ಸುರತ್ಕಲ್: ಪೊಲೀಸ್ ಠಾಣಾ ವ್ಯಾಪ್ತಿಯ ಸುಭಾಷಿತ ನಗರ ಜಂಕ್ಷನ್ ಬಳಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಿಸಿದ ಕಾರ್ ನಿಯಂತ್ರಣ ಕಳೆದುಕೊಂಡು ಹೋಟೆಲ್ ಮುಂಭಾಗದ ಹೋರ್ಡಿಂಗ್, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಜ್ಜುಗುಜ್ಜಾದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಶ್ರೀನಿವಾಸ ಆಸ್ಪತ್ರೆಯ ವೈದ್ಯ ಹಾಗೂ ಇನ್ನೊಬ್ಬರು ಕಾರಲ್ಲಿದ್ದು ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿರುದ್ಧ ದಿಕ್ಕಿನಿಂದ ಸುಭಾಷಿತನಗರ ಕಡೆಗೆ ಹೋಗಲು ಕಾರ್ ಚಾಲಕ ಏಕಾಏಕಿ ಹೆದ್ದಾರಿಗೆ ನುಗ್ಗಿದ್ದು ಈ ವೇಳೆ ಉಡುಪಿ ಕಡೆಯಿಂದ ಬರುತ್ತಿದ್ದ ಟ್ಯಾಂಕರ್ ಚಾಲಕ ಬಲಬದಿಗೆ ತಿರುಗಿಸಿದ್ದರಿಂದ ಕಾರಲ್ಲಿದ್ದವರ ಪ್ರಾಣ ಉಳಿದಿದೆ.
ಇಲ್ಲದಿದ್ದರೆ ಭೀಕರ ಅಪಘಾತ ಸಂಭವಿಸುತ್ತಿತ್ತು. ಸ್ಥಳಕ್ಕೆ ಬೈಕಂಪಾಡಿ ಸಂಚಾರಿ ಠಾಣಾ ಪೊಲೀಸರು ಆಗಮಿಸಿದ್ದಾರೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.