ಮಂಗಳೂರು: ತುಳುನಾಡಿನ ಕಾರಣಿಕ ಪುರುಷರಾದ ಕಾಂತಾಬಾರೆ-ಬೂದಬಾರೆಯರ ಜನ್ಮಸ್ಥಾನಕ್ಕೆ ಸಂಬಂಧಪಟ್ಟ ಭೂಮಿ ಇದಾಗಿದ್ದು, ತುಳುನಾಡಿನ ಮೂಲ ನಿವಾಸಿಗಳಾದ ಕೊರಗರ ಸಮುದಾಯ, ಇನ್ನಿತರ ದಲಿತ ಸಮುದಾಯಗಳೂ ಸಂತ್ರಸ್ತರಾಗಿದ್ದಾರೆ.
ಇಲ್ಲಿನ ಜನರು ತಮ್ಮ ಪೂರ್ವಜರ ಕಾಲದಿಂದ ನಂಬಿಕೊಂಡು ಬಂದಿರುವ ದೈವಸ್ಥಾನಗಳು, ದೇವಸ್ಥಾನ, ಮಸೀದಿ, ಚರ್ಚ್ ಕೈಗಾರಿಕಾ ವಲಯ ನಿರ್ಮಾಣದಡಿ ಅವಶೇಷವಾಗುವ ಆತಂಕದಲ್ಲಿವೆ.
ಕರಾವಳಿಯಲ್ಲಿ ಅತೀ ಹೆಚ್ಚು ಅಂದರೆ 11 ಎಕರೆ ಕೃಷಿ ಭೂಮಿ ಹೊಂದಿರುವ ಕೊರಗ ಸಮುದಾಯದ ಭೂಮಿ, 42 ದೈವಗಳಿರುವ ದೈವಸ್ಥಾನಗಳು ಕಣ್ಮರೆ ಆಗಲಿದೆ. ಏನೇ ಆದರೂ ತಾವು ಯಾರೂ ನಮ್ಮ ಪೂರ್ವಿಕರ ನೆಲೆಬೀಡಾಗಿರುವ ಕೃಷಿ ಭೂಮಿ, ದೈವ-ದೇವರಗಳನ್ನು ಬಿಟ್ಟು ಹೋಗುವುದಿಲ್ಲವೆಂದು ಇಲ್ಲಿಯ ಜನರು ಗಟ್ಟಿ ನಿರ್ಧಾರವನ್ನು ಮಾಡಿಕೊಂಡಿದ್ದಾರೆ.
ಆದರೆ ಈ ನಡುವೆಯೇ ಬೆರಳೆಣಿಕೆಯಷ್ಟು ಮಂದಿ ನಾವು ಭೂಮಿಯನ್ನು ನೀಡಲು ಸಿದ್ಧರಿದ್ದೇವೆ ಎನ್ನುವಂತಹ ಹೇಳಿಕೆಗಳನ್ನು ನೀಡುತ್ತಿದ್ದು, ಬುಧವಾರ ನಡೆದ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆಯಾಗಿದೆ.
ಇಲ್ಲಿ ಜಮೀನು ಮಾಡಿಕೊಂಡು ಹಣ ಮಾಡಿಕೊಂಡು ಬೇರೆ ಊರಲ್ಲಿರುವವರು ಈ ರೀತಿಯ ಹೇಳಿಕೆಯನ್ನು ನೀಡುತ್ತಿದ್ದಾರೆ ಆದರೆ ನಾವು ಯಾವುದೇ ಕಾರಣಕ್ಕೂ ನಮ್ಮ ಊರು, ಜಮೀನು ಬಿಟ್ಟು ಹೋಗುವುದಿಲ್ಲ ಎಂದು ಅನೇಕ ಸ್ಥಳೀಯರು ಹೇಳುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ನೈಸರ್ಗಿಕವಾಗಿ ಸೌಂದರ್ಯ ಹೊಂದಿರುವ ಜಿಲ್ಲೆ ಆದರೆ ಕೈಗಾರಿಕಾ ಪ್ರವೇಶದಿಂದ ಸಾವಿರಾರು ಎಕ್ಕರೆ ಜಮೀನು ಕಾರ್ಖಾನೆಗಳ ಪಾಲಾಗಿ ತನ್ನ ತನವನ್ನು ಕಳೆದುಕೊಂಡುಬಿಟ್ಟಿದೆ
ಇದೀಗ ಹೊಸ ಕೈಗಾರಿಕೆಗಳ ಸ್ಥಾಪನೆಗಾಗಿ ಶಾಂಭವಿ ನದಿ ದಡದಲ್ಲಿರುವ ಮೂರು ಗ್ರಾಮಗಳ ಜನರು ತಮ್ಮ ಮೂಲ ನೆಲೆಯನ್ನೇ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಇಲ್ಲಿನ ಸುಮಾರು 1091 ಎಕರೆಯಷ್ಟು ಜನವಸತಿ ಪ್ರದೇಶ, ಕೃಷಿ ಭೂಮಿಯು ಕೈಗಾರಿಕಾ ವಲಯದಡಿ ಸಮಾಧಿಯಾಗಲಿದೆ ಎನ್ನಲಾಗುತ್ತಿದೆ.
ಜಿಲ್ಲೆಯ ಕಿನ್ನಿಗೋಳಿ ಸಮೀಪದ ಉಳೆಪಾಡಿ, ಬಳ್ಕುಂಜೆ, ಕೊಲ್ಲೂರು ಈ ಮೂರು ಗ್ರಾಮಗಳು ಕೈಗಾರಿಕಾ ವಲಯ ಸ್ಥಾಪನೆಗೆ ಸರಕಾರ ವಶಪಡಿಸಿಕೊಳ್ಳಲಿದೆ ಎನ್ನುವ ಮಾಹಿತಿ ಸಿಕ್ಕಿದೆ.
ಮಾರ್ಚ್ 21ರಂದು ಈ ಮೂರೂ ಗ್ರಾಮಗಳ ಭೂಮಿ ಕೈಗಾರಿಕಾ ವಲಯ ಸ್ಥಾಪನೆಗೆ ಹೋಗುತ್ತದೆ ಎಂಬ ವರದಿ ಮಾಧ್ಯಮಗಳಲ್ಲಿ ಬಿತ್ತರವಾಗಿತ್ತು ಆದರೆ ಈ ಬಗ್ಗೆ ಕನಿಷ್ಠ ಪಕ್ಷ ಎಂಎಲ್ಎ, ಗ್ರಾಮ ಪಂಚಾಯತಿಗಳಿಗೂ ಮಾಹಿತಿ ಲಭ್ಯವಿಲ್ಲ. ಆದರೆ ಇದೀಗ ಒಂದು ವಾರದಿಂದ ಮೂರೂ ಗ್ರಾಮಗಳ ಮನೆಮನೆಗೂ ನೋಟಿಸ್ ನೀಡಲಾಗುತ್ತಿದೆ. ಪರಿಣಾಮ ಈ ಗ್ರಾಮಗಳ ನಿವಾಸಿಗಳು ತಾವು ಹುಟ್ಟಿ ಬೆಳೆದ ಮನೆ, ಕಷ್ಟಪಟ್ಟು ಬೆಳೆಸಿದ ಕೃಷಿ ಭೂಮಿ ಎಲ್ಲವನ್ನೂ ತೊರೆದು ಹೋಗಬೇಕೆನ್ನುವ ವಿಚಾರ ತಿಳಿದು ಅಕ್ಷರಶಃ ಕಂಗಾಲಾಗಿದ್ದಾರೆ.