ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಉಡುಪಿಯಲ್ಲಿ ನಡೆಯುವ ವಿಶ್ವ ಬಂಟರ ಸಮ್ಮೇಳನಕ್ಕೆ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಆಗಮಿಸಲಿದ್ದಾರೆ.
ಅಕ್ಟೋಬರ್ 28 ಮತ್ತು 29 ರಂದು ಉಡುಪಿಯ ಅಜ್ಜರಕಾಡು ಮೈದಾನ ಮತ್ತು ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ವಠಾರದಲ್ಲಿ ಸಮ್ಮೇಳನ ನಡೆಯಲಿದ್ದು, ಸಚಿವ ನಿತಿನ್ ಗಡ್ಕರಿ ಅವರು ಅಕ್ಟೋಬರ್ 29 ರಂದು ವಿಶ್ವಬಂಟರ ಸಮ್ಮೇಳನಕ್ಕೆ ಉಡುಪಿಗೆ ಆಗಮಿಸಲಿದ್ದಾರೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅ.28 ರಂದು ಆಗಮಿಸಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಎರಡು ದಿನಗಳ ಕಾಲ ಸಮ್ಮೇಳನ ಜರಗಲಿದ್ದು ಕೇಂದ್ರ ಸಚಿವೆ ಶೋಭಸ ಕರಂದ್ಲಾಜೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮುಂಬೈ ಸಂಸದ ಗೋಪಾಲ ಶೆಟ್ಟಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಮೊದಲಾದವರು ಭಾಗವಹಿಸಲಿದ್ದಾರೆ. ಅಲ್ಲದೆ ಬಾಲಿವುಡ್ ನಟ ಸುನಿಲ್ ಶೆಟ್ಟಿ, ರಿಷಬ್ ಶೆಟ್ಟಿ ಸಹಿತ ಸಿನಿಮಾ ತಾರೆಯರ ದಂಡು ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ ಭಾಗವಹಿಸಲಿದ್ದಾರೆ.
ವಿಶ್ವ ಬಂಟರ ಸಮ್ಮೇಳನದ ಸಮಿತಿಯಲ್ಲಿ ಅಧ್ಯಕ್ಷರಾಗಿ ಐಕಳ ಹರೀಶ್ ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ (ಉಪಾಧ್ಯಕ್ಷರು), ಜಯಕರ ಶೆಟ್ಟಿ ಇಂದ್ರಾಳಿ (ಪ್ರಧಾನ ಕಾರ್ಯದರ್ಶಿ) , ಚಂದ್ರಹಾಸ ಶೆಟ್ಟಿ ರಂಗೋಲಿ, (ಜೊತೆ ಕಾರ್ಯದರ್ಶಿ , ಸಾಂಸ್ಕೃತಿಕ ಸಂಚಾಲಕರು), ಉಳ್ತೂರು ಮೋಹನ್ ದಾಸ ಶೆಟ್ಟಿ (ಕೋಶಾಧಿಕಾರಿ), ಗಿರೀಶ್ ಶೆಟ್ಟಿ ತೆಳ್ಳಾರ್ ( ಕ್ರೀಡಾ ಸಂಚಾಲಕರು), ರೋಶನ್ ಶೆಟ್ಟಿ (ಉಪ ಸಂಚಾಲಕರು), ಕರ್ನೂರ್ ಮೋಹನ್ ರೈ (ಉಪ ಸಂಚಾಲಕರು), ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಮಂಗಳೂರು ಇದ್ದಾರೆ.