ಸುರತ್ಕಲ್: ಎರಡು ದಿನಗಳ ಹಿಂದೆ ನೇಣು ಬಿಗಿದು ಸಾವಿಗೆ ಶರಣಾಗಿರುವ ಏಳನೇ ತರಗತಿ ವಿದ್ಯಾರ್ಥಿ ಕೃಷ್ಣಾಪುರ ನಿವಾಸಿ ಹರ್ಷಿತ್ ದೇವಾಡಿಗ(14) ಪ್ರಕರಣಕ್ಕೆ ಸಂಬಂಧಿಸಿ ಸಮಗ್ರ ತನಿಖೆಗೆ ಒತ್ತಾಯಿಸಿ ಸ್ಥಳೀಯ ಕಾರ್ಪೋರೇಟರ್ ಲಕ್ಷ್ಮಿ ಶೇಖರ್ ದೇವಾಡಿಗ ನೇತೃತ್ವದಲ್ಲಿ ಸ್ಥಳೀಯರು ಸುರತ್ಕಲ್ ಇನ್ಸ್ ಪೆಕ್ಟರ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತಾಡಿದ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಅವರು, “ಬಾಲಕನ ಸಾವಿನ ಕುರಿತಂತೆ ಈಗಾಗಲೇ ಶಾಲೆಯಲ್ಲಿ ತನಿಖೆ ನಡೆಸಲಾಗಿದೆ. ಮಕ್ಕಳು ತಮಾಷೆ ಮಾಡುತ್ತಿದ್ದ ಕ್ಷುಲ್ಲಕ ಕಾರಣಕ್ಕೆ ಬಾಲಕ ದುಡುಕಿನ ನಿರ್ಧಾರ ಕೈಗೊಂಡಿದ್ದು ಸ್ಪಷ್ಟವಾಗಿದೆ. ಆದರೂ ಮಕ್ಕಳ ಕಲ್ಯಾಣ ಸಮಿತಿ ನಡೆಸುವ ತನಿಖೆಗೆ ನಾವು ಇಲಾಖೆಯ ವತಿಯಿಂದ ಸಹಕಾರ ನೀಡಲಿದ್ದೇವೆ” ಎಂದರು.
ಮನಪಾ ಸದಸ್ಯೆ ಲಕ್ಷ್ಮಿ ಶೇಖರ ದೇವಾಡಿಗ, ಸದಸ್ಯ ಪ್ರಶಾಂತ್ ಮೂಡಾಯಿಕೊಡಿ, ಸುಧಾಕರ ದೇವಾಡಿಗ, ದಿನಕರ ದೇವಾಡಿಗ, ಹರೀಶ ದೇವಾಡಿಗ, ದೇವರಾಜ ದೇವಾಡಿಗ, ಲಕ್ಷ್ಮೀಶ್ ದೇವಾಡಿಗ, ಶೇಖರ ದೇವಾಡಿಗ, ದುರ್ಗಾ ಪ್ರಸಾದ್ ಹೊಳ್ಳ, ಶಿವಪ್ರಸಾದ್ ಬೊಳ್ಳಾಜೆ, ಸತೀಶ್ ಅಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಮೃತ ಹರ್ಷಿತ್ ಗೆ 83% ಮಾರ್ಕ್ಸ್ ಇತ್ತು ಹೀಗಾಗಿ ಶೈಕ್ಷಣಿಕ ದೃಷ್ಟಿಯಿಂದ ಶಾಲೆಯ ಆಡಳಿತ ಹೊಣೆ ಎನ್ನಲಾಗದು. ಮಕ್ಕಳ ಕಿಚಾಯಿಸುವಿಕೆಯಿಂದ ಬೇಸತ್ತು ಕೃತ್ಯ ಎಸಗಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಐದನೇ ಘಟನೆ ಇದಾಗಿದ್ದು ಮಕ್ಕಳ ಖಿನ್ನತೆಯನ್ನು ಮನೆಮಂದಿ, ಶಾಲೆ ಶಿಕ್ಷಕರು ಗಮನಿಸಬೇಕು. ಮಕ್ಕಳ ಕಲ್ಯಾಣ ಸಮಿತಿ ನಿಯೋಗ ತನಿಖೆ ನಡೆಸಿ ವರದಿ ನೀಡುತ್ತದೆ. ಈಗಿನ ಮಕ್ಕಳು ಸೂಕ್ಷ್ಮಮತಿಗಳಾಗಿದ್ದಾರೆ. ಈ ಬಗ್ಗೆ ಎಚ್ಚರಿಕೆ ಅಗತ್ಯ.