ಬೆಳ್ತಂಗಡಿ: ಸರಕಾರ ಗ್ರಾಮಕ್ಕೊಂದು ಗ್ರಂಥಾಲಯ ಎಂಬ ಯೋಜನೆಯನ್ನು ಜಾರಿಗೊಳಿಸಿದ್ದು ಇದು ಸಾಮಾಜಿಕ ಜಾಲತಾಣಗಳು ಬಂದ ನಂತರ ಇದರ ಮೌಲ್ಯ ಕಳೆದುಕೊಂಡಿದೆ. ಆದರೆ ಓದುಗರನ್ನು ಆಕರ್ಷಿಸಬೇಕು, ವಿದ್ಯಾರ್ಥಿಗಳು ಹೆಚ್ಚಿನ ರೀತಿಯಲ್ಲಿ ಗ್ರಂಥಾಲಯದ ಪ್ರಯೋಜನ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ರಾಜ್ಯಕ್ಕೆ ಮಾದರಿಯಾಗುವಂತಹ ಅತ್ಯುತ್ತಮ ರೀತಿಯಲ್ಲಿ ಗ್ರಂಥಾಲಯ ನಿರ್ಮಾಣವಾಗಬೇಕು ಎಂಬ ಕಲ್ಪನೆಯೊಂದಿಗೆ ೨ಕೋಟಿ ರೂ. ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣವಾಗುತ್ತಿದ್ದು ಈ ಗ್ರಂಥಾಲಯ ಜ್ಞಾನತುಂಬುವ ಪವಿತ್ರ ಕ್ಷೇತ್ರವಾಗಬೇಕು ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.
ಅವರು ಶನಿವಾರ ಬೆಳ್ತಂಗಡಿ ಜೂನಿಯರ್ ಕಾಲೇಜಿನ ಬಳಿ ೨ ಕೋಟಿ ರೂ ವೆಚ್ಚದ ಗ್ರಂಥಾಲಯ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ನವ ಬೆಳ್ತಂಗಡಿ ಎಂಬ ಕಲ್ಪನೆಯಲ್ಲಿ ಬಹುತೇಕ ಕಾಮಗಾರಿಗಳು ಪೂರ್ಣಗೊಳ್ಳುತ್ತಿದೆ ಇದರ ಒಂದು ಭಾಗ ಗ್ರಂಥಾಲಯ ಕೂಡ. ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಅರಸಿನಮಕ್ಕಿಯಲ್ಲಿ ೨೫ಕೋಟಿ ರೂ. ವೆಚ್ಚದಲ್ಲಿ ಶಾಲೆ ನಿರ್ಮಾಣವಾಗುತ್ತಿದ್ದು ಜೊತೆಗೆ ಬೆಳ್ತಂಗಡಿಯಲ್ಲಿ ಪ್ರವಾಸಿ ಬಂಗಲೆ ನಿರ್ಮಾಣವಾಗುತ್ತಿದೆ. ತಾ.ಪಂ.ನ ಕಟ್ಟಡ ಬಹುತೇಕ ಪೂರ್ಣಗೊಂಡಿದ್ದು ಪ್ರಥಮದರ್ಜೆ ಕಾಲೇಜು ಮೆಲಂತಬೆಟ್ಟು, ಪುಂಜಾಲಕಟ್ಟೆ ಪ್ರಥಮದರ್ಜೆ ಕಾಲೇಜಿನ ಕಟ್ಟಡಗಳು ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿದವೆ.
ಕೃಷಿಗೆ ಅನುಕೂಲವಾಗುವಂತೆ ಕಿಂಡಿ ಅಣೆಕಟ್ಟುಗಳು ನಿರ್ಮಾಣವಾಗಿದ್ದು ಇದೀಗ ತಾಲೂಕು ಬಸ್ ನಿಲ್ದಾಣವು ಅತ್ಯಂತ ಆಕರ್ಷಣಿಯವಾಗಿ ನಿರ್ಮಾಣಗೊಳ್ಳಲಿದೆ. ಒಟ್ಟಾಗಿ ನವ ಬೆಳ್ತಂಗಡಿ ಕನಸನ್ನು ನನಸು ಮಾಡುವುದೇ ನನ್ನ ಪ್ರಥಮ ಆದ್ಯತೆಯಾಗಿದೆ. ಈ ಮೂಲಕ ತಾಲೂಕಿನ ಜನತೆಗೆ ಇನ್ನಷ್ಟು ಮೂಲಭೂತ ಅಭಿವೃದ್ಧಿಯನ್ನು ಕಲ್ಪಿಸಲಾಗುತ್ತಿದೆ ಎಂದರು.
ನ.ಪಂ ಉಪಾಧ್ಯಕ್ಷ ಜಯಾನಂದ ಗೌಡ ಮಾತನಾಡಿ ಹಿಂದೆಂದೂ ಕಾಣದ ರೀತಿಯಲ್ಲಿ ತಾಲೂಕು ಅಭಿವೃದ್ಧಿಗೊಳ್ಳುತ್ತಿದ್ದು ಜನರ ಬೇಡಿಕೆಗಳನ್ನು ನಿರೀಕ್ಷೆಗಿಂದ ಹೆಚ್ಚಿನ ರೀತಿಯಲ್ಲಿ ಶಾಸಕ ಹರೀಶ್ ಪೂಂಜಾರವರು ಈಡೇರಿಸುತ್ತಿದ್ದಾರೆ. ನಗರಕ್ಕೆ ಗ್ರಂಥಾಲಯದ ಬೇಡಿಕೆ ಹಲವಾರು ವರ್ಷಗಳಿಂದ ಇದ್ದು ಇದೀಗ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ೨ಕೋಟಿ ರೂ. ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣವಾಗುತ್ತಿದ್ದು ನಗರಕ್ಕೆ ಹೊಸ ಹುರುಪನ್ನು ನೀಡಲಿದೆ. ಕಟ್ಟಡವು ನೆಲ ಮಹಡಿ, ೧೮೬೨.೧೬ ಚ.ಅಡಿ, ಮೊದಲ ಮಹಡಿ ೧೮೬೨.೧೬ಚ.ಅಡಿ, ಎರಡನೇ ಮಹಡಿ ೧೧೭೦.೪೩ಚ.ಅಡಿ, ಹೊರಾಂಗಣ ೬೫೪.೪೫ಚ.ಅಡಿ, ಒಟ್ಟು ೫೫೪೯.೨೩ಚದರ ಅಡಿ ಹೊಂದಿದ್ದು ೨೦೦ಮಂದಿಗೆ ಆಸನದ ವ್ಯವಸ್ಥೆ ಇದೆ. ವಿದ್ಯಾಥಿಗಳಿಗೆ, ಓದುಗರಿಗೆ ಇದೊಂದು ದೊಡ್ಡ ಕೊಡುಗೆಯಾಗಿದೆ. ನ.ಪಂ ಕೂಡ ಇದಕ್ಕೆ ಸಹಕಾರ ನೀಡಲಿದೆ. ಎಂದರು.
ಕಾರ್ಯಕ್ರಮದಲ್ಲಿ ನ.ಪಂ ಅಧ್ಯಕ್ಷೆ ರಜನಿ ಕುಡ್ವ, ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ ನಾಯ್ಕ್, ಸದಸ್ಯರಾದ ಶರತ್, ಅಂಬರೀಶ್, ನಾಮನಿರ್ದೇಶನ ಸದಸ್ಯರಾದ ಪ್ರಕಾಶ್, ಲಲಿತಾ, ಕೇಶವ, ಬೆಳ್ತಂಗಡಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕುಮಾರ್, ಮೆಲಂತಬೆಟ್ಟು ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ, ನ.ಪಂ ಮುಖ್ಯಾಧಿಕಾರಿ ರಾಜೇಶ್ ಕೆ, ಭುಜಬಲಿ ಧರ್ಮಸ್ಥಳ, ವಿಶ್ವನಾಥ ಆರ್ ನಾಯಕ್, ಪ್ರಮೋದ್ ಆರ್ ನಾಯಕ್, ಜಿಲ್ಲಾ ಗ್ರಂಥಾಲಯ ಅಧಿಕಾರಿ ಗಾಯತ್ರಿ, ಉಪಸ್ಥಿತರಿದ್ದರು.
ಜಿಲ್ಲಾ ಗ್ರಂಥಾಲಯ ಅಧಿಕಾರಿ ಗಾಯತ್ರಿ ಸ್ವಾಗತಿಸಿ, ಜಿಲ್ಲಾ ಗ್ರಂಥಾಲಯದ ಮೇಲ್ವಿಚಾರಕಿ ಪ್ರಣೀತ ವಂದಿಸಿದರು. ತಾ.ಪಂ ಸಂಯೋಜಕ ಜಯಾನಂದ್ ಕಾರ್ಯಕ್ರಮ ನಿರೂಪಿಸಿದರು.