ಮಂಗಳೂರು: ಭಾರತದ ಪುರಾಣ ಅಧ್ಯಯನ ಮಾಡಿದಾಗಲೂ ದಾನಶೂರ ಕರ್ಣ ದಾನದಿಂದಲೇ ಪ್ರಸಿದ್ಧನಾಗಿದ್ದ ಎಂಬುದು ಸಾಬೀತಾಗಿದ್ದು ನಾವು ಬೇರೆಯವರಿಂದ ದಾನ ಕೇಳೋದಿಕ್ಕಿಂತ ಮುಂಚೆ ನಾವು ದಾನ ಮಾಡಿ ತೋರಿಸಬೇಕು ಎಂಬ ನಿಟ್ಟಿನಲ್ಲಿ ಪೊಲೀಸರು ಸ್ವತಃ ರಕ್ತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದರು.
ಮಂಗಳೂರು ನಗರ ಪೊಲೀಸ್ ಕೇಂದ್ರ ಉಪ ವಿಭಾಗ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ವೆನ್ ಲಾಕ್ ಆಸ್ಪತ್ರೆಯ ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಬ್ಲಡ್ ಡೋನರ್ಸ್ ಸೇವೆ ನಿಜಕ್ಕೂ ಶ್ಲಾಘನೀಯವಾಗಿದ್ದು ಇಂದಿನ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ನಾನು ರಕ್ತದಾನ ಮಾಡುವುದಾಗಿ ಘೋಷಿಸಿ ರಕ್ತದಾನ ಮಾಡಿದರು.
ಎಸಿಪಿ ಮಹೇಶ್ ಕುಮಾರ್ ಮಾತನಾಡಿ ರಕ್ತದಾನ ಪುಣ್ಯದ ಕೆಲಸವಾಗಿದ್ದು ಪೊಲೀಸರು ಯಾರಿಗಾದರೂ ರಕ್ತದ ಅವಶ್ಯಕತೆ ಇದ್ದಾಗ ಶಿಬಿರಕ್ಕೆ ಕಾಯದೆ ತಕ್ಷಣ ಆಸ್ಪತ್ರೆಗೆ ಧಾವಿಸಿ ರಕ್ತದಾನ ಮಾಡಿ ಮಾನವೀಯತೆ ಮೆರೆಯಬೇಕು ಎಂದರು.
ಡಾ. ಅಣ್ಣಯ್ಯ ಕುಲಾಲ್ ಅಂಗಾಂಗ ದಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಡಿಸಿಪಿ ಬಿ.ಪಿ. ದಿನೇಶ್ ಕುಮಾರ್, ಬ್ಲಡ್ ಡೋನರ್ಸ್ ಮಂಗಳೂರು ಅಧ್ಯಕ್ಷ ನವಾಝ್ ನರಿಂಗಾನ, ಸ್ಥಾಪಕಾಧ್ಯಕ್ಷ ಸಿದ್ದಿಕ್ ಮಂಜೇಶ್ವರ, ಕದ್ರಿ ಪೊಲೀಸ್ ಠಾಣೆಯ ಸೋಮಶೇಖರ್, ಉರ್ವ ಠಾಣೆಯ ಭಾರತಿ, ಬರ್ಕೆ ಠಾಣೆಯ ನಾಗೇಶ್, ಬಂದರು ಠಾಣೆಯ ರಾಘವೇಂದ್ರ ಬೈಂದೂರು ಹಾಗೂ ವೆನ್ ಲಾಕ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಸದಾಶಿವ ಉಪಸ್ಥಿತರಿದ್ದರು.