ಮಂಗಳೂರು: ಸೌಜನ್ಯ ಹೋರಾಟಕ್ಕೆ ಒಡನಾಡಿ ಸಂಸ್ಥೆ ಎಂಟ್ರಿ ಕೊಟ್ಟಿದ್ದು, ಸೋಮವಾರ ಸೌಜನ್ಯಾ ಪರ ಹೋರಾಟಗಾರರನ್ನು ಒಡನಾಡಿ ಸಂಸ್ಥೆ ಮುಖಂಡರು ಭೇಟಿಯಾಗಿದ್ದಾರೆ.
ಈ ಹಿಂದೆ ಮುರುಘಾ ಶ್ರೀ ಪ್ರಕರಣದಲ್ಲಿ ಹೋರಾಟಕ್ಕಿಳಿದಿದ್ದ ಒಡನಾಡಿ ಸಂಸ್ಥೆ ಇದೀಗ ರಾಜ್ಯಾದ್ಯಂತ ಸೌಜನ್ಯಾ ಪರ ಹೋರಾಟ ನಡೆಸಲಿದೆ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ಒಡನಾಡಿಯ ಸ್ಥಾಪಕ ಕಾರ್ಯದರ್ಶಿ ಸ್ಟಾಲಿನ್, ಸೌಜನ್ಯಾ ಪ್ರಕರಣ ತಲೆ ತಗ್ಗಿಸುವಂತಹ ಘಟನೆಯಾಗಿದ್ದು, ಅತ್ಯಾಚಾರ ಮಾಡಿದ ಪಾಪಿಗಳನ್ನು ಇನ್ನೂ ನ್ಯಾಯದ ಕಟ ಕಟೆಗೆ ತರಲಾಗಿಲ್ಲ, ದೇಶದ ಕಾನೂನಿಗೆ ಪಾಪಿಗಳಿಗೆ ಶಿಕ್ಷೆ ನೀಡಲು ಸಾಧ್ಯವಾಗಿಲ್ಲ ಎಂಬುದು ನಗೆಪಾಟಿಲಿನ ಸಂಗತಿ. ಸಿಬಿಐ ಘನತೆಯನ್ನ ಉಳ್ಳಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತೆ ಮರುತನಿಖೆಯಾಗಬೇಕು.
ನಾವು ಈ ಹೋರಾಟದಲ್ಲಿ ಕೈ ಜೋಡಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಸೌಜನ್ಯಳನ್ನು ಅತ್ಯಾಚಾರ ಮಾಡಿ ಕೊಲೆ ನಡೆಸಿದ್ದು ಯಾರು ಎಂಬುದು ನಮ್ಮ ಹುಡುಕಾಟ. ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಈ ಬಗ್ಗೆ ಹೆಚ್ಚು ಮಾತನಾಡಬೇಕು. ಸಾಮಾಜಿಕ ಜವಾಬ್ದಾರಿ ಹೊಣೆಗಾರಿಕೆ ಹೊತ್ತವರು, ಆ ಮಗುವಿಗೆ ಸಂಬಂಧ ಪಟ್ಟವರಿಗೆ ಸಾಂತ್ವನ ಹೇಳುವುದು ಅವರ ಕರ್ತವ್ಯವಾಗಿದೆ.
ಆ ಮಗುವಿಗೋಸ್ಕರ ನಾನು ಇದ್ದೇನೆ ಎನ್ನುವುದು ಹೆಗ್ಗಡೆ ಅವರ ಬಾಯಿಂದ ಬರಲಿ. ಆ ಮಾತು ಅವರ ಬಾಯಿಯಿಂದ ಬಂದರೆ ನಾವು ಅವರಿಗೆ ಋಣಿಗಳಾಗುತ್ತೇವೆ. ಸೌಜನ್ಯಾ ಹೋರಾಟ ಧರ್ಮದ ಕಾರ್ಯ. ಈ ಮಗುವಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಇಡೀ ರಾಜ್ಯದಲ್ಲಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.