ಮಂಗಳೂರು: ಲಾರಿಯೊಂದು ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ ನಡೆದ ಘಟನೆ ಎಡಪದವು ರಾಮಮಂದಿರದ ಬಳಿ ನಡೆದಿದೆ. ಮಂಗಳೂರು ಕಡೆಯಿಂದ ಮೂಡಬಿದ್ರೆಗೆ ತೆರಳುತ್ತಿದ್ದ ಲಾರಿ ಬ್ರೇಕ್ ಫೇಲ್ ಆಗಿದ್ದು, ಚಾಲಕ ನಿಲ್ಲಿಸಲು ಆಗದೆ ಮುಂದೆ ಸಾಗಿದ್ದಾನೆ. ಸುಮಾರು 500 ಮೀಟರ್ ದೂರದ ವರೆಗೂ ಬ್ರೇಕ್ ಸಿಗದೆ ಚಾಲಕ ಲಾರಿಯನ್ನು ನಿಯಂತ್ರಿಸುವ ಪ್ರಯತ್ನ ಮಾಡಿದ್ದಾನೆ. ಆದ್ರೆ ಈ ನಡುವೆ ರಸ್ತೆಯಲ್ಲಿ ಸಿಕ್ಕ ಸ್ವಿಫ್ಟ್ ಕಾರೊಂದಕ್ಕೆ ಲಾರಿ ಡಿಕ್ಕಿ ಹೊಡೆದಿದೆ.
ಈ ಅಪಘಾತದಲ್ಲಿ ಸ್ವಿಫ್ಟ್ ಕಾರು ಸಂಪೂರ್ಣ ಜಖಂ ಗೊಂಡಿದ್ದು, ಕಾರಿನಲ್ಲಿದ್ದವರಿಗೆ ಗಾಯವಾಗಿ ಆಸ್ಪತ್ರೆ ಸೇರಿದ್ದಾರೆ. ಬಳಿಕ ಮುಂದೆ ಚಲಿಸಿದ ಲಾರಿ ಎಣ್ಣೆಯನ್ನು ಪೂರೈಕೆ ಮಾಡುತ್ತಿದ್ದ ಪಿಕ್ಅಫ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಆ ವಾಹನ ಕೂಡಾ ರಸ್ತೆಗೆ ಉರುಳಿ ಬಿದ್ದಿದ್ದು, ರಸ್ತೆಯಲ್ಲಿ ಎಣ್ಣೆ ಪ್ಯಾಕೆಟ್ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಇದೇ ವೇಳೆ ಎದುರಿನಿಂದ ಬಂದ ಟ್ಯಾಂಕರ್ ಒಂದು ಲಾರಿಯನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿ ಬಿದ್ದಿದೆ. ಬಳಿಕ ಎಡಪದವು ಪೇಟೆಯ ಬಳಿ ಬಂದಿದ್ದ ಲಾರಿ ಬಸ್ಗೆ ಡಿಕ್ಕಿ ಹೊಡೆದು ನಿಂತಿದೆ.
ಮೂಡಬಿದ್ರೆಯಿಂದ ಮಂಗಳೂರಿಗೆ ಬರುತ್ತಿದ್ದ ನಿಶ್ಮಿತಾ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು ಸಣ್ಣ ಪುಟ್ಟ ಗಾಯಗಳಾಗಿದೆ. ಮಣ್ಣಿನ ಲೋಡ್ ತೆಗೆದುಕೊಂಡ ಲಾರಿ ಇದಾಗಿದ್ದು,ಬಸ್ಗೆ ಗುದ್ದಿದ ಬಳಿಕ ನಿಂತಿದೆ. ಈ ಸರಣಿ ಅಪಘಾತದ ನಡುವೆ ಅಗರಿ ಎಂಟರ್ಪ್ರೈಸಸ್ ಎಂಬ ಅಂಗಡಿಯ ಕಟ್ಟಡಕ್ಕೂ ಹಾನಿಯಾಗಿದೆ. ಒಟ್ಟಾರೆ ಈ ಸರಣಿ ಅಪಘಾತದಿಂದ ಎಡಪದವು ಜನರು ದಿಗ್ಬ್ರಮೆಗೊಂಡಿದ್ದಾರೆ.