ಮಂಗಳೂರು: ಅಯೋಧ್ಯೆ ರಾಮ ಮಂದಿರದಲ್ಲಿ 48 ದಿನಗಳ ಮಂಡಲೋತ್ಸವ ನೆರವೇರಿಸಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳು ಕರ್ನಾಟಕಕ್ಕೆ ವಾಪಸ್ ಆಗಿದ್ದಾರೆ. ಶ್ರೀಗಳನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಶಾಸಕ ವೇದವ್ಯಾಸ್ ಮತ್ತು ವಿಹೆಚ್ಪಿ ಮುಖಂಡರು ಸ್ವಾಗತಿಸಿದರು.
ಮಂಗಳೂರಿನಲ್ಲಿ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿ ಮಾತನಾಡಿ, ಶ್ರೀರಾಮನ ಸೇವೆ ಮಾಡಿದ್ದು ದೊಡ್ಡ ಸುಯೋಗ. ಕೃಷ್ಣೈಕ್ಯರಾದ ವಿಶ್ವೇಶ ತೀರ್ಥ ಸ್ವಾಮಿಜಿ ಅವರು ಈ ಭಾಗ್ಯ ನಮಗೆ ಕರುಣಿಸಿದ್ದಾರೆ. ಶ್ರೀರಾಮನ ನೆಲದಲ್ಲಿ ಮಾಡಿದ ಸೇವೆ ಕೃಷ್ಣನಿಗೆ ಸಮರ್ಪಣೆ. ಅಯೋಧ್ಯೆಯಲ್ಲಿ ಇದ್ದಾಗ ದೂರದ ಉತ್ತರ ಪ್ರದೇಶದಲ್ಲಿ ಇದ್ದೇವೆ ಅನಿಸಿಲ್ಲ. ಇಂದು ರಾಮನ ಸಾನಿಧ್ಯ ಮತ್ತೊಂದು ರಾಮ ಭಕ್ತರ ಸಾನಿಧ್ಯ. ಕರ್ನಾಟಕ ದಿಂದ ದಕ್ಷಿಣ ಭಾರತದ ರಾಜ್ಯಗಳಿಂದ ನಿರಂತರವಾಗಿ ಭಕ್ತರು ಬರುತ್ತಿದ್ದರು. ದೇವಾಲಯ ಪೂರ್ಣಗೊಳ್ಳಲು ಇನ್ನು ೨ ವರ್ಷಬೇಕು. ಮೋದಿಜಿ ಅವರ ಕಾಲದಲ್ಲಿ ಇಂತಹ ಬೆಳವಣಿಗೆ ಕಾಣುತ್ತಿದ್ದೆವೆ. ಧಾರ್ಮಿಕವಾಗಿ,ಸಾಂಸ್ಕೃತಿಕ ವಾಗಿ ಆರ್ಥಿಕವಾಗಿ ಸಾಮಜಿಕ ವಾಗಿ ಎಲ್ಲಾನೆಲೆಯಲ್ಲಿ ಬದಲಾವಣೆ ಕಾಣುತ್ತಿದ್ದೇವೆ. ಇಂತಹ ಸರಕಾರ ಮತ್ತೇ ಪುನಃ ದೇಶದಲ್ಲಿ ಆಡಳಿತಕ್ಕೆ ಬರಬೇಕು ಎಂದರು.
ಶ್ರೀ ಪೇಜಾವರ ವಿಶ್ವೇಶತೀರ್ಥ ಶ್ರೀಗಳು ಮತ್ತು ದೇಶದ ಬೇರೆ ಭಾಗದ ವಿದ್ಯಾಪೀಠಗಳಲ್ಲಿ ಅಧ್ಯಯನ ಮಾಡಿರುವ ವಿದ್ವಾಂಸರು ಅಯೋಧ್ಯೆ ರಾಮ ಮಂದಿರದಲ್ಲಿ ಮಂಡ ಪೂಜೆ ಮಾಡಿದರು. ಮೊದಲ 44 ದಿನ ನಿತ್ಯ ಹೋಮ, ಹವನಗಳ ಜತೆಗೆ ಕಲಾಶಾಭಿಷೇಕ, ಪ್ರತಿಮೆಗೆ ತತ್ವನ್ಯಾಸ ಇತ್ಯಾದಿ ವಿಧಿವಿಧಾನಗಳು ನಡೆದವು.
ಪ್ರತಿನಿತ್ಯ ಸಂಜೆ ಉತ್ಸವ ನಡೆಯಿತು. ಕೊನೆಯ ನಾಲ್ಕು ದಿನಗಳ ಕಾಲ ಬ್ರಹ್ಮಕಲಶಾಭಿಷೇಕದ ರೀತಿಯಲ್ಲಿ ಸಹಸ್ರ ಕಲಶಾಭಿಷೇಕ ಜರುಗಿತು. ರಾಮರಾಜ್ಯ ಪರಿಕಲ್ಪನೆಯಡಿ ಜಿಲ್ಲಾಮಟ್ಟದಲ್ಲಿ ಸಮಿತಿಗಳನ್ನು ರಚಿಸಿದ್ದು, ಈ ಅವಧಿಯಲ್ಲಿ ಆ ಸಮಿತಿಗಳು ರಾಮರಾಜ್ಯ ಪರಿಕಲ್ಪನೆಯಡಿ ಕೆಲಸ ಮಾಡಲು ಅಯೋಧ್ಯೆಗೆ ಬಂದು ಸಂಕಲ್ಪ ಮಾಡಿದವು.