ಮಂಗಳೂರು: ಬಜ್ಜೋಡಿಯಲ್ಲಿರುವ ಸಂದೇಶ ಫೌಂಡೇಶನ್ ಫಾರ್ ಕಲ್ಚರ್ ಮತ್ತು ಎಜುಕೇಶನ್ ಆವರಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ೯ ಮಂದಿ ಸಾಧಕರು ಹಾಗೂ ಒಂದು ಸಂಸ್ಥೆಗೆ ೨೦೨೩ನೇ ಸಾಲಿನ ಪ್ರತಿಷ್ಠಿತ ರಾಜ್ಯ ಮಟ್ಟದ ‘ಸಂದೇಶ ಪ್ರಶಸ್ತಿ’ಯನ್ನು ಮಂಗಳವಾರ ಸಂಜೆ ಪ್ರದಾನ ಮಾಡಲಾಯಿತು.
ಸಂದೇಶ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಹೆನ್ರಿ ಡಿ’ಸೋಜ ಅವರು ಅಧ್ಯಕ್ಷತೆ ವಹಿಸಿದ್ದರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಮುಖ್ಯ ಅತಿಥಿಯಾಗಿದ್ದರು. ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹ, ಉಡುಪಿ ಧರ್ಮಾಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಜೆರಾಲ್ಡ್ ಐಸಾಕ್ ಲೋಬೊ, ಸಂದೇಶ ಪ್ರತಿಷ್ಠಾನದ ನಿರ್ದೇಶಕ ವಂದನೀಯ ಸುದೀಪ್ ಪೌಲ್, ಸಂದೇಶ ಪ್ರತಿಷ್ಠಾನದ ವಿಶ್ವಸ್ಥರಾದ ರೊಯ್ ಕ್ಯಾಸ್ತಲಿನೊ ಹಾಗೂ ವಂದನೀಯ ಐವನ್ ಪಿಂಟೊ, ಸಂದೇಶ ಪ್ರಶಸ್ತಿ ಅಯ್ಕೆ ಸಮಿತಿಯ ಅಧ್ಯಕ್ಷ ಡಾ. ವಲೇರಿಯನ್ ರೋಡ್ರಿಗಸ್ ಉಪಸ್ಥಿತರಿದ್ದರು.
ಸಂದೇಶ ಪ್ರಶಸ್ತಿ ಪುರಸ್ಕೃತರ ವಿವರ
೧. ಸಂದೇಶ ಸಾಹಿತ್ಯ ಪ್ರಶಸ್ತಿ ( ಕನ್ನಡ): ರಾಘವೇಂದ್ರ ಪಾಟಿಲ್
೨. ಸಂದೇಶ ಸಾಹಿತ್ಯ ಪ್ರಶಸ್ತಿ ( ಕೊಂಕಣಿ): ಆಂಡ್ರ್ಯೂ ಎಲ್. ಡಿಕುನ್ಹಾ
೩. ಸಂದೇಶ ಸಾಹಿತ್ಯ ಪ್ರಶಸ್ತಿ (ತುಳು): ಚಿನ್ನಪ್ಪ ಗೌಡ
೪. ಸಂದೇಶ ಮಾಧ್ಯಮ ಪ್ರಶಸ್ತಿ(ಪತ್ರಿಕೋದ್ಯಮ ): ಶಿವಾಜಿ ಗಣೇಶನ್
೫. ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ: ಜೋಯ್ಸ್ ಒಝಾರಿಯೋ
೬. ಸಂದೇಶ ಕಲಾ ಪ್ರಶಸ್ತಿ: ಡಾ. ಎಮ್. ಎಸ್. ಮೂರ್ತಿ
೭. ಸಂದೇಶ ಶಿಕ್ಷಣ ಪ್ರಶಸ್ತಿ: ಕೋಟಿ ಗಾನಹಳ್ಳಿ ರಾಮಯ್ಯ
೮. ಸಂದೇಶ ವಿಶೇಷ ಪ್ರಶಸ್ತಿ: ಪ್ರೇರಣಾ ರಿಸೋರ್ಸ್ ಸೆಂಟರ್
೯. ಸಂದೇಶ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಸಬೀಹಾ ಭೂಮಿಗೌಡ
ಸಂದೇಶ ಶಿಕ್ಷಣ ಪ್ರಶಸ್ತಿ ಪುರಸ್ಕೃತ ಕೋಟಿಗಾನಹಳ್ಳಿ ರಾಮಯ್ಯ ಅವರು ಕವನ ಪ್ರಸ್ತುತ ಪಡಿಸಿದರು. ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಡಾ.ರಾಘವೇಂದ್ರ ಪಾಟೀಲ ಪ್ರತಿಕ್ರಿಯಿಸಿ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪರಿವರ್ತನೆ, ಬೆಳವಣಿಗೆ ಆದಾಗ ಸಮಾಜದಲ್ಲಿ ನಾವು ಸಾತ್ವಿಕತೆ ಹೆಚ್ಚುವುದನ್ನು ಕಾಣಲು ಸಾಧ್ಯವಾಗುತ್ತದೆ. ಸಂದೇಶ ಸಂಸ್ಥೆಯು ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಸಮಾಜದಲ್ಲಿ ಸಕಾರಾತ್ಮಕತೆ ಮತ್ತು ಒಳಿತನ್ನು ತುಂಬುವ ಮಹತ್ತರ ಕಾರ್ಯವನ್ನು ಮಾಡುತ್ತಿದೆ” ಎಂದು ಹೇಳಿದರು. “ಈ ಗೌರವ ನಾನು ಗುರುತಿಸಲ್ಪಟ್ಟ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಲು ಉತ್ಸಾಹವನ್ನು ಹೆಚ್ಚಿಸಿದೆ” ಎಂದರು.
ಮಂಗಳೂರಿನ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಮಾತನಾಡಿ, ”ಮಾನವನು ಸಮಾಜದ ಒಳಿತಿಗಾಗಿ ತನ್ನ ಆಂತರಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಅನ್ವೇಷಿಸಿ ನಿರಂತರವಾಗಿ ಶ್ರಮಿಸುತ್ತಾನೆ. ಸಂದೇಶ ಪ್ರತಿಷ್ಠಾನ, ಸಮಾಜದಲ್ಲಿ ನಿಸ್ವಾರ್ಥವಾಗಿ ತಮ್ಮ ಸಂಪನ್ಮೂಲಗಳನ್ನು ಮತ್ತು ಆಂತರಿಕ ಶಕ್ತಿಯನ್ನು ಕೊಡುಗೆಯಾಗಿ ನೀಡಿದವರನ್ನು ಗುರುತಿಸಿ ಗೌರವಿಸಿವೆ” ಎಂದು ಹೇಳಿದರು.
ಮುಖ್ಯ ಅತಿಥಿ ಡಾ.ಎಂ.ಮೋಹನ್ ಆಳ್ವ ಮಾತನಾಡಿ, “ದೇವರು ನೀಡಿದ ಕೊಡುಗೆ ಮತ್ತು ಪ್ರತಿಭೆಯನ್ನು ಧಾರಾಳವಾಗಿ ಬಳಸಿಕೊಂಡ ಈ ಮಹಾಪುರುಷರನ್ನು ಮತ್ತು ಮಹಿಳೆಯರನ್ನು ಸನ್ಮಾನಿಸಲು ನಾನು ಮುಖ್ಯ ಅತಿಥಿಯಾಗಿ ಹರ್ಷಿಸುತ್ತೇನೆ. ಬೆಳೆಯುತ್ತಿರುವ ಲೌಕಿಕ ಜೀವನ ಮತ್ತು ತಾಂತ್ರಿಕ ಪ್ರಗತಿಯ ನಡುವೆ ನಮ್ಮ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮಾಜಿಕ ಜೀವನ ಮತ್ತು ಮೌಲ್ಯಗಳು ರಾಜಿಯಾಗುತ್ತಿವೆ. ತಮ್ಮ ಕೊಡುಗೆಗಳ ಮೂಲಕ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳನ್ನು ಪೋಷಿಸುವ ಅನೇಕ ವ್ಯಕ್ತಿಗಳನ್ನು ನಾವು ಕಳೆದುಕೊಳ್ಳುವುದು ದುರದೃಷ್ಟಕರ. ಸಮಾಜಕ್ಕಾಗಿ ಅವಿಶ್ರಾಂತವಾಗಿ ಮತ್ತು ನಿಸ್ವಾರ್ಥವಾಗಿ ದುಡಿದಾಗಲೇ ಸದ್ಗುಣದ ಜೀವನ ನಡೆಸುವಲ್ಲಿ ನಿಜವಾದ ಆನಂದ ಹುದುಗಿದೆ” ಎಂದು ಹೇಳಿದರು.
ಸಂದೇಶ ಪ್ರತಿಷ್ಠಾನದ ಅಧ್ಯಕ್ಷರಾದ ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾ. ಹೆನ್ರಿ ಡಿಸೋಜ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿ, “ಪರಿಸರ, ಸೌಹಾರ್ದತೆ, ಆರೋಗ್ಯ, ಏಕತೆ, ಸೂಕ್ಷ್ಮತೆ, ಬಾಂಧವ್ಯ ಮತ್ತು ಸಹಕಾರವು ಅತ್ಯಂತ ಕಾಳಜಿಯ ವಿಷಯಗಳಾಗಿರುವ ಜಗತ್ತಿನಲ್ಲಿ ಇಂದು ನಾವು ಬದುಕುತ್ತಿದ್ದೇವೆ. ದ್ವೇಷ, ಒಡಕು, ಹಿಂಸಾಚಾರ ಇಲ್ಲದ ಸಮಾಜ ಕಟ್ಟಲು ಶ್ರಮಿಸೋಣ ಎಂದರು,
ಸಂದೇಶ ಸಂಸ್ಥೆಯಲ್ಲಿ ೧೫ ವರ್ಷಗಳ ಸುದೀರ್ಘ ಸೇವೆಗೈದ ಡೈಮಂಡ್ ಜುಬಿಲೇರಿಯನ್ಸೈ ಮನ್ ಪೀಟರ್ ಕುವೆಲ್ಲೊ ಅವರನ್ನು ಅಧ್ಯಕ್ಷ ಬಿಷಪ್ ಹೆನ್ರಿ ಡಿಸೋಜಾ ಗೌರವಿಸಿದರು.
ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾದ ಡಾ.ವಲೇರಿಯನ್ ರೋಡ್ರಿಗಸ್, ಡಾ.ನಾ.ಡಾ.ಶೆಟ್ಟಿ, ಕಾನ್ಸೆಪ್ಟಾ ಆಳ್ವ, ಚಂದ್ರಕಲಾ ನಂದಾವರ ಮತ್ತು ರಫೀಕ್ ಮಾಸ್ಟರ್ ಅವರನ್ನು ಸನ್ಮಾನಿಸಲಾಯಿತು. ಸಂದೇಶ ಸಂಸ್ಥೆಯ ಪೋಷಕರು, ಪ್ರಾಯೋಜಕರು ಹಾಗೂ ಹಿತೈಷಿಗಳನ್ನು ಸನ್ಮಾನಿಸಲಾಯಿತು.
ಸಂದೇಶ ಸಂಸ್ಥೆಯ ಸಂಚಾಲಕ ರೆ.ಫಾ.ಸುದೀಪ್ ಪಾವ್ಲ್ ಸ್ವಾಗತಿಸಿದರು. ಸಂದೇಶ ಪ್ರಶಸ್ತಿಗಳ ವಿಶ್ವಸ್ಥ, ಕಾರ್ಯಕ್ರಮದ ಸಂಚಾಲಕರಾದ ರಾಯ್ ಕ್ಯಾಸ್ಟೆಲಿನೊ ವಂದಿಸಿದರು. ಐರಿನ್ ರೆಬೆಲ್ಲೊ ಕುಲಶೇಖರ ಕಾರ್ಯಕ್ರಮ ನಿರೂಪಿಸಿದರು.
ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.