ಮಂಗಳೂರು: ಅಲ್ಲಿ ಒಂದು ಕಡೆ ಸಾಮೂಹಿಕ ವಿವಾಹಕ್ಕೆ ಸಿದ್ಧರಾಗಿರೋ ಜೋಡಿ, ಅರ್ಚಕರಿಂದ ಶಾಸ್ತ್ರೋಕ್ತವಾಗಿ ನಡೆಯುತ್ತಿರೋ ಸಂಪ್ರದಾಯ. ಹೀಗೆ ಪರಿಶಿಷ್ಟ ಜಾತಿ ಜೋಡಿಗಳಿಗೆ ಹಸೆಮಣೆ ಭಾಗ್ಯ ಕಲ್ಪಿಸಿದ್ರು ನೋಡಿ ದೇಗುಲವೊಂದರ ಧರ್ಮಾಧಿಕಾರಿ. ಹೌದು ಈ ಎಲ್ಲ ದೃಶ್ಯ ಕಂಡು ಬಂದಿದ್ದು ಮಂಗಳೂರು ನಗರದಿಂದ ದೂರದಲ್ಲಿರುವ ಕಟೀಲು ಉಳೆಪಾಡಿ ಶ್ರೀ ದುರ್ಗಾಪರಮೇಶ್ವರಿ ಮಹಮ್ಮಾಯಿ ದೇವಸ್ಥಾನದಲ್ಲಿ. ಹೌದು ಕಳೆದ ಹನ್ನೆರಡಕ್ಕೂ ಅಧಿಕ ವರ್ಷಗಳಿಂದ ಕಟೀಲು ಉಳೆಪಾಡಿ ಶ್ರೀ ದುರ್ಗಾಪರಮೇಶ್ವರಿ ಮಹಮ್ಮಾಯಿ ದೇವಸ್ಥಾನದ ಧರ್ಮಧಿಕಾರಿ ಮೋಹನ್ ದಾಸ್ ಈ ರೀತಿಯಾಗಿ ತೆರೆಮರೆಯಲ್ಲಿ ಪರಿಶಿಷ್ಟ ಜಾತಿ ಪಂಗಡ ಸಮುದಾಯದ ಜೋಡಿಗಳಿಗೆ ಶಾಸ್ತ್ರೋಕ್ತ ರೀತಿಯಲ್ಲಿ ಉಚಿತ ವಿವಾಹ ಕಾರ್ಯಾ ಮಾಡುತ್ತಾ ಬಂದಿದ್ದಾರೆ.
ಈ ದೇವಾಲಯವು ಶ್ರೀಮಂತಿಕೆಯಲ್ಲಿ ಕೆಳಗಿದ್ದರೂ ಜನ ಪರ ಯೋಜನೆಯಲ್ಲಿ ಮಾದರಿ ದೇವಾಲಯವಾಗುವಂತೆ ಮಾಡಿದ್ದಾರೆ. ಈ ದೇವಾಲಯಕ್ಕೆ ಬರುವ ಹರಕೆ ಬಂಗಾರ, ಹಣದಿಂದ ಪರಿಶಿಷ್ಟ ಜಾತಿ ಪಂಗಡಗಳ ಹನ್ನಂದು ವಧು ವರರಿಗೆ ಮದುವೆ ಕಾರ್ಯ ಮಾಡುತ್ತಾ ಬಂದಿದ್ದಾರೆ. ಈ ಪೈಕಿ ಈ ವರ್ಷ ಏಳು ಜೋಡಿಗಳ ಮದುವೆ ಕಾರ್ಯವನ್ನು ಅದ್ದೂರಿಯಾಗಿ ನೆರವೇರಿಸಿದ್ದಾರೆ.
ನಮಗೆ ಸ್ವತಃ ಖರ್ಚಿನಿಂದ ಮದ್ವೆ ಕಾರ್ಯ ನೆರವೇರಿಸಲು ಸಾಧ್ಯವಿಲ್ಲ ಆದರೆ ಎಷ್ಟೋ ಶ್ರೀಮಂತ ದೇವಾಲಯದಲ್ಲಿ ಸಾಮೂಹಿಕ ವಿವಾಹಕ್ಕೆ ಅರ್ಜಿ ಹಾಕಿದ್ದೇವೆ. ಅಲ್ಲಿನ ಕೆಲವೊಂದು ನಿಯಮಗಳು ದಾಖಲೆಗಳು ನಮ್ಮ ಸಮುದಾಯದಲ್ಲಿ ಇಲ್ಲ. ಈ ಸಮಯದಲ್ಲಿ ನಮಗೆ ಬೆಳಕಾಗಿ ನಿಂತಿದ್ದೇ ಮೋಹನ್ ದಾಸ್. ಅವರ ಈ ದೇವಾಲಯದಲ್ಲಿ ನಮ್ಮ ಸಮುದಾಯದ ಜನರಿಗೆ ಉಚಿತ ಮತ್ತು ಶಾಸ್ತ್ರೋಕ್ತ ಮದುವೆ ಭಾಗ್ಯ ಒದಗಿಸಿದ್ದಾರೆ. ಅವರ ಈ ಸೇವೆಗೆ ನಾವು ಚಿರಋಣಿ. ಯಾವುದೇ ಖರ್ಚು ವೆಚ್ಚ ಇಲ್ಲದೆ ತಮ್ಮ ಸಣ್ಣ ದೇವಾಲಯದಲ್ಲಿ ಆದಾಯ ಇಲ್ಲದಿದ್ದರೂ ನಮ್ಮಂತವರ ಮದುವೆ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ಮಾಡಿಕೊಟ್ಟಿದ್ದಾರೆ ಎಂದು ನವದಂಪತಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.