ಮಂಗಳೂರು: ನಗರದ ಬಿಜೈ-ಕಾಪಿಕಾಡ್ ರಸ್ತೆಯ ಲೋಟಸ್ ಆದಿತ್ಯ ಸಂಕೀರ್ಣದ ಎರಡನೇ ಮಹಡಿಯಲ್ಲಿ ಸ್ಯಾಪ್ಲಿಂಗ್ ಮಲ್ಟಿವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಕಚೇರಿಯನ್ನು ಫೆ.19ರಂದು ಸಂಜೆ ಮಂಗಳೂರು ಸ್ಮಾರ್ಟ್ಸಿಟಿ ಯೋಜನೆ ಜನರಲ್ ಮ್ಯಾನೇಜರ್ ಅರುಣ್ ಪ್ರಭಾ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ದೇಶವಿದೇಶಗಳಲ್ಲಿ ಉದ್ಯೋಗ, ಉದ್ಯಮ ನಡೆಸಿ ಸಫಲರಾಗಿದ್ದವರು, ಹುಟ್ಟೂರಿಗೆ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿರುವ ಕಾರ್ಯ ಶ್ಲಾಘನೀಯ. ಮಂಗಳೂರು ಉದ್ಯಮ ವಲಯದಲ್ಲಿ ದಿನೇದಿನೇ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲೂ ಹೆಸರು ಪಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಬೋಟ್ ಪ್ರವಾಸೋದ್ಯಮ ಗರಿಗೆದರಿದೆ. ಸಂಸ್ಥೆಯ ಉದ್ದೇಶ ಉತ್ತಮವಾಗಿರುವ ಕಾರಣ ಯಶಸ್ಸು ನಿಶ್ಚಿತ ಎಂದರು.
ಮುಖ್ಯ ಅತಿಥಿಯಾಗಿದ್ದ ಬಿಜೈ ಸೇಂಟ್ ಪ್ರಾನ್ಸಿಸ್ ಕ್ಸೇವಿಯರ್ ಚರ್ಚ್ನ ಧರ್ಮಗುರು ಜೆ.ಬಿ ಸಲ್ಡಾನ್ಹಾ ಮಾತನಾಡಿ ಕಟ್ಟಡ ನಿರ್ಮಾಣ ಮಾಡಲು ದೇವರು ವರವನ್ನು ನೀಡಲಿ. ಹಣದ ಕೊರತೆಯಾಗದಂತೆ, ಕೆಲಸ ಮಾಡಲು ಉತ್ತಮ ಆರೋಗ್ಯ ಮತ್ತು ಪ್ರಾಂಜಲ ಮನಸ್ಸು ನೀಡುವಂತೆ ಸೃಷ್ಠಿಕರ್ತನಲ್ಲಿ ಬೇಡಿಕೊಳ್ಳುತ್ತೇನೆ ಎಂದರು. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ರೋಸ್ವುಡ್ ಅರಣ್ಯಗಳಿವೆ. ರೋಸ್ ವುಡ್ ಸಸ್ಯಗಳ ಬೇರುಗಳು ಭೂಮಿಯ ಅಡಿಭಾಗಕ್ಕೆ ಇಳಿಯುವುದಿಲ್ಲ. ಆದರೆ ವಿಶಾಲವಾಗಿ ಹರಡಿಕೊಳ್ಳುತ್ತವೆ. ಇದರಿಂದಾಗಿ ಈ ಸಸ್ಯಗಳ ಜೀವಾತಾವಧಿ 200-300 ವರ್ಷಗಳಿಗೂ ಹೆಚ್ಚಿರುತ್ತದೆ. ಯಾವುದೇ ಪ್ರಾಕೃತಿಕ ವಿಕೋಪಕ್ಕೂ ಬಗ್ಗದೇ ಅವು ಬೆಳೆಯುವುದು ವಿಶೇಷ. ಅದೇರೀತಿ ತಂಡ ಸ್ಪೂರ್ತಿಯೂ ಪ್ರತಿ ಕಾರ್ಯಕ್ಕೂ ಅನಿವಾರ್ಯ. ಸ್ಯಾಪ್ಲಿಂಗ್ ಸಂಸ್ಥೆ ಸಾಮಾಜಿಕ ಬದ್ಧತೆಯೊಂದಿಗೆ ಮುನ್ನಡೆಯುತ್ತಿರುವುದು ಶ್ಲಾಘನೀಯ. ಈ ಉದ್ಯಮದಲ್ಲಿ ಸ್ಯಾಪ್ಲಿಂಗ್ ತಂಡ ಯಶಸ್ವಿಯಾಗಲಿದೆ ಎಂಬುದು ನನ್ನ ವಿಶ್ವಾಸ ಎಂದು ಆಶೀರ್ವಚನ ನೀಡಿದರು.
ಸಂಸ್ಥೆ ನಿರ್ದೇಶಕ ಆಲ್ವಿನ್ ಕ್ರಾಸ್ತಾ, ಮಾತನಾಡಿ ಪ್ರತಿ ಸಂಸ್ಥೆಗೆ ಸಾಮಾಜಿಕ ಬದ್ಧತೆ ಅಗತ್ಯ. ಸಂಸ್ಥೆ ಸ್ಥಾಪನೆ ಮೂಲಕ ಸಮಾಜದ ಸಮಸ್ಯೆಗಳನ್ನುನಿವಾರಣೆಗೆ ಮುನ್ನುಡಿಯಾಗಬೇಕು. ಮಂಗಳೂರಿನಲ್ಲಿ ಆರೋಗ್ಯ, ನಿರುದ್ಯೋಗ ಮುಂತಾದ ಸಮಸ್ಯೆಗಳಿವೆ. ಕರಾವಳಿಯ ಪ್ರತಿಭೆಗಳಿಗೆ ಸೂಕ್ತ ಉದ್ಯೋಗ ದೊರೆಯದ ಕಾರಣ ಯುವಕರು ಉದ್ಯೋಗ ಅರಸಿ ಬೇರೆ ಪ್ರದೇಶಕ್ಕೆ ಹೋಗುವಂತಾಗಿದೆ. ಸ್ಯಾಪ್ಲಿಂಗ್ ಮಲ್ಟಿವೆಂಚರ್ಸ್ ಸಂಸ್ಥೆ, ಉದ್ಯೋಗ ಸಮಸ್ಯೆ ನಿವಾರಣೆಗೆ ಕೊಡುಗೆ ನೀಡಲಿದೆ. ಸ್ಯಾಪ್ಲಿಂಗ್ ಮಲ್ಟಿವೆಂಚರ್ಸ್ ಪಡೆದ ಲಾಭದ 80 ಶೇ ಪಾಲನ್ನು ಸಮಾಜಕ್ಕೆ ಮರುನೀಡುವ ಉನ್ನತ ಧ್ಯೇಯ ಹೊಂದಿದೆ. ಈ ಮೂಲಕ ಉದ್ಯೋಗ, ಉದ್ಯಮ ಪತಿಗಳನ್ನು ಸೃಷ್ಟಿಮಾಡುವ ಉದ್ದೇಶವಿದೆ. ವಿದೇಶದಲ್ಲಿರುವ ಹಲವರು ಹುಟ್ಟೂರಿಗೆ ಮರಳಿ ಸಾಧನೆ ಮಾಡುವ ತವಕದಲ್ಲಿದ್ದಾರೆ. ಅಂತಹವರಿಗೆ ಸಂಸ್ಥೆ ಮಾರ್ಗದರ್ಶನ ನೀಡಲಿದೆ ಎಂದರು.
ಗ್ರಾಮೀಣ ಪ್ರದೇಶ ಅಭಿವೃದ್ಧಿ ಕನಸು
ಸ್ಯಾಪ್ಲಿಂಗ್ ಮಲ್ಟಿವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಉದ್ಯಮ ಸಲಹೆಗಾರ ಸಿ.ಎ. ವಲೇರಿಯನ್ ಡಾಲ್ಮೆಡಾ ಮಾತನಾಡಿ 2022ರಲ್ಲಿ ಮುಂಬೈನಲ್ಲಿ ಅಸ್ತಿತ್ವಕ್ಕೆ ಬಂದ ಸ್ಯಾಪ್ಲಿಂಗ್ ಮಲ್ಟಿವೆಂಚರ್ಸ್ ವೆಂಚರ್ಸ್ ಸಂಸ್ಥೆ 4 ಅಂಶಗಳನ್ನು ಕೇಂದ್ರೀಕರಿಸಿ ಕಾರ್ಯಾಚರಣೆ ಮಾಡುತ್ತಿದೆ. ಬಂಡವಾಳ ಹೂಡಿಕೆ, ವೆಂಚರ್ ಕ್ಯಾಪಿಟಲ್, ಆಸ್ತಿ ಅಭಿವೃದ್ಧಿ, ಇಂಟಿಗ್ರೇಟೆಡ್ ಫೆಸಿಲಿಟೀಸ್ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಬಂಡವಾಳ ಹೂಡಿಕೆ, ವೆಂಚರ್ ಕ್ಯಾಪಿಟಲ್ ಸಂಬಂಧಿ ವ್ಯವಹಾರಗಳು ಮುಂಬೈನಿಂದ ನಿರ್ವಹಿಸಲ್ಪಡುತ್ತವೆ. ಮಂಗಳೂರಿನಲ್ಲಿ ಸ್ಯಾಪ್ಲಿಂಗ್ ಮಲ್ಟಿವೆಂಚರ್ಸ್ ಸಂಸ್ಥೆ ರಿಯಲ್ ಎಸ್ಟೇಟ್ ಅಭಿವೃದ್ಧಿ, ಇಂಟಗ್ರೇಟೆಡ್ ಫೆಸಿಲಿಟೀಸ್ ಮ್ಯಾನೇಜ್ಮೆಂಟ್ ಸೇವೆ ಒದಗಿಸುತ್ತಿದ್ದೇವೆ. ರಿಯಲ್ ಎಸ್ಟೇಟ್ ಉದ್ಯಮ ಸಂಬಂಧಿಸಿ ಬಜ್ಪೆಯಲ್ಲಿ ಸನ್ ಶೈನ್ ಸ್ಯಾಪ್ಲಿಂಗ್ ಬಹು ಮಹಡಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ್ದು, 18 ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳುವ ವಿಶ್ವಾಸವಿದೆ. ನಗರದ ಹೊರ ವಲಯದ ಪ್ರಶಾಂತ ವಾತಾವರಣದಲ್ಲಿ ಸಮಗ್ರ ಮಂಗಳೂರಿನ ಅಭಿವೃದ್ಧಿಯನ್ನುದೃಷ್ಟಿಯಲ್ಲಿರಿಸಿ ನಿರ್ಮಾಣ ಯೋಜನೆ ಕೈಗೊಳ್ಳುತ್ತಿದ್ದೇವೆ. ಮಂಗಳೂರು ಹೊರವಲಯ ಅಭಿವೃದ್ಧಿ ನಮ್ಮ ಸಂಸ್ಥೆ ಗುರಿಯಾಗಿದೆ. ಕೈಗೆಟುಕುವ ದರದಲ್ಲಿ ವಸತಿ, ವಾಣಿಜ್ಯ ನಿರ್ಮಾಣಗಳನ್ನು ಜನತೆಗೆ ನೀಡುವ ಉದ್ದೇಶ ಹೊಂದಿದೆ ಎಂದರು.
ಇಂಟಿಗ್ರೇಟೆಡ್ ಫೆಸಿಲಿಟಿ ಸಂಸ್ಥೆ ವೈಶಿಷ್ಟ್ಯ:
ಮಂಗಳೂರಿನಲ್ಲಿ ಗಗನಚುಂಬಿ ಕಟ್ಟಡಗಳಿದ್ದರೂ ವಿವಿಧ ಸೌಲಭ್ಯಗಳು ಒಂದೇ ಕಡೆ ಲಭ್ಯವಿಲ್ಲ. ಹೌಸ್ಕೀಪಿಂಗ್, ಎಸ್ಎಸ್ಎಂ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಲು ಹಲವು ಸಂಸ್ಥೆಗಳ ಮೊರೆಹೋಗುವುದು ಅಗತ್ಯವಾಗಿದೆ. ಆಸ್ಪತ್ರೆ, ವಸತಿ ಸಮುಚ್ಚಯಗಳು, ಶಿಕ್ಷಣ ಸಂಸ್ಥೆಗಳಿಗೆ ಅಗತ್ಯವಾದ ಇಂಟಿಗ್ರೇಟೆಡ್ ಫೆಸಿಲಿಟಿಯನ್ನು ನಮ್ಮ ಸಂಸ್ಥೆಒದಗಿಸಲಿದೆ. ಇಂದಿನ ದಿನಗಳಲ್ಲಿ ಜನರಿಗೆ ಅಗತ್ಯವಾದ ಮಾಹಿತಿ, ಸೌಲಭ್ಯ, ಸೇವೆಗಳನ್ನು ಒದಗಿಸಲು ಡಿಜಿಟಲ್ ಮಾಧ್ಯಮ ಅನಿವಾರ್ಯವಾಗಿದ್ದು, ಅದನ್ನು ನಮ್ಮ ಕ್ವಿಕ್ ಡಿಜಿಟಲ್ ಸಂಸ್ಥೆ ಒದಗಿಸಲು ಬದ್ಧವಾಗಿದೆ. ಹಣಕಾಸು, ಕಂಪನಿ ಕಾನೂನು, ಹೂಡಿಕೆ ಕ್ಷೇತ್ರದಲ್ಲಿ ಸೇವೆ ಒದಗಿಸಲು ಸಂಸ್ಥೆ ಸಿದ್ಧವಿದೆ. ಅದೇರೀತಿ ಎನ್ಆರ್ಐಗಳಾದ ಆಲ್ವಿನ್ ಕ್ರಾಸ್ತಾ, ಪ್ರಮೀಳಾ ಕ್ರಾಸ್ವಾ ದಂಪತಿ ಹುಟ್ಟೂರಿಗೆ ಕೊಡುಗೆ ನೀಡಲು ಉತ್ಸುಕರಾಗಿದ್ದಾರೆ ಎಂದು ವಲೇರಿಯನ್ ಡಾಲ್ಮೆಡಾ ವಿವರಿಸಿದರು.
ತಂತ್ರಜ್ಞಾನದ ತವರೂರು
ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಆಯಂಡ್ ಕಾಮರ್ಸ್ ಅಧ್ಯಕ್ಷ ಡಾ. ಎಲ್ ರವೀಂದ್ರನ್ ಮಾತನಾಡಿ ವರ್ಷದ ಹಿಂದೆ ಯುಎಇ ಮತ್ತು ಭಾರತ ಸಿಪಾ ಒಪ್ಪಂದಕ್ಕೆ ಸಹಿ ಹಾಕಿದ್ದು, ಪ್ರಾದೇಶಿಕ ಸ್ಥಿರತೆ, ಅಭಿವೃದ್ಧಿಗೆ ಒಪ್ಪಂದ ಒತ್ತುನೀಡುತ್ತಿದೆ. ಡಿಗ್ಲೋಬಲೈಶೇಶನ್, ಡಿಜಿಟಲೈಶೇನ್ ಕ್ಷೇತ್ರಗಳಲ್ಲಿ ಭಾರತದಂತೆ ಬೇರೆ ದೇಶಗಳಿಗೆ ಸ್ಪರ್ಧೆ ನೀಡಲು ಸಾಧ್ಯವಿಲ್ಲ. ಭಾರತದಲ್ಲಿ ಸ್ಪರ್ಧೆ ಪರಸ್ಪರ ಪೂರಕವಾಗಿದೆ. ತಂತ್ರಜ್ಞಾನ ದೇಶದಲ್ಲಿ ಸ್ಪರ್ಧೆಯ ಸ್ವರೂಪವನ್ನೇ ಬದಲಾವಣೆ ಮಾಡಿದೆ. ಕೋವಿಡ್ ಬಳಿಕ ಸಂಶೋಧನಾ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಯಾಗಿದ್ದು, ನಿಗದಿತ ಅವಧಿಯಲ್ಲಿ ಸಂಶೋಧನೆ ಫಲ ಜನತೆಗೆ ದೊರೆಯುವಂತೆ ಮಾಡುವ ಟ್ರೆಂಡ್ ಸೃಷ್ಟಿಯಾಗಿದೆ. ಈ ನಿಟ್ಟಿನಲ್ಲಿ ಸ್ಯಾಪ್ಲಿಂಗ್ ಸಂಸ್ಥೆ ಶ್ರಮ ಸಾರ್ಥಕವಾಗಲಿದೆ ಎಂದರು.
ಸಂವಾದದಂತೆ ಭಾಸವಾಯಿತು ಎಂದ ಕೊಟ್ಟಾರಿ:
ಲೋಟಸ್ ಪ್ರಾಪರ್ಟಿ ಪಾಲುದಾದರ ಜಿತೇಂದ್ರ ಕೊಟ್ಟಾರಿ ಮಾತನಾಡಿ ಉದ್ಘಾಟನಾ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮದಂತಿರಲಿಲ್ಲ. ಮಾಹಿತಿ ಒದಗಿಸುವ ಸಂವಾದದಂತೆ ಭಾಸವಾಯಿತು. ನಮ್ಮ ಜಿಲ್ಲೆ, ರಾಜ್ಯ, ದೇಶದ ಬಗ್ಗೆ ಅರ್ಧಗಂಟೆಯಲ್ಲಿ ತಿಳಿಯುವಂತಾಯಿತು. ಸ್ಯಾಪ್ಲಿಂಗ್ ಸಂಸ್ಥೆ ಮಂಗಳೂರಿಗೆ ಪಾದಾರ್ಪಣೆ ಮಾಡಿರುವುದು ಅಭಿವೃದ್ಧಿ ದೃಷ್ಟಿಯಲ್ಲಿ ಹೊಸ ದಿಸೆಯಾಗಿದೆ. ಸ್ಯಾಪ್ಲಿಂಗ್ ಸಂಸ್ಥೆ ಲಾಭದ ಅಂಶವನ್ನು ಸಮಾಜಕ್ಕೆ ಮರು ನೀಡುವ ಧ್ಯೇಯ ಮಹೋನ್ನತ ಅಂಶ ಶ್ಲಾಘನೀಯ. ಪ್ರಾಮಾಣಿಕ, ಬದ್ಧತೆಯಿಂದ ಉದ್ಯಮ ನಡೆಸಿದಲ್ಲಿ ಮಂಗಳೂರಿನ ಜನತೆ ಖಂಡಿತ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂಬುದಕ್ಕೆ ನಮ್ಮ ಲೋಟಸ್ ಸಂಸ್ಥೆ ಉದಾಹರಣೆ ಎಂದರು. ಕಡಿಮೆ ಬಜೆಟ್ನ ಗುಣಮಟ್ಟದ ಮನೆಗಳ ನಿರ್ಮಾಣದ ಕನಸು ಈ ಸಂಸ್ಥೆ ಮೂಲಕ ನನಸಾಗಲಿ ಎಂದರು.
ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಪ್ರಮೀಳಾ ಕ್ರಾಸ್ತಾ, ನಿರ್ದೇಶಕ ಅಲ್ವಿನ್ ಕ್ರಾಸ್ತಾ , ಜನರಲ್ ಮ್ಯಾನೇಜರ್ ಫ್ಲಾಯ್ಡ್ ಮೋರಸ್ ಹಾಗೂ ಉದ್ಯಮ ಸಲಹೆಗಾರ ಸಿ.ಎ ವಲೇರಿಯನ್ ಡಾಲ್ಮೈಡಾ ಉಪಸ್ಥಿತರಿದ್ದರು. ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಮತ್ತು ಕಾಮರ್ಸ್ ಅಧ್ಯಕ್ಷ ಡಾ. ಎಲ್ ರವೀಂದ್ರನ್ ಮತ್ತು ಲೋಟಸ್ ಪ್ರಾಪರ್ಟಿಸ್ ಪಾಲುದಾರ ಜೀತೇಂದ್ರ ಕೊಟ್ಟಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.