ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರಿ ಎನ್.ಪಿ.ಎಸ್.(ಹೊಸ ಪಿಂಚಣಿ ಯೋಜನೆ) ನೌಕರರ ಸಂಘದ ಒ.ಪಿ.ಎಸ್.(ಹಳೆ ಪಿಂಚಣಿ ಯೋಜನೆ) ಸಂಕಲ್ಪ ಯಾತ್ರೆ ರಥ ಬೆಳ್ತಂಗಡಿಗೆ ಸೋಮವಾರ ಆಗಮಿಸಿ, ಇಲ್ಲಿನ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಹೊಸ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿ, ಹಳೆ ಪಿಂಚಣಿ ಯೋಜನೆಯನ್ನು ಜ್ಯಾರಿಗೆ ತರುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಬೆಳ್ತಂಗಡಿ ಆಗಮಿಸಿದ ಒ.ಪಿ.ಎಸ್. ಸಂಕಲ್ಪ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷರಾದ ಶಾಂತಾರಾಮ ಅವರು, ಸರಕಾರಿ ನೌಕರರು ಸರಕಾರದ ಕೆಲಸವನ್ನು ದೇವರ ಕೆಲಸದಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲವೊಂದು ಇಲಾಖೆಯ ನೌಕರರು ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೆ. ಸಮಸ್ಯೆ ಇದ್ದರೂ ಸರಕಾರ ಯೋಜನೆಯನ್ನು ಅನುಷ್ಟಾನ ಮಾಡುವಲ್ಲಿ ನಮ್ಮ ಪಾತ್ರ ಇದೆ. ಸಿಬ್ಬಂದಿಗಳ ಕೊರತೆ ಇದೆ. ಸುಮಾರು ೭.೫೦ ಲಕ್ಷ ಹುದ್ದೆಗಳಲ್ಲಿ ಸುಮಾರು ೨.೫೦ ಲಕ್ಷ ಹುದ್ದೆಗಳು ಖಾಲಿ ಇದೆ. ದಿನದಿಂದ ದಿನಕ್ಕೆ ಸರಕಾರದ ಯೋಜನೆಗಳು ಜಾಸ್ತಿ ಆದರೂ ನೌರಕರನ್ನು ನೇಮಕ ಮಾಡುತ್ತಿಲ್ಲ. ಇರುವ ಇದೇ ಸರಕಾರಿ ನೌಕರರು ಎಲ್ಲ ಕೆಲಸವನ್ನು ಮಾಡುತ್ತಿದ್ದಾರೆ. ಸರಕಾರಗಳು ನೌಕರರಿಗೆ ಅನ್ಯಾಯ ಮಾಡಬಾರದು. ಹೊಸ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿ, ಹಳೆ ಪಿಂಚಣಿ ಯೋಜನೆಯನ್ನು ಜ್ಯಾರಿ ತರಬೇಕು. ಅಲ್ಲಿಯ ವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು.
ಪ್ರತಿಭಟನೆಯ ಬಳಿಕ ಬೆಳ್ತಂಗಡಿ ತಾಲೂಕು ಎನ್ಪಿಎಸ್ ಘಟಕದ ಪದಾಧಿಕಾರಿಗಳು ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಮ್ ಅವರ ಮೂಲ ರಾಜ್ಯ ಸರಕಾರಕ್ಕೆ ಮನವಿ ನೀಡಲಾಯಿತು.
ಸಂಕಲ್ಪ ಯಾತ್ರೆಯಲ್ಲಿ ಹಿರಿಯ ಉಪಾಧ್ಯಕ್ಷ ಸಿದ್ದಪ್ಪ ಸಂಗಣ್ಣನವರ್, ಪ್ರ. ಕಾರ್ಯದರ್ಶಿ ನಾಗನಗೌಡ, ಉಪಾಧ್ಯಕ್ಷ ಚಂದ್ರಕಾಂತ ತಳವಾರ, ಸಂ.ಕಾರ್ಯದರ್ಶಿ ದಯಾನಂದ, ಹಾಗೂ ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷ ಇಬ್ರಾಹಿಂ, ಕಾರ್ಯದರ್ಶಿ ಆದರ್ಶ ಕಟ್ಟಿನಮಕ್ಕಿ, ತಾಲೂಕು ಅಧ್ಯಕ್ಷ ಸುರೇಶ್ ಮಾಚಾರ್, ಕಾರ್ಯದರ್ಶಿ ಸೀತಾರಾಮ, ಸಂ.ಕಾರ್ಯದರ್ಶಿ ಪರಮೇಶ್, ಬೆಳ್ತಂಗಡಿ ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಜ್ ಜೈನ್, ಪ್ರೌಢಶಾಲಾ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಮ್ಮದ್ ರಿಯಾಝ್, ತಾಲೂಕು ಕಾರ್ಯದರ್ಶಿ ಶಿವಪುತ್ರ, ಪ್ರಾ. ಶಾಲಾ ಶಿಕ್ಷಕರ ಜಿಲ್ಲಾ ಕಾರ್ಯದರ್ಶಿ ವಿಮಲ್ ನೆಲ್ಯಾಡಿ, ಬೆಳ್ತಂಗಡಿ ಅಧ್ಯಕ್ಷ ಕಿಶೋರ್ ಕುಮಾರ್ ಎಚ್.ಕೆ., ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳಾದ ಡಾ.ಸಂಜತ್ ಆರ್.ಬಿ., ಡಾ.ಸುನಿಲ್, ಡಾ.ಮನೋಜ್, ತಾಲೂಕಿನ ವಿವಿಧ ಇಲಾಖೆಯ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.