವರನ್ನು ತರಾಟೆಗೆ ತೆಗೆದುಕೊಂಡರು.