ಬೆಳ್ತಂಗಡಿ: ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಇಡೀ ರಾಷ್ಟ್ರಕ್ಕೆ ಶಕ್ತಿ. ಉದ್ಯಮಿಗಳು,ಶಿಕ್ಷಣತಜ್ಞರು,ಸುಶಿಕ್ಷಿ ತರು ನೆಲೆಸಿರುವ ಉಜಿರೆಯ ಶಿವಾಜಿನಗರ ಉಜಿರೆಯ ಹೆಮ್ಮೆ. ಶಿವಾಜಿಯ ಆದರ್ಶ ವ್ಯಕ್ತಿತ್ವ ನಮಗೆಲ್ಲ ಪ್ರೇರಣೆಯಾಗಲಿ ಎಂದು ಶಾಸಕ ಹರೀಶ್ ಪೂಂಜ ನುಡಿದರು.
ಅವರು ಮಾ. 28 ರಂದು ಉಜಿರೆಯ ಬೆಳಾಲು ರಸ್ತೆಯ ಶಿವಾಜಿನಗರ ತಿರುವಿನಲ್ಲಿ ಭವ್ಯ ಶಿವಾಜಿ ಪ್ರತಿಮೆಯನ್ನು ಅನಾವರಣಗೊಳಿಸಿ, ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಳ್ತಂಗಡಿ ತಾಲೂಕಿನ 81 ಗ್ರಾಮಗಳ 241 ಬೂತ್ ಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಕಳೆದ 4.5 ವರ್ಷಗಳಲ್ಲಿ ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳಾಗಿವೆ.
ಮುಖ್ಯವಾಗಿ ಉಜಿರೆಯಿಂದ ಬೆಳಾಲು-ಕುಪ್ಪೆಟ್ಟಿ ಸಂಪರ್ಕಿಸುವ 28 ಕಿ .ಮೀ ರಸ್ತೆ ಅಗಲಗೊಳಿಸಿ ಕಾಂಕ್ರಿಟೀಕರಣ,ಡಾಮರೀಕರಣ ದಿಂದ ಸುಂದರಗೊಳಿಸಲಾಗಿದೆ. ಇಡೀ ತಾಲೂಕಿನ ಪ್ರಮುಖ ರಸ್ತೆಗಳ ನ್ನು ಅಭಿವೃದ್ಧಿಪಡಿಸಿ ವಿನೂತನ ಕ್ರಾಂತಿ ನಿರ್ಮಿಸಲಾಗಿದೆ. 48 ಕಿಂಡಿ ಅಣೆಕಟ್ಟುಗಳ ಮೂಲಕ 306 ಕಿ.ಮೀ ವಿಸ್ತೀರ್ಣಕ್ಕೆ ಅಂತರ್ಜಲ ಹೆಚ್ಚಿಸಿ ನೀರಿನ ಕೊರತೆ ನೀಗಲಾಗಿದೆ. ಮುಂದೆ ಇನ್ನೂ 50 ಕಿಂಡಿ ಅಣೆಕಟ್ಟುಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಲೂಕಿಗೆ ನಿರಂತರ ವಿದ್ಯುತ್ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಕಕ್ಕಿಂಜೆಯಲ್ಲಿ ಯೆನಪೋಯ ಸಂಸ್ಥೆ ಕೊಡಮಾಡಿದ 15 ಎಕ್ರೆ ಸ್ಥಳದಲ್ಲಿ 116 ಕೆವಿಎ ಸಬ್ ಸ್ಟೇಷನ್ ನಿರ್ಮಾಣಗೊಳ್ಳಲಿದೆ. ತಾಲೂಕಿಗೆ 28 ಹೊಸ ಅಂಗನವಾಡಿಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಬೆಳ್ತಂಗಡಿ ಜೂನಿಯರ್ ಕಾಲೇಜಿಗೆ ಮೂಲಭೂತ ಸೌಕರ್ಯಗಳಿಗಾಗಿ ರೂ 3.5 ಕೋಟಿ ಅನುದಾನ ಒದಗಿಸಲಾಗಿದೆ. ಬೆಳ್ತಂಗಡಿ ರೇಷ್ಮೆ ರೋಡ್ ನಲ್ಲಿ ಬೆಳಗಾವಿ ವಿ. ಟಿ .ವಿ.ವಿ. ವತಿಯಿಂದ 15 ಎಕ್ರೆ ಪ್ರದೇಶದಲ್ಲಿ ರಾಜ್ಯ ದಲ್ಲೇ ಮೊದಲ ಮೆರೈನ್ ಇಂಜಿನೀರಿಂಗ್ ಕಾಲೇಜು ನಿರ್ಮಾಣಕ್ಕೆ ರೂ 40 ಕೋಟಿ ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದ್ದು ಅನುಮತಿ ದೊರೆತಿದೆ. ರೂ 7೦೦ ಕೋಟಿ ವೆಚ್ಚದಲ್ಲಿ ಪುಂಜಾಲಕಟ್ಟೆ -ಚಾರ್ಮಾಡಿ ರಸ್ತೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭಗೊಂಡಿದೆ.
ದೇಶದಲ್ಲೇ ಮೊದಲ ಬಾರಿಗೆ ಖಾಸಗಿ ಇಂಜಿನಿಯರ್ ನೀಲನಕ್ಷೆ , ನವೀನ ವಿನ್ಯಾಸದೊಂದಿಗೆ ಧರ್ಮಸ್ಥಳದಲ್ಲಿ ಪೊಲೀಸ್ ಠಾಣೆ ಕಟ್ಟಡ,ಬೆಳ್ತಂಗಡಿಯ ನೂತನ ಪ್ರವಾಸಿ ಮಂದಿರ ಹಾಗೂ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನ ಲೋಕಾರ್ಪಣೆಗೊಂಡಿದ್ದು, 1.20 ಎಕ್ರೆ ಪ್ರದೇಶದಲ್ಲಿ ರೂ 12 ಕೋಟಿ ವೆಚ್ಚದಲ್ಲಿ ಬೆಳ್ತಂಗಡಿಯಲ್ಲಿ ನೂತನ ಬಸ್ ನಿಲ್ದಾಣ ಸಂಕೀರ್ಣ 2 ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಹೀಗೆ ನವ ಬೆಳ್ತಂಗಡಿ ನಿರ್ಮಾಣದ ಕಾಮಗಾರಿಗಳ ಕನಸು ನನಸಾಗುತ್ತಿದೆ. ಶಿವಾಜಿನಗರದ ಬೇಡಿಕೆಯಾದ ಪಾರ್ಕ್ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಅನುದಾನ ದೊರಕಿಸಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಿವಾಜಿನಗರ ಉಜಿರೆಯ ಮೊದಲ ಬಡಾವಣೆಯಾಗಿ ಸೌಂದರ್ಯ,ನಾಗರಿಕರ ಒಗ್ಗಟ್ಟು ,ನಾಗರೀಕ ಪ್ರಜ್ಞೆ,ವಿದ್ಯಾವಂತರಿಂದ ಸ್ವಚ್ಛತೆಗೆ ಮಾದರಿ ಬಡಾವಣೆಯಾಗಿ ಗುರುತಿಸಲ್ಪಟ್ಟಿದೆ ಎಂದು ಅಭಿನಂದಿಸಿದರು. ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್,ಉಜಿರೆ ಗ್ರಾ,ಪಂ.ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ,ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿ ವಾಜಿ ಪ್ರತಿಮೆಯನ್ನು ಪ್ರಾಯೋಜಿಸಿ ,ದಂತವೈದ್ಯ ಡಾ!ಎಂ.ಎಂ.ದಯಾಕರ್ ಸ್ವಾಗತಿಸಿ,ಪ್ರ್ತಸ್ತಾವಿಸಿದರು. ಇಂಜಿನಿಯರ್ ಜಗದೀಶ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಬಾಕ್ಸ್ ಶಾಸಕ ಹರೀಶ್ ಪೂಂಜ ಅವರು ಶಿವಾಜಿನಗರದಲ್ಲಿ ಹೈ ಮಾಸ್ಟ್ ದೀಪ, ಸಿ ಸಿ ಕ್ಯಾಮರಾ ಹಾಗೂ ರೂ 6೦ ಲಕ್ಷ ವೆಚ್ಚದಿಂದ ನಿರ್ಮಾಣಗೊಂಡ 3 ರಸ್ತೆಗಳ ಕಾಂಕ್ರೀಟೀಕರಣವನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದ ಗುಣಪಾಲ ಬಂಗ,ಮಾದರಿ ಬ್ಯಾಂಕ್ ಉದ್ಯೋಗಿ ಅರವಿಂದ,ಮೆಸ್ಕಾಂ ನ ಉಮೇಶ್, ವಾಟರ್ ಮ್ಯಾನ್ ಹಮೀದ್, ಪೋಸ್ಟ್ ಮ್ಯಾನ್ ರಾಜೇಶ್,ಮೇಸ್ತ್ರಿ ಗುರುರಾಜ್ ಮತ್ತು ಅಣ್ಣು, ಎಚ್ ಪಿ ಗ್ಯಾಸ್ ವಿತರಕ ಮುಕುಂದ,ಇಂಡೇನ್ ಗ್ಯಾಸ್ ವಿತರಕ ಮೋಹನ್ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಶಿವಾಜಿನಗರದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕಿಟ್ ವಿತರಿಸಲಾಯಿತು. ಶಾಸಕ ಹರೀಶ್ ಪೂಂಜ ,ಶರತ್ ಕೃಷ್ಣ ಪಡುವೆಟ್ನಾಯ ಅವರನ್ನು ಶಿವಾಜಿನಗರ ಬೂತ್ ಅಧ್ಯಕ್ಷ,ಗ್ರಾ.ಪಂ.ಸದಸ್ಯ ವಿನೋಬಾ ಕಾರಂತ್ ಮತ್ತು ಗಣ್ಯರು ಸಮ್ಮಾನಿಸಿ ಗೌರವಿಸಿದರು ಉಜಿರೆಯ ಖ್ಯಾತ ಗಾಯಕ ಸುಬ್ರಹ್ಮಣ್ಯ ಭಟ್ ಮತ್ತು ಅನನ್ಯಾ ಭಟ್ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.